ಪುರಸಭೆಯ ಮುಂದೆ ಧರಣಿ

ಚಿಕ್ಕನಾಯಕನಹಳ್ಳಿ :

     ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ನ ನಂ.6ದಬ್ಬೆಘಟ್ಟದ ನಾಗರೀಕರು ಮಂಗಳವಾರ ನಮ್ಮ ವಾರ್ಡಿಗೆ ಸರಿಯಾಗಿ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಪುರಸಭಾ ಸದಸ್ಯ ನಾಗರಾಜು ನೇತೃತ್ವದಲ್ಲಿ ಪುರಸಭೆಯ ಮುಂದೆ ಧರಣಿ ನಡೆಸಿ ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡ್‍ನ ನಿವಾಸಿ ಗೋಪಾಲಯ್ಯ, ನಾವು ಪುರಸಭೆಗೆ ಕಂದಾಯ ಹಾಗೂ ನೀರಿನ ಶುಲ್ಕ ಕಟ್ಟುತ್ತಿಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು, ಪುರಸಭಾ ಸದಸ್ಯರೊಬ್ಬರು ದಬ್ಬೆಘಟ್ಟ ಗ್ರಾಮಕ್ಕೆ ನೀರು ಬಿಡಬೇಡಿ ಎಂದು ಹೇಳಿದ್ದಾರೆ ಅವರನ್ನು ಸ್ಥಳಕ್ಕೆ ಕರೆಯಿಸಿ ಎಂದು ಆಗ್ರಹಿಸಿದರು.

     ಪಟ್ಟಣಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಪೈಪ್ ಮೂಲಕ ಕೆರೆಗೆ ಸರಬರಾಜಾಗುತ್ತಿದೆ, 2016ರಲ್ಲಿ ಈ ಪೈಪ್‍ಲೈನ್‍ಗೆ ಎರಡು ಇಂಚಿನ ವಾಲ್ವ್ ಹಾಕಿ ದಬ್ಬೆಘಟ್ಟಕ್ಕೆ ನೀರು ಸರಬರಾಜು ಮಾಡುತ್ತಿದ್ದರು ಇದರಿಂದ ನೀರಿನ ಸಮಸ್ಯೆ ಇರಲಿಲ್ಲ, ಈಗ 25 ದಿನಗಳಿಂದ ನೀರು ಬರದೇ ಜನ ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ. ಹೇಮಾವತಿ ಪೈಪ್‍ಲೈನ್‍ನಿಂದ ಹಾಲುಗೊಣ ಸೇರಿದಂತೆ ಕೆಲವು ಹಳ್ಳಿಗರು ಅನಧಿಕೃತವಾಗಿ ಪೈಪ್‍ಲೈನ್‍ಗೆ ರಂದ್ರ ಕೊರೆದು ನೀರನ್ನು ಬಿಟ್ಟುಕೊಳ್ಳುತ್ತಿದ್ದಾರೆ, ಇದು ನಿಮ್ಮ ಗಮನಕ್ಕೆ ಕಾಣುವುದಿಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ನಿವಾಸಿಗಳು, ಅಧಿಕಾರಿಗಳು ಪಟ್ಟಣಕ್ಕೆ ಬರುವ ನೀರನ್ನು ನಿಲ್ಲಿಸಿ ಇಲ್ಲದೇ ಇದ್ದರೆ ನಮಗೂ ನೀರಿನ ವ್ಯವಸ್ಥೆ ಮಾಡಿ ಎಂದ ಅವರು, ನಮಗೆ ನೀರು ಒದಗಿಸದಿದ್ದರೆ ನಮ್ಮ ದನಕರುಗಳನ್ನು ಪುರಸಭೆಯ ಮುಂದೆ ಕಟ್ಟಿ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದರು. ಚುನಾವಣೆ ಮುಗಿದು ಒಂದು ತಿಂಗಳಾದರೂ ಇದುವರೆಗೆ ದಬ್ಬೆಘಟ್ಟ ಗ್ರಾಮಕ್ಕೆ ನೀರು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಹೇಮಾವತಿ ನಾಲೆಯಿಂದ ಪಟ್ಟಣದ ಕೆರೆಗೆ ಬರುವ ನೀರು ನಿಲ್ಲಿಸಲು ಸಾಧ್ಯವಿಲ್ಲ, ನೀವು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಇನ್ನು ಎರಡು ದಿನಗಳಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು.ಪ್ರತಿಭಟನೆಯಲ್ಲಿ ಗೋಪಾಲಯ್ಯ, ದಬ್ಬೇಘಟ್ಟ ಜಗದೀಶ್, ರಾಜು, ಕುಮಾರಸ್ವಾಮಿ, ರಮೇಶ್, ವಿನಯ್, ನವೀನ್ ಮತ್ತಿತರರು ಉಪಸ್ಥಿತರಿದ್ದರು

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link