
ಗುಬ್ಬಿ: ಐದು ಬಾರಿ ಶಾಸಕರಾಗಿ ಒಂದು ಬಾರಿ ಕಾಂಗ್ರೆಸ್ ಜಿಪಂ ಸದಸ್ಯರಾಗಿ ತಾಲ್ಲೂಕಿನ ಅಭಿವೃದ್ದಿಗೆ ಸಾಕಷ್ಟು ದುಡಿದು, ಈ ಹಿಂದೆ ಸಮ್ಮಿಶ್ರ ಸರ್ಕಾರ ನಡೆದಾಗ ಸಚಿವರಾಗಿ ಅನುಭವ ಇರುವ ಎಸ್.ಆರ್.ಶ್ರೀನಿವಾಸ್ ಅವರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವಂತೆ ಒಕ್ಕಲಿಗ ಮುಖಂಡ ಬೀರಮಾರನಹಳ್ಳಿ ನರಸೇಗೌಡ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಒಕ್ಕಲಿಗ ನಾಯಕರಾಗಿ ಕೆ.ಲಕ್ಕಪ್ಪ ಹಾಗೂ ವೈ.ಕೆ.ರಾಮಯ್ಯ ನಂತರದಲ್ಲಿ ಒಕ್ಕಲಿಗ ನಾಯಕತ್ವ ಕೊರತೆ ನೀಗಿಸುವಲ್ಲಿ ವಾಸಣ್ಣ ಮುಂಚೂಣಿಯಲ್ಲಿದ್ದಾರೆ. ಸಚಿವ ಸ್ಥಾನ ನೀಡುವ ಭರವಸೆ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಎಸ್.ಆರ್.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಂದ ದೊರೆಯುವ ನಂಬಿಕೆ ಇದೆ ಎಂದರು.
ಮಾಧ್ಯಮದ ಮಾಹಿತಿ ಪ್ರಕಾರ ಸಿದ್ದರಾಮಯ್ಯನವರ ರಾಜೀನಾಮೆ ಹಾಗೂ ಡಿ.ಕೆ.ಶಿವಕುಮಾರ್ ರವರಿಗೆ ಸಿಎಂ ಪಟ್ಟ ಎಂಬ ನಿರೀಕ್ಷೆಯಲ್ಲಿ ಸಚಿವ ಸ್ಥಾನ ಜಿಲ್ಲೆಯಲ್ಲಿ ಒಕ್ಕಲಿಗ ಸಮಾಜದ ಸಮರ್ಥ ನಾಯಕರಾಗಿ ಗುರುತಿಸಿಕೊಂಡ ವಾಸಣ್ಣ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೇಮಿಸಿದ್ದಲ್ಲಿ ಜಿಲ್ಲೆಯ ಜನತೆಗೆ ಹಾಗೂ ಒಕ್ಕಲಿಗ ಸಮಾಜದ ಅಭಿವೃದ್ದಿಗೆ ಮಾನ್ಯತೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಾಧಾನ್ಯತೆ ಅನುಸಾರ ವಾಸಣ್ಣ ಮೊದಲ ಆಯ್ಕೆಯಾಗಿ ಸಚಿವರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.








