ಬೆಂಗಳೂರು:
ರಾಜಧಾನಿಯಲ್ಲಿ ಕಸದ ನಿರ್ವಹಣೆ ತಲೆನೋವಾಗಿದೆ. ಮನೆಮನೆಯ ಮುಂದೆ ಜಿಬಿಎಯ ಗಾಡಿ ಬಂದರೂ ಜನ ಅದಕ್ಕೆ ಕಸ ಕೊಡದೆ ಮೋರಿಗೆಸೆಯುವುದು, ಬೀದಿ ಬದಿ ಎಸೆಯುವುದು ಮಾಡುತ್ತಿದ್ದರು, ಇದನ್ನು ತಡೆಗಟ್ಟಲು ಜಿಬಿಎ ಸಿಬ್ಬಂದಿ ಅಂಥವರ ಮನೆ ಮುಂದೆಯೇ ಕಸ ಹಾಕಿ ದಂಡ ಹಾಕಿದ್ದ ಘಟನೆ ನಡೆದಿತ್ತು. ಇದೀಗ ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ರೂ. ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಹೊಸ ನಿಯಮ ಜಾರಿ ತಂದಿದೆ.
ಈ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಾರ್ವಜನಿಕರಿಗೆ ಕರೆ ನೀಡಿದ್ದು, ಕಸ ಸುಡುತ್ತಿರುವ ವಿಡಿಯೋ ಹಂಚಿಕೊಳ್ಳಲು ಕರೆ ನೀಡಿದೆ. ಕಸವನ್ನು ಸಂಸ್ಕರಣ ಘಟಕಕ್ಕೆ ಕಳುಹಿಸಿ, ಅದರಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಸುಡದಂತೆ ಎಚ್ಚರವಹಿಸಿ, ನಿಯಮ ಉಲ್ಲಂಘಿಸಿದ್ರೆ ದಂಡ ವಿಧಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣಾ ಇಲಾಖೆ ತಿಳಿಸಿದೆ.
ಈ ಮೊದಲು ಎಲ್ಲೆಂದರಲ್ಲಿ ಕಸ ಎಸೆದವರ ವಿಡಿಯೋ- ಫೋಟೋ ಮಾಡಿಕೊಂಡು ಅಂಥವರ ಮನೆ ಮುಂದೆಯೇ ಜಿಬಿಎ ಸಿಬ್ಬಂದಿ ಕಸ ಸುರಿದಿದ್ದರು. ಎರಡನೇ ಬಾರಿಗೆ ಭಾರಿ ದಂಡ ವಿಧಿಸಿದ್ದರು. ಕಸ ಸುಟ್ಟರೆ ಉಂಟಾಗುವ ವಾಯುಮಾಲಿನ್ಯ ತಡೆಯಲು ಹೊಸ ನಿಯಮ ಜಾರಿ ಮಾಡಿದ್ದು, ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಒಂದು ಲಕ್ಷ ರೂ.ವರೆಗೂ ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧರಿಸಿದೆ.








