ದೋಹಾ:
ಒಮಾನ್ ಎ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಎ ತಂಡ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ ವಿರುದ್ಧದ ಹಿಂದಿನ ಸೋಲಿನಿಂದ ತಂಡವು ಬಲವಾಗಿ ಚೇತರಿಸಿಕೊಂಡು ಮತ್ತೆ ಗೆಲುವಿನ ಹಳಿಗೆ ಮರಳಿತು. ಬಿ ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ ಸೆಮಿ ಪ್ರವೇಶಿಸಿದೆ. ಎ ಗುಂಪಿನ ತಂಡಗಳು ಇನ್ನಷ್ಟೆ ಖಚಿತವಾಗಬೇಕಿದೆ. ಈ ಗುಂಪಿನಲ್ಲಿ ಸದ್ಯ ಬಾಂಗ್ಲಾ ಅಗ್ರಸ್ಥಾನದಲ್ಲಿದ್ದು, ಶ್ರೀಲಂಕಾ ದ್ವಿತೀಯ ಸ್ಥಾನದಲ್ಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ ತಂಡ ಭಾರತ ಎ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ 20 ಓವರ್ಗಳಲ್ಲಿ ಏಳು ವಿಕೆಟ್ಗಳಿಗೆ 135 ರನ್ಗಳಿಗೆ ಸೀಮಿತವಾಯಿತು. ಸಣ್ಣ ಮೊತ್ತವಾದರೂ ಭಾರತ ಕೂಡ ಈ ಚೇಸಿಂಗ್ ವೇಳೆ ಪರದಾಟ ನಡೆಸಿ ಅಂತಿಮವಾಗಿ ಗೆಲುವಿನ ದಡ ಸೇರಿತು. ಹರ್ಷ್ ದುಬೆ ಅವರ ಅಜೇಯ 53 ರನ್ಗಳ ಸಾಹಸದಿಂದ 17.5 ಓವರ್ಗಳಲ್ಲಿ 138 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಭಾರತ ಪರ ಬೌಲಿಂಗ್ನಲ್ಲಿ ಸುಯಾಶ್ ಶರ್ಮಾ ನಾಲ್ಕು ಓವರ್ಗಳಲ್ಲಿ 12 ರನ್ಗಳಿಗೆ 2 ವಿಕೆಟ್ಗಳನ್ನು ಕಬಳಿಸಿದರೆ, ಗುರ್ಜಪ್ನೀತ್ ಸಿಂಗ್ ಕೂಡ ಎರಡು ವಿಕೆಟ್ಗಳನ್ನು ಕಿತ್ತರು. ಒಮಾನ್ ಪರ ವಾಸಿಂ ಅಲಿ ಅಜೇಯ 54 ರನ್ ಬಾರಿಸಿ ತಂಡಕ್ಕೆ ನೆರವಾದರು. ಆದರೆ ಇವರಿಗೆ ಇತರ ಸದಸ್ಯರಿಂದ ಉತ್ತಮ ಸಾಥ್ ಸಿಗಲಿಲ್ಲ.
ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ ಆ ಬಳಿಕ ಆಡಿದ ಎರಡೂ ಪಂದ್ಯಗಳಲ್ಲಿಯೂ ಅಲ್ಪ ಮೊತ್ತಕ್ಕೆ ಸೀಮಿತರಾದರು. ನಾಯಕ ಜಿತೇಶ್ ಶರ್ಮ ಅವರಿಂದಲೂ ಇದುವರೆಗೆ ದೊಡ್ಡ ಇನಿಂಗ್ಸ್ ಮೂಡಿ ಬಂದಿಲ್ಲ. ಸೆಮಿ ಪಂದ್ಯದಲ್ಲಿ ಇವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.
ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದು ಬಂದ ಹರ್ಷ್ ದುಬೆ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಸಂಯಮ ಮತ್ತು ಕ್ಲೀನ್ ಸ್ಟ್ರೈಕಿಂಗ್ ಪ್ರದರ್ಶಿಸಿದ ಅವರು 44 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಇದು ಟಿ20 ಕ್ರಿಕೆಟ್ನಲ್ಲಿ ಅವರ ಮೊದಲ ಅರ್ಧಶತಕ. ನೆಹಾಲ್ ವಾಧೇರಾ 24 ಎಸೆತಗಳಲ್ಲಿ 23 ರನ್ ಗಳಿಸಿ, ಸ್ಥಿರವಾದ ಪಾಲುದಾರಿಕೆಯನ್ನು ಒಟ್ಟುಗೂಡಿಸಿ ಭಾರತ ಎ ತಂಡವನ್ನು 17.5 ಓವರ್ಗಳಲ್ಲಿ ಸುಲಭವಾಗಿ ಗುರಿಯನ್ನು ದಾಟಿಸಲು ನೆರವಾದರು.








