ದಾವಣಗೆರೆ:
ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಸಂಘದ ಕಲಾವಿದರ ಸಾಹಾಯಾರ್ಥಕ್ಕಾಗಿ ಅಕ್ಟೋಬರ್ 2ರಂದು ನಗರದ ಹದಡಿ ರಸ್ತೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಕಾಮಿಡಿ ನೈಟ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6.30ರಿಂದ ನಡೆಯಲಿರುವ ಕಾಮಿಡಿ ನೈಟ್ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್ಸಾಬ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಈ ಕಾಮಿಡಿ ನೈಟ್ ಕಾರ್ಯಕ್ರಮದಲ್ಲಿ ಪೋಷಕ ಕಲಾವಿದರುಗಳಾದ ಬ್ಯಾಂಕ್ ಜನಾರ್ಧನ್, ಬೀರಾದರ್, ರೇಖಾದಾಸ್, ಅಪೂರ್ವ, ಹೊನ್ನವಳ್ಳಿ ಕೃಷ್ಣ, ರಮಾನಂದ್, ನಾಗರಾಜ್ ಕೋಟಿ, ಕುರಿ ಪ್ರತಾಪ್, ಮಿಮಿಕ್ರಿ ಗೋಪಿ, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ನಾಗ್, ಜೂನಿಯರ್ ಉಪೇಂದ್ರ, ಕೆಂಪೇಗೌಡ, ತಬಲಾ ನಾಣಿ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ತಮ್ಮ ಅಭಿನಯಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆಂದು ಮಾಹಿತಿ ನೀಡಿದರು.
ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ ಹಲವು ಪೋಷಕ ಹಾಗೂ ಹಿರಿಯ ಕಲಾವಿದರು ಈಗ ಕೆಲಸ ಇಲ್ಲದೇ, ಮೂಲೆಗುಂಪಾಗಿದ್ದಾರೆ. ಆದ್ದರಿಂದ ಇಂಥಹ ಕಲಾವಿದರಿಗೆ ಅಳಿಲು ಸೇವೆ ಮಾಡುವ ಉದ್ದೇಶದಿಂದ ಈ ಕಾಮಿಡಿ ನೈಟ್ ಕಾರ್ಯಕ್ರಮವನ್ನು ಸಂಘದಿಂದ ಪ್ರಪ್ರಥಮ ಬಾರಿಗೆ ಮಧ್ಯ ಕರ್ನಾಟಕವಾಗಿರುವ ದಾವಣಗೆರೆಯಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ 500 ರೂ. ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ಇದರಿಂದ ಸಂಗ್ರಹವಾದ ಮೊತ್ತವನ್ನು ಬ್ಯಾಂಕ್ನಲ್ಲಿ ಠೇವಣಿಯನ್ನಾಗಿಟ್ಟು, ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಮೂಲೆಗುಂಪಾಗಿರುವ ಕಲಾವಿದರಿಗೆ ಅಳಿಲು ಸೇವೆ ನೀಡಲಾಗುವುದು. ಈ ಕಾರ್ಯಕ್ರಮದ ಟಿಕೆಟ್ ಶರಬೇಶ್ವರ ಹೋಟೆಲ್ ಹಾಗೂ ಹಂಸ ಟಿವಿಯವರಲ್ಲಿ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 9342840185 (ಸುರೇಶ್) ಅವರಿಗೆ ಸಂಪರ್ಕಿಸಬೇಕೆಂದು ಕೋರಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪೋಷಕ ಕಲಾವಿದರನ್ನು ಕಡೆಗಣಿಸಿರುವುದರಿಂದ ಅವರ ಸ್ಥಿತಿ ದಯನೀಯವಾಗಿದೆ. ಕೆಲವರು ಅನಾಥಾಶ್ರಮದಲ್ಲಿ ಬದುಕುವ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದು ಅಳಲುತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಮಘದ ನವನಿತಾ, ಗುಬ್ಬಿ ನಟರಾಜ್, ಭಾಗ್ಯಶ್ರೀ, ಸುರೇಶ್, ನಾಗರಾಜ್, ಮಲ್ಲಿಕ್ ಸೇರಿದಂತೆ ಹಲವು ಹಾಜರಿದ್ದರು
