
ಶಿವಮೊಗ್ಗ : ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಮ್ಮ ಹೋರಾಟ ಕೇವಲ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಸೀಮಿತವಾಗಿಲ್ಲ. ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣ ಸಂಪೂರ್ಣವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗೆ ವಾಪಸ್ ಜಮೆಯಾಗಬೇಕು. ಈ ಅಕ್ರಮದ ಹಿಂದೆ ಇರುವ ದೊಡ್ಡ ದೊಡ್ಡ ತಿಮಿಂಗಿಲಗಳ ಮುಖವಾಡ ಕಳಚಿ, ಸತ್ಯ ಸಂಪೂರ್ಣವಾಗಿ ಬಹಿರಂಗವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಪ್ರಕರಣದಲ್ಲಿ 185 ಕೋಟಿಯ ಹಣದ ಸಂಪೂರ್ಣ ಲೆಕ್ಕ ಇನ್ನೂ ಸಿಕ್ಕಿಲ್ಲ. ಜಾರಿ ನಿರ್ದೇಶನಾಲಯದ ತನಿಖೆ ಹಾಗೂ ಅದರ ಪ್ರಕಟಣೆಯಲ್ಲಿ ಚಿನ್ನ ಖರೀದಿ, ಮದ್ಯ ಖರೀದಿ, ಬಾರ್ಗಳ ಬಿಲ್ಗಳು ಸೇರಿದಂತೆ ಹಣದ ದುರ್ಬಳಕೆಯ ಹಲವು ಅಂಶಗಳು ಬಹಿರಂಗವಾಗಿವೆ. ಹೀಗಾಗಿ ಈ ಹಣ ಎಲ್ಲಿಗೆ ಹೋಗಿದೆ? ಯಾರ ಪಾಲಾಗಿದೆ? ಇದರ ಹಿಂದೆ ಯಾರಿದ್ದಾರೆ? ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು.
ಸಚಿವರ ರಾಜೀನಾಮೆ ಒಂದು ವಿಚಾರವಾದರೆ, ನಿಗಮದ ಹಣವನ್ನು ವಾಪಸ್ ತಂದು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಬಳಸುವುದು ಇನ್ನೂ ಮುಖ್ಯವಾದ ವಿಚಾರ. ?185 ಕೋಟಿ ಸಂಪೂರ್ಣವಾಗಿ ನಿಗಮದ ಖಾತೆಗೆ ಜಮೆಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳು ಭಾಗಿಯಾಗಿವೆ ಎಂದು ನಾವು ಹಿಂದೆಯೇ ಹೇಳಿದ್ದೇವೆ. ಕಾಂಗ್ರೆಸ್ ಹೈಕಮಾಂಡ್ಗೂ ಕಪ್ಪ ಕಾಣಿಕೆ ಸಲ್ಲಿಕೆಯಾಗಿದೆ ಎಂಬ ವಿಚಾರವೂ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ಯಾರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ನಾಗೇಂದ್ರ ಅವರಿಗೆ ಕ್ಲೀನ್ಚಿಟ್ ಸಿಗದಿದ್ದರೂ ಸಂಪುಟಕ್ಕೆ ಮರುಸೇರ್ಪಡೆ ಏಕೆ?
ಮಾಜಿ ಸಚಿವ ನಾಗೇಂದ್ರ ಅವರಿಗೆ ಪ್ರಕರಣದಿಂದ ಸಂಪೂರ್ಣ ಕ್ಲೀನ್ಚಿಟ್ ಸಿಕ್ಕಿದೆ ಎಂಬುದು ಎಲ್ಲಿಯೂ ಸ್ಪಷ್ಟವಾಗಿಲ್ಲ. ಹಾಗಿದ್ದರೂ ತರಾತುರಿಯಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯವೇನಿತ್ತು? ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಆಸಕ್ತಿ ಇರಲಿಲ್ಲ ಎಂಬ ಚರ್ಚೆಯೂ ಇದೆ.
ಹಾಗಾದರೆ ಮುಖ್ಯಮಂತ್ರಿಗಳ ಮೇಲೆ ಯಾರ ಒತ್ತಡವಿತ್ತು? ಆ ಒತ್ತಡ ಕಾಂಗ್ರೆಸ್ ಹೈಕಮಾಂಡ್ನಿAದಲೇ ಬಂದಿತೇ? ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ನ ಪಾತ್ರವೂ ಇದೆಯೇ ಎಂಬ ಅನುಮಾನಗಳಿಗೆ ತನಿಖೆಯ ಮೂಲಕ ತೆರೆ ಬೀಳಬೇಕು.








