ಶಿರಾ:
ತುಮಕೂರು ಶಾಖಾ ನಾಲೆಯಿಂದ ಕಳ್ಳಂಬೆಳ್ಳ ಕೆರೆಯತ್ತ ಹರಿಯುತ್ತಿರುವ ಹೇಮಾವತಿ ನೀರಿನ ಸಂಬಂಧವಾಗಿ ಶಾಸಕ ಬಿ.ಸತ್ಯನಾರಾಯಣ್ ತಾಲ್ಲೂಕು ಪಂಚಾಯ್ತಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದರು.
ಆಗಸ್ಟ್ 8 ರಿಂದ ಪಟ್ರಾವತನಹಳ್ಳಿ ಎಸ್ಕೇಪ್ಗೇಟ್ ಮೂಲಕ ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರನ್ನು ಹರಿಯಬಿಡಲಾಗಿದ್ದು ಈಗಾಗಲೇ ಕಳ್ಳಂಬೆಳ್ಳ ಕೆರೆಯಲ್ಲಿ ನೀರು ಶೇಖರಣೆಗೊಳ್ಳುತ್ತಿದೆ. ಒಂದೆರಡು ದಿನಗಳಲ್ಲಿ ಅರ್ಧ ಕೆರೆಗೂ ಹೆಚ್ಚು ನೀರಿನಿಂದ ಕಳ್ಳಂಬೆಳ್ಳ ಕೆರೆ ತುಂಬಲಿದೆಯಾದರೂ ಅಕ್ರಮವಾಗಿ ಕೆಲ ರೈತರು ಚಾನಲ್ನಲ್ಲಿ ಮೋಟಾರು ಪಂಪು ಬಿಟ್ಟು ನೀರನ್ನು ಎತ್ತಿಕೊಳ್ಳುತ್ತಿರುವ ಪರಿಣಾಮ ಹರಿಯುತ್ತಿರುವ ನೀರಿನ ವೇಗದ ಪ್ರಮಾಣ ಕಡಿಮೆಯಾಗಿದೆ ಎಂದು ಶಾಸಕ ಸತ್ಯನಾರಾಯಣ್ ತಿಳಿಸಿದರು.
ಕಳ್ಳಂಬೆಳ್ಳ-ಶಿರಾ ಕೆರೆಗೆ ನೀರು ಹರಿಸಿಕೊಳ್ಳದೆ ಬಿಡುವುದಿಲ್ಲವಾದರೂ ಅಕ್ರಮವಾಗಿ ರೈತರು ಚಾನಲ್ನಲ್ಲಿ ಮೋಟಾರ್ ಪಂಪುಗಳಿಂದ ನೀರನ್ನು ಪಡೆಯುವುದನ್ನು ಸ್ಥಗಿತಗೊಳಿಸಬೇಕು. ಈ ಕೂಡಲೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸತ್ಯನಾರಾಯಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾನಲ್ನೊಳಕ್ಕೆ ಮೋಟಾರ್ಗಳನ್ನು ಬಿಟ್ಟು ನೀರು ಪಡೆಯುತ್ತಿರುವ ಕಾರಣದಿಂದಾಗಿ ನೀರಿನ ವೇಗದ ಪ್ರಮಾಣ ಕಡಿಮೆಯಾಗಿದೆ. ಶಿರಾ ಬರದ ಬೀಡೆಂಬ ಬಗ್ಗೆ ಎಲ್ಲರಿಗೂ ಅರಿವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದ್ದು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಸಿದ್ದೇನೆ. ಅಕ್ರಮ ಮೋಟಾರ್-ಪಂಪು ಅಳವಡಿಸಿಕೊಮಡವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇನೆ ಎಂದರು.
ಕಳ್ಳಂಬೆಳ್ಳ, ಶಿರಾ ಹಾಗೂ ಮದಲೂರು ಕೆರೆಗೆ ಮೀಸಲಿರಿಸಿದ ನೀರನ್ನು ಪಡೆಯುವ ಹಕ್ಕು ನಮಗಿದೆ. ಈ ನಡುವೆ ತಾಲ್ಲೂಕಿನಲ್ಲಿ ಮುಂಗಾರು ಮಳೆಯೂ ಕೈಕೊಟ್ಟಿದ್ದು ಈಗಲಾದರೂ ವರುಣ ತಾಲ್ಲೂಕಿನ ಮೇಲೆ ದಯೆ ತೋರಬೇಕಿದೆ. ಹೇಮಾವತಿ ನೀರು ಕಳ್ಳಂಬೆಳ್ಳ ಕೆರೆಗೆ ಹರಿಯುತ್ತಿರುವ ಸಂದರ್ಬದಲ್ಲಿ ಮಳೆಯ ಪ್ರಮಾಣವೂ ಹೆಚ್ಚಿರುತ್ತಿದ್ದ ಕಾರಣ ಕಳ್ಳಂಬೆಳ್ಳ, ಶಿರಾ ಕೆರೆಗಳನ್ನು ತುಂಬಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಈಗಲೂ ವರುಣನ ಕೃಪೆ ಅನಿವಾರ್ಯ ಎಂದು ಶಾಸಕರು ತಿಳಿಸಿದರು.
ಮಳೆ ಬಾರಲಿಲ್ಲ ಎಂದು ನಾವ್ಯಾರೂ ಕೈ ಕಟ್ಟಿ ಕೂರಬೇಕಿಲ್ಲ. ನೀರಾವರಿ ಸಲಹಾ ಸಮಿತಿಯು ನಿಗಧಿಪಡಿಸಿದ ನೀರನ್ನು ಪಡೆದೇ ತೀರಬೇಕು. ಈ ನಿಟ್ಟಿನಲ್ಲಿ ನಾನೂ ಕೂಡಾ ಪ್ರತಿ ದಿನವೂ ಚಾನಲ್ಗೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಲೇ ಬಂದಿದ್ದು ಅಧಿಕಾರಿಗಳು ಕೂಡಾ ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದರು.
ತಹಶೀಲ್ದಾರ್ ರಂಗೇಗೌಡ, ತಾ.ಪಂ. ಪ್ರಭಾರ ಇ.ಓ. ಸುನೀಲ್, ನಗರಸಭೆಯ ಎ.ಇ.ಇ. ಸೇತುರಾಮ್ಸಿಂಗ್, ಕಳ್ಳಂಬೆಳ್ಳ ಪಿ.ಎಸ್.ಐ. ಮುತ್ತುರಾಜ್, ಸಣ್ಣ ನೀರಾವರಿ ಇಲಾಖೆಯ ಎ.ಇ.ಇ. ರವಿಚಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು
