
ಮೈಸೂರು: ದೇಶದ ಸಂಸ್ಕöÈತಿ ರಕ್ಷಿಸುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ. ಇದನ್ನು ದೇಶದ ಜನರೇ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೇವಲ ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಯದುವೀರ್ ಒಡೆಯರ್ ಟೀಕಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ 12 ವರ್ಷ ಸುದೀರ್ಘ ಸೇವೆ ಮಾಡಿದ್ದಾರೆ. ಈಗಲೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡಲು ಮೋದಿ ಅಡಿಗಲ್ಲು ಹಾಕಿದರು. ಮೋದಿ ಪ್ರಧಾನಿಯಾಗುವ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಇದೀಗ ಆರ್ಥಿಕತೆಯಲ್ಲಿ ದೇಶ ಮುಂದಿದೆ. ವಿದೇಶಿ ಕಂಪನಿಗಳು ಭಾರತಕ್ಕೆ ಬರುತ್ತಿವೆ ಎಂದರು.
25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ದೇಶಾದ್ಯಂತ ಬಡವರ ಸಂಖ್ಯೆ ಶೇ.29 ದಿಂದ ಶೇ.11ಕ್ಕೆ ಇಳಿಕೆಯಾಗಿದೆ. ಇದು ಮೋದಿ ಸರ್ಕಾರದ ಸಾಧನೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಪ್ರತಿ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ ಹಣ ಹೋಗುತ್ತಿದೆ. 4.5 ಲಕ್ಷ ಕೋಟಿ ಇದಕ್ಕೆ ವಿನಿಯೋಗ ಆಗುತ್ತಿದೆ. ಮಹಿಳೆಯರ ಸ್ವ ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. ಯುವಕರಿಗೆ ಸ್ಕಿಲ್ ತರಬೇತಿ ಕೊಡಲಾಗುತ್ತಿದೆ. ದೇಶೀಯ ಗುಣಮಟ್ಟದ ಉತ್ಪನ್ನಗಳಿಗೆ ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಮಟ್ಟದ ಗೌರವ ಸಿಗುತ್ತಿದೆ. ಇದೆಲ್ಲವೂ ಕೂಡ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು” ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ದೇಶದ ಜನರ ಕನಸನ್ನು ಮೋದಿ ನನಸು ಮಾಡಿದರು. ಈ ಮೂಲಕ 500 ವರ್ಷಗಳ ವಿವಾದವನ್ನು ಬಗೆಹರಿಸಿದರು. ಯೋಗವನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು. ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಿದರು. ಇದೆಲ್ಲವೂ ಮೋದಿ ಸರ್ಕಾರದ ಕೊಡುಗೆಯಾಗಿದೆ ಎಂದು ವಿವರಿಸಿದರು.
ದೇಶದಿಂದ ನಕ್ಸಲಿಸಂ ಕಿತ್ತು ಹಾಕಲಾಗಿದೆ. 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ದೇಶದಲ್ಲಿ ಇದೀಗ ಜನಗಣತಿ, ಜಾತಿಗಣತಿ ಆಗುತ್ತಿದೆ. ಅದಕ್ಕಾಗಿ ನಾವು ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಮೋದಿ ಅವರ ಆಶಯದಂತೆ ನಾವೂ ಕೂಡ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ಸಿದ್ದರಾಮಯ್ಯನವರಿಂದ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ: ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಬರೀ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ನೂತನ ಸಿಎಂ ಡಿ.ಕೆ. ಶಿವಕುಮಾರ್ ಆದರೂ ಸಕಾರಾತ್ಮಕವಾಗಿ ಸ್ಪಂದಿಸಲಿ. ಸಿದ್ದರಾಮಯ್ಯನವರು ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಭಾಗಿಯಾಗಲಿಲ್ಲ. ಕಾವೇರಿ ಜಲವಿವಾದದ ವಿಚಾರದಲ್ಲೂ ಚಕಾರ ಎತ್ತಲಿಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಸಿಎಂ ವಿಜಯ್ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಮಳೆ ಪ್ರಮಾಣಕ್ಕೆ ತಕ್ಕಂತೆ ತಮಿಳುನಾಡಿಗೆ ನೀರು ಹರಿಸುವಂತಾಗಬೇಕು ಎಂದರು.








