ದಾವಣಗೆರೆ:
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೋಮವಾರದಿಂದ ಆರಂಭಿಸಿದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ತಾಲೂಕು ಆಡಳಿತ ಸ್ಪಂದಿಸಿ, ಸಾಂಕೇತಿಕವಾಗಿ ಸಾಗುವಳಿ ಪತ್ರ ವಿತರಿಸಿ, ಇನ್ನುಳಿದವರಿಗೂ ಸಾಗುವಳಿ ಪತ್ರ ನೀಡುವುದಾಗಿ ತಹಶೀಲ್ದಾರ್ ಸಂತೋಷಕುಮಾರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ಡಿಎಸ್ಎಸ್ ತಾತ್ಕಾಲಿಕವಾಗಿ ವಾಪಾಸ್ ಪಡೆದಿದಿದೆ.
ಸುಮಾರು ಕಳೆದ 20 ವರ್ಷಗಳ ಹಿಂದೆಯೇ ದಾವಣಗೆರೆ ತಾಲ್ಲೂಕಿನಾದ್ಯಂತ ಸುಮಾರು 4,500 ಜನ ಬಗರ್ಹುಕುಂ ಸಾಗುವಳಿದಾರರು, ಸಾಗುವಳಿ ಪತ್ರಕ್ಕಾಗಿ ಅರ್ಜಿಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಈ ನಾಲ್ಕೂವರೆ ಸಾವಿರ ಸಾಗುವಳಿಲದಾರರ ಪೈಕಿ ಬೆgಳೆಣಿಕೆಯಷ್ಟು ಸಾಗುವಳಿದಾರರಿಗೆ ಮಾತ್ರ ಹಕ್ಕುಪತ್ರ ನೀಡಿ, ಇನ್ನೂ ಕೆಲವರಿಗೆ ಸಾಗುವಳಿ ಪತ್ರವನ್ನೇ ನೀಡಿರಲಿಲ್ಲ. ಹೀಗಾಗಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ತಾಲೂಕು ಪಂಚಾಯತ್ ಸದಸ್ಯ ಆಲೂರು ನಿಂಗರಾಜ್ ಸ್ಥಳಕ್ಕೆ ಭೇಟಿ ನೀಡಿ, ಧರಣಿ ನಿರತರೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಿಸಿ, ಇನ್ನುಳಿದ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಮಂಗಳವಾರ ವಾಪಾಸ್ ಪಡೆದರು.
ನಮ್ಮ ಪ್ರಮುಖ ಬೇಡಿಕೆ ಈಡೇರಿರುವುದು ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೂವಿನಮಡು ಅಂಜಿನಪ್ಪ, ಗುಮ್ಮನೂರು ರಾಮಚಂದ್ರ, ಎನ್.ವಾಸುದೇವ್, ರವಿ, ಕಂಚಿಕೆರೆ ಕೆಂಚಪ್ಪ, ಮೆಳ್ಳೆಕಟ್ಟೆ ಪರಶುರಾಮ್, ಆನಗೋಡು ಸುರೇಶ್, ಸತೀಶ್ ಮಲೇಮಾಚೀಕೆರೆ, ಅಲಗವಾಡಿ ಲಿಂಗರಾಜು, ಮಂಜಪ್ಪ ಪುಣಬಗಟ್ಟಿ, ಪುಣಬಗಟ್ಟಿ ನಿಂಗಪ್ಪ, ರಾಜನಹಳ್ಳಿ ಮಂಜುನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
