ನೆಹರೂ ಮಾತುಗಳನ್ನು ಸ್ಮರಿಸಿದ ಜೋಹ್ರಾನ್ ಮಮ್ದಾನಿ……!

ನ್ಯೂಯಾರ್ಕ್‌: 

    ಐತಿಹಾಸಿಕ ವಿಜಯದ ಬಳಿಕ ನ್ಯೂಯಾರ್ಕ್ ನಗರದ ಹೊಸ ಮೇಯರ್  ಜೋಹ್ರಾನ್ ಮಮ್ದಾನಿ  ಅವರು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಿದರು. ಈ ವೇಳೆ ಅವರು ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು  ಅವರ ಹಳೆಯದರಿಂದ ಹೊಸದಕ್ಕೆ ಚಲಿಸುವ ದೃಷ್ಟಿಕೋನದ ಕುರಿತಾದ ಮಾತುಗಳನ್ನು ನೆನಪಿಸಿಕೊಂಡರು. ತಮ್ಮ ಮೊದಲ ಭಾಷಣದಲ್ಲಿ ಅವರು ನ್ಯೂಯಾರ್ಕ್ ನಗರವು ಸ್ಪಷ್ಟತೆ, ಧೈರ್ಯ ಮತ್ತು ದೃಷ್ಟಿಕೋನವನ್ನು ಬೇಡುವ- ಕ್ಷಮಿಸಿಲ್ಲಎಂಬ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದು ತಿಳಿಸಿದ್ದಾರೆ.

   ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಗೊಂಡ ಜೋಹ್ರಾನ್ ಮಮ್ದಾನಿ ಅವರು ತಮ್ಮ ಐತಿಹಾಸಿಕ ಗೆಲುವಿನ ಅನಂತರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸಿದರು. 

   ಹರ್ಷೋದ್ಗಾರ ಮಾಡುತ್ತಿದ್ದ ಜನಸಮೂಹದ ಮುಂದೆ ನಿಂತ ಜೋಹ್ರಾನ್ ಮಮ್ದಾನಿ, ನಿಮ್ಮ ಮುಂದೆ ನಿಂತಾಗ ನನಗೆ ಜವಾಹರಲಾಲ್ ನೆಹರು ಅವರ ಮಾತುಗಳು ನೆನಪಾಗುತ್ತಿವೆ. ಒಂದು ಯುಗ ಕೊನೆಗೊಂಡಾಗ ದೀರ್ಘಕಾಲದಿಂದ ಕಟ್ಟಿಹಾಕಲ್ಪಟ್ಟಿದ್ದ ರಾಷ್ಟ್ರದ ಆತ್ಮವು ಮಾತನಾಡುವ ಒಂದು ಕ್ಷಣ ಇತಿಹಾಸದಲ್ಲಿ ಅಪರೂಪದಲ್ಲಿ ಬರುತ್ತದೆ. ಇಂದು ನ್ಯೂಯಾರ್ಕ್ ಅದನ್ನೇ ಮಾಡಿದೆ ಎಂದು ಹೇಳಿದರು.

   ಭಾರತೀಯ ಮೂಲದ ಪ್ರಜಾಸತ್ತಾತ್ಮಕ ಸಮಾಜವಾದಿಯಾಗಿರುವ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ 111ನೇ ಮೇಯರ್ ಮತ್ತು ಮೊದಲ ಮುಸ್ಲಿಂ ನಾಯಕ. ಇವರು ಸ್ವತಂತ್ರ ಅಭ್ಯರ್ಥಿ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಭಾರಿ ಮತಗಳ ಸೋಲಿಸಿದರು.

   ಐತಿಹಾಸಿಕ ಗೆಲುವಿನ ಬಳಿಕ ಮೊದಲ ಬಾರಿಗೆ 30 ನಿಮಿಷಗಳಿಗಿಂತ ಕಡಿಮೆ ಅವಧಿಯ ಭಾಷಣ ಮಾಡಿದ ಮಮ್ದಾನಿ, ಚುನಾವಣಾ ಪೂರ್ವದಲ್ಲಿ ಹೇಳಿರುವ ಭರವಸೆಗಳ ಬಗ್ಗೆ ಪುನರುಚ್ಚರಿಸಿದರು. ಇದರಲ್ಲಿ ಉಚಿತ ಮಕ್ಕಳ ಆರೈಕೆ, ಉಚಿತ ಬಸ್‌ಗಳು, ಬಾಡಿಗೆ ನಿಯಂತ್ರಿತ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರಿಗೆ ಬಾಡಿಗೆ ಫ್ರೀಜ್, ಕೈಗೆಟುಕುವ ದರದಲ್ಲಿ ವಸತಿ ಮತ್ತು ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸುವ ಕ್ರಮಗಳು ಸೇರಿವೆ. ತಮ್ಮ ಅಭಿಯಾನಕ್ಕೆ ಶಕ್ತಿ ತುಂಬಿದ ವೈವಿಧ್ಯಮಯ ಗುಂಪುಗಳಿಗೆ ಸಹಾಯ ಮಾಡುವುದಾಗಿಯೂ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

   ಮಮ್ದಾನಿ ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಈ ಕತ್ತಲೆಯ ಕ್ಷಣದಲ್ಲಿ ನ್ಯೂಯಾರ್ಕ್ ಬೆಳಕಾಗಿರುತ್ತದೆ ಎಂದು ಹೇಳಿದರು. ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಅವರಿಗೆ ಜನ್ಮ ನೀಡಿದ ನಗರವು ಅವರನ್ನು ಸೋಲಿಸಬಹುದು. ನಾವು ಈಗ ಪುನರ್ಜನ್ಮ ಪಡೆದ ನಗರದ ಗಾಳಿಯನ್ನು ಉಸಿರಾಡುತ್ತಿದ್ದೇವೆ ಎಂದು ತಿಳಿಸಿದರು. 

   ಮಮ್ದಾನಿ ಅವರ ಭಾಷಣಕ್ಕೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಪ್ರತಿಕ್ರಿಯಿಸಿದ್ದು, ನಾನು ಜವಾಹರಲಾಲ್ ನೆಹರು ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತೇನೆ. ಪಂಡಿತ್ ನೆಹರು ಅವರ ಟ್ರಿಸ್ಟ್ ವಿತ್ ಡೆಸ್ಟಿನಿ ಭಾಷಣದ ಪದಗಳನ್ನು ಆಧುನಿಕ ಭಾರತದ ಶಿಲ್ಪಿಯನ್ನು ಗೌರವಿಸಲು ಬಳಸುತ್ತಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿ, ನೆಹರು ಅವರ ಮಾತುಗಳನ್ನು ಅಲೆಕ್ಸ್ ಸಾಲ್ಮಂಡ್ ಅವರು 2013ರಲ್ಲಿ ಸ್ಕಾಟ್ಲೆಂಡ್‌ನ ಸ್ವಾತಂತ್ರ್ಯಕ್ಕಾಗಿ ತಮ್ಮ ಅಭಿಯಾನದಲ್ಲಿ ಬಳಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link