ತುಮಕೂರು
ಆಧುನಿಕ ತಂತ್ರಜ್ಞಾನ ಮುಂದುವರಿದ ಹಾಗೆ ಹೊಸ ಹೊಸ ಆವಿಷ್ಕಾರದ ಸಾಧನಗಳಿಗೆ ಮೋಹಿತರಾಗಿ ನಮ್ಮ ಹಿಂದಿನ ಎಲ್ಲಾ ಆಟಗಳು, ನಾಟಕಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಜೀವವಿಲ್ಲದ ವಸ್ತುಗಳಿಗೆ ಹೆಚ್ಚಿನ ಬೆಲೆಕೊಡುತ್ತಾ ಜೀವಂತವಾಗಿರುವ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅರೇನಾ ಅನಿಮೇಷನ್ನ ಗೌತಮ್ ಎಲ್. ತಿಳಿಸಿದರು, ಇವರು ಉಮೇಶ್ ಎಂ.ಡಿ. ದೆಹಲಿ ಸಂಸ್ಕøತಿ ಸಚಿವಾಲಯದ ಸಹಕಾರದೊಂದಿಗೆ ಶ್ರೀ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ದಿ. 07.09.2018 ರ ಶುಕ್ರವಾರ ಆಯೋಜಿಸಿದ್ದ ಪಿ. ಲಂಕೇಶ್ ರ “ತೆರೆಗಳು” ಹೊಸ ರಂಗಪ್ರಯೋಗ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಆಂಗ್ಲ ಉಪನ್ಯಾಸಕರಾದ ಪಿ. ರಾಘವೇಂದ್ರ ಮಾತನಾಡುತ್ತಾ 70 ರ ದಶಕದಿಂದ ಇಂದಿನವರೆಗೂ ಕೂಡ ಸದಾಕಾಲ ಪ್ರಸ್ತುತವಾಗುವ “ತೆರೆಗಳು” ನಾಟಕವನ್ನು ನೋಡುಗರಿಗೆ ಹತ್ತಿರವಾಗುವಂತೆ ನಿರ್ದೇಶಿಸಿದ ನಿರ್ದೇಶಕರ ಶ್ರಮ ಸಾರ್ಥಕವಾಗುವಂತೆ ಕಲಾವಿದರು ಅಭಿನಯಿಸಿದರು ಎಂದರು.
ಮೊಬೈಲ್, ವಾಟ್ಸಪ್, ಫೇಸ್ ಬುಕ್, ಜೀವವಿರದ ಆಪ್ ಗಳೊಡನೆ ಮಾತನಾಡುವುದನ್ನು ರೂಢಿಸಿಕೊಂಡ ನಾವುಗಳು ತಮ್ಮ ದಿನನಿತ್ಯದ ಆಜುಬಾಜಿನಲ್ಲಿ ಬರುವ ಅಣ್ಣ-ತಮ್ಮ, ಅಕ್ಕ-ತಂಗಿ, ಸ್ನೇಹಿತರನ್ನೆ ಕಳೆದುಕೊಳ್ಳುತ್ತಿದ್ದಾರೆ. ನಗು, ಮಾತು, ಹರಟೆ ಎಲ್ಲವನ್ನು ಕಳೆದುಕೊಂಡು ಇಂದು ನಾವೂ ಕೂಡ ಜೀವಂತ ಶವಗಳಾಗಿ ಬದುಕುತ್ತಿದ್ದೇವೆ ಎಂದು ವಿಶ್ವವಾಣಿ ವರದಿಗಾರ ರಂಗನಾಥ್ ಕೆ. ಮರಡಿ ತಿಳಿಸಿದರು. ವೇದಿಕೆಯಲ್ಲಿ ಆನ್ ಲೈನ್ ಸ್ಕೈ ಆಡ್ಸ್ ನ ವಿಜಯ್ ಹೆನ್ರಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಂಜೇಗೌಡ ಉಪಸ್ಥಿತರಿದ್ದರು. ಚಿದಾನಂದ್ ಕಾರ್ಯಕ್ರಮವನ್ನು ನಿರೂಪಿಸಿದರು.