ಬೆಂಗಳೂರು : ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ!

ಬೆಂಗಳೂರು :

    ನವವಿವಾಹಿತ ಮಹಿಳೆಯೊಬ್ಬರು ಹನಿಮೂನ್ ಮೊಟಕುಗೊಳಿಸಿ ಮನೆಗೆ ವಾಪಸ್ ಆಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಿನ್ನೆ ವರದಿಯಾಗಿತ್ತು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಐಶ್ವರ್ಯಾ ಅವರು ಒಂದು ತಿಂಗಳ ಹಿಂದೆ ಬಾಬಣ್ಣ ಲೇಔಟ್‍ ನಿವಾಸಿ ಲಿಖಿತ್ ಅವರನ್ನು ಮದುವೆ ಆಗಿದ್ದರು. ಐಶ್ವರ್ಯಾ ಅವರು ಎಂಬಿಎ ಓದಿದ್ದರು. ಲಿಖಿತ್ ಡಿಪ್ಲೊಮಾ ಓದಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇದೀಗ ಐಶ್ವರ್ಯ ಸಾವಿಗೆ ಪತಿ ಹಾಗೂ ಕುಟುಂಬಸ್ಥರು ಕಾರಣ ಎಂದು ಆಕೆಯ ಮನೆಯವರು ದೂರಿದ್ದಾರೆ.

    ಕಳೆದ ಅಕ್ಟೋಬರ್ 29ರಂದು ಲಿಖಿತ್‌ ಎಂಬಾತನ ಜೊತೆ ಯುವತಿ ಮದುವೆ ಆಗಿತ್ತು, ಮದುವೆಯಾಗಿ ಬಹುತೇಕ ಒಂದು ತಿಂಗಳ ನಂತರ ಗಂಡನ ಮನೆಯವರ ಬೇಡಿಕೆಯಂತೆ ಸುಮಾರು 40 ಲಕ್ಷ ಖರ್ಚು ಮಾಡಿ ನವೆಂಬರ್ 23 ರಂದು ಪ್ಯಾಲೇಸ್ ಗ್ರೌಂಡ್ಸ್​​ನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಮಾಡಿದ್ದರು. ನಂತರ ನವದಂಪತಿಗಳು ಹತ್ತು ದಿನಗಳ ಕಾಲ ಶ್ರೀಲಂಕಾಗೆ ಹನಿಮೂನ್ ಹೋಗಿದ್ದರು. ಆದರೆ ಇನ್ನೂ ಐದು ದಿನ ಇರುವಾಗಲೇ ಅರ್ಧದಲ್ಲೇ ಇಬ್ಬರು ವಾಪಸ್​​ ಬಂದಿದ್ದರು. ಬಳಿಕ ಲಿಖತ್‌, ಐಶ್ವರ್ಯ ಕುಟುಂಬಸ್ಥರ ಬಳಿ ಆಕೆಯನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದರು.

   ಹನಿಮೂನ್​​ನಿಂದ ಅರ್ಧಕ್ಕೆ ವಾಪಸ್​​ ಬಂದಿದ್ದ ನವವಿವಾಹಿತೆ ಗಂಡನ ಮನೆ ಬಿಟ್ಟು ತವರು ಮನೆಗೆ ವಾಪಸ್​​ ಬಂದಿದ್ದಳು. ಆದ್ರೆ ಬುಧವಾರ ಮಧ್ಯಾಹ್ನ ನೇಣಿಗೆ ಶರಣಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಐಶ್ವರ್ಯಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲಿಖಿತ್ ಮತ್ತು ಕುಟುಂಬ ಸದಸ್ಯರು ತವರು ಮನೆಯಿಂದ ಹಣ ಹಾಗೂ ಚಿನ್ನಾಭರಣ ತರುವಂತೆ ಐಶ್ವರ್ಯಾ ಅವರಿಗೆ ಕಿರುಕುಳ ನೀಡುತ್ತಿದ್ದರು.

    ಲಿಖಿತ್, ಸಣ್ಣಪುಟ್ಟ ವಿಚಾರಕ್ಕೂ ಪತ್ನಿಯೊಂದಿಗೆ ಜಗಳವಾಡಿ ನಿಂದಿಸುತ್ತಿದ್ದರು. ಇದೀಗ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ, ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 (ಕೊಲೆ), 80 (ವರದಕ್ಷಿಣೆ ಸಾವು), ಮತ್ತು 85 (ಗಂಡ ಅಥವಾ ಗಂಡನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Recent Articles

spot_img

Related Stories

Share via
Copy link