ಬೆಂಗಳೂರು
ಪರಿಸರವನ್ನು ಉಳಿಸಲು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದ ವಿಶ್ವೇಶ್ವರಪುರಂನ ವಾಣಿ ವಿಲಾಸ್ ರಸ್ತೆಯ ವಿವಿಎನ್ ಪಿಯುಸಿ ಕಾಲೇಜಿನ ಮಾರುತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ, ಅಭಿನವ-2018 ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಪರಿಸರ ರಕ್ಷಣೆಯು ಪ್ರತಿಯೊಬ್ಬರ ಕಾಳಜಿಯಾಗಬೇಕು ಎಂದರು.
ಗಿಡಗಳು ಉಳಿದು ಬೆಳೆದರೆ ಮಾತ್ರ ಪ್ರಕೃತಿ ಉಳಿಯುತ್ತದೆ.ಅಭಿವೃದ್ಧಿ ಹೆಸರಿನಲ್ಲಿ ನಗರ, ಹಳ್ಳಿ ಪ್ರದೇಶ ಎಲ್ಲೆಡೆ ಪರಿಸರ ನಾಶವಾಗುತ್ತಿದೆ. ಪಶ್ಚಿಮಘಟ್ಟದ ಅರಣ್ಯ ಪ್ರದೇಶ ದೇಶದ ಅಮೂಲ್ಯ ಸಂಪತ್ತಾಗಿದ್ದು, ಇದನ್ನು ಉಳಿಸಲು ನಾವು ನಮ್ಮ ಕೈಲಾದ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಎಲ್ಲಿಯೂ ಗಿಡ ನೆಟ್ಟು ಒಂದು ವರ್ಷ ಉಳಿಸಿದರೆ ಅದು ದೊಡ್ಡ ಗಿಡವಾಗಿ, ಮರವಾಗಬಲ್ಲದು. ಹಸಿರಿನಿಂದ ಕೂಡಿರುವ ಪ್ರಕೃತಿಯಲ್ಲಿ ದೊರಕುವ ಶುದ್ಧ ಗಾಳಿ ಮತ್ತೆಲ್ಲೂ ದೊರಕದು. ಹಾಗಾಗಿ ಪ್ರತಿ ವರ್ಷ ಗಿಡಗಳನ್ನು ನೆಡುವುದರ ಮೂಲಕ ನಮ್ಮದೇ ಆದ ಪರಿಸರ ಕಾಳಜಿ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವದಲ್ಲಿನ ಎಲ್ಲ ಪ್ರಾಚೀನ ಸಂಸ್ಕೃತಿಗಳೂ ಪ್ರಕೃತಿ, ಗಿಡಮರಗಳು, ನದಿಗಳು, ಪರ್ವತಗಳನ್ನು ಗೌರವಿಸಿವೆ ಮತ್ತು ಪ್ರಕೃತಿಯನ್ನು ಯಾವಾಗಲೂ ಪೂಜಿಸಲಾಗುತ್ತದೆ. ಭಾರತದಲ್ಲಿ ಒಂದು ಮರ ಕಡಿದರೆ ಅದರ ಬದಲಿಗೆ ಐದು ಗಿಡಗಳನ್ನು ನೆಡುವುದು ಪರಂಪರೆಯ ಭಾಗವೇ ಆಗಿದೆ ಎಂದು ಯದುವೀರ್ ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥ ಡಾ.ಕೇಶವಮೂರ್ತಿ ಸೇರಿ ಪ್ರಮುಖರಿದ್ದರು. ಇದೇ ವೇಳೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.