ನವದೆಹಲಿ :
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ನಿರೀಕ್ಷಿತ ಪ್ರದರ್ಶನದೊಂದಿಗೆ ಅಂತ್ಯವಾಗಿದೆ. ಆದಾಗ್ಯೂ ಕುತಂತ್ರಿ ಪಾಕಿಸ್ತಾನ ತಂಡದ ವಿರುದ್ಧ ಪಂದ್ಯವನ್ನಾಡಿದ್ದು, ಕೋಟ್ಯಾಂತರ ಭಾರತೀಯರು ಕೆರಳುವಂತೆ ಮಾಡಿದೆ. ವಾಸ್ತವವಾಗಿ ಏಷ್ಯಾಕಪ್ ವೇಳಾಪಟ್ಟಿ ಪ್ರಕಟವಾದಗಲೇ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ಭಾರತೀಯರು ಆಗ್ರಹಿಸಿದ್ದರು.
ಆದರೆ ಇದು ಬಹುರಾಷ್ಟ್ರೀಯ ಪಂದ್ಯಾವಳಿಯಾಗಿದ್ದ ಕಾರಣ ಟೀಂ ಇಂಡಿಯಾ ಈ ಪಂದ್ಯವನ್ನು ಆಡಲೇಬೇಕಾಯಿತು. ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಲು ಟೀಂ ಇಂಡಿಯಾ ಆಟಗಾರರಿಗೆ ಇಷ್ಟವಿಲ್ಲ ಎಂದಿದ್ದಾರೆ. ರೈನಾ ಅವರ ಹೇಳಿಕೆ ನಿಜವಾದರೆ, ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಲು ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಒತ್ತಡ ಹೇರಿತೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸಿದೆ.
ವಾಸ್ತವವಾಗಿ ಏಷ್ಯಾಕಪ್ ಆರಂಭಕ್ಕೂ ಮುನ್ನ ಕೆಲವೇ ದಿನಗಳ ಹಿಂದೆ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಲೀಗ್ ನಡೆದಿತ್ತು. ಆ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಭಾಗವಹಿಸಿತ್ತು. ಆದರೆ ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿ ಭಾರತ ತಂಡ ಪಂದ್ಯಾವಳಿಯಿಂದ ತನ್ನ ಹೆಸರನ್ನು ಹಿಂಪಡೆದುಕೊಂಡಿತ್ತು. ಆ ಸಂದರ್ಭದಲ್ಲಿ ಭಾರತ ತಂಡದ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಂತೆ ಏಷ್ಯಾಕಪ್ನಲ್ಲೂ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬುದು ಭಾರತೀಯರ ಆಗ್ರಹವಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಇದೀಗ ಈ ಪಂದ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ, ಏಷ್ಯಾಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯ ಆಡಲು ಭಾರತ ಸರ್ಕಾರದಿಂದ ಅನುಮೋದನೆ ದೊರೆತಿದೆ. ಆದಾಗ್ಯೂ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಲಾಗುವುದಿಲ್ಲ ಎಂದು ಬಿಸಿಸಿಐ ಕೂಡ ಹೇಳಿದೆ. ಆದರೆ ನಾವು ಆಡಿದ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಪಂದ್ಯಾವಳಿ ಖಾಸಗಿ ಸರಣಿ ಆಗಿತ್ತು. ಆ ಸರಣಿ ಬಿಸಿಸಿಐ ಅಡಿಯಲ್ಲಿ ಬರುವುದಿಲ್ಲ. ಈ ಕಾರಣದಿಂದಾಗಿ, ನಾವು ಪಾಕಿಸ್ತಾನದ ವಿರುದ್ಧ ಆಡದಿರುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು.
ಇನ್ನು ಏಷ್ಯಾಕಪ್ ವಿಚಾರಕ್ಕೆ ಬರುವುದಾದರೆ.. ಭಾರತೀಯ ತಂಡದ ಆಟಗಾರರನ್ನು ಪ್ರತ್ಯೇಕವಾಗಿ ಕೇಳಿದರೆ, ಯಾರೂ ಕೂಡ ಏಷ್ಯಾಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದಕ್ಕೆ ಒಪ್ಪುವುದಿಲ್ಲ ಎಂದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ಬಿಸಿಸಿಐ ಇದನ್ನು ಅನುಮೋದಿಸಿರುವುದರಿಂದ ಮತ್ತು ಇದು ಎಸಿಸಿ ಟೂರ್ನಮೆಂಟ್ ಕೂಡ ಆಗಿರುವುದರಿಂದ ಇದು ಆಟಗಾರರಿಗೆ ಕಡ್ಡಾಯವಾಗಿದೆ. ಇನ್ನು ವೈಯಕ್ತಿಕವಾಗಿ ಟೀಂ ಇಂಡಿಯಾ ಪಾಕಿಸ್ತಾನದೊಂದಿಗೆ ಆಡಬೇಕಾಗಿ ಬಂದಿರುವುದು ಬೇಸರ ತಂದಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.








