ಬೆಂಗಳೂರು
ನನ್ನ ಜೊತೆಗಿನ ಏಕಾಂತದಲ್ಲಿನ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆಯುತ್ತಿರುವ ಮಾಜಿ ಪ್ರಿಯಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ಮೂಲದ ವೈದ್ಯೆಯೊಬ್ಬರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿರುವ ಚೆನ್ನೈನ 26 ವರ್ಷದ ಸೌಮ್ಯಾ(ಹೆಸರು ಬದಲಾಯಿಸಲಾಗಿದೆ). ನರೇಶ್ ಎಂಬಾತ ಮಾನಸಿಕವಾಗಿ ಕಿರುಕುಳ ನೀಡಿ ಭವಿಷ್ಯ ಹಾಳು ಮಾಡಲು ಹಳೆಯ ಎಕಾಂತದಲ್ಲಿದ್ದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಪರಿಚಯವಾಗಿದ್ದ ನರೇಶ್ ಜೊತೆ ಪ್ರೀತಿ ಬೆಳೆದು ಇಬ್ಬರು ಬೆಂಗಳೂರಿಗೆ ಬಂದು ಮನೆ ಮಾಡಿಕೊಂಡು ಎರಡು ವರ್ಷ ವಾಸವಾಗಿದ್ದೆವು ನಂತರ ನರೇಶ್ ಹಾಗೂ ನನ್ನ ನಡುವೆ ವೈಮನಸ್ಸು ಬೆಳೆದು ಬೇರೆಯಾಗಿದ್ದೇವೆ. ಜೊತೆಯಾಗಿದ್ದಾಗ ನನ್ನ ಪ್ಯಾನ್ ಕಾರ್ಡ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಬಂಗಾರದ ಆಭರಣಗಳನ್ನು ಪಡೆದು, ಇಟ್ಟುಕೊಂಡಿದ್ದ ನರೇಶ್ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ತನಗಾದ ಅನ್ಯಾಯದ ವಿರುದ್ದ ವನಿತಾ ಸಹಾಯವಾಣಿ ಮೂಲಕ ಪೊಲೀಸ್ ಹಾಗೂ ಪರಿಹಾರ್ ಎನ್ಜಿಓ ಮೊರೆ ಹೋದಾಗ ವಕೀಲರೊಂದಿಗೆ ಕೋರ್ಟ್ಗೆ ಹಾಜರಾಗಿದ್ದ ನರೇಶ್ ನನ್ನ ಬಳಿ ಪಡೆದುಕೊಂಡಿದ್ದ 2 ಲಕ್ಷ ರೂ. ಹಾಗೂ ವಸ್ತುಗಳನ್ನು ಮರಳಿಸುವುದಾಗಿ ಒಪ್ಪಿಕೊಂಡಿದ್ದ. ಆದರೆ ಕಳೆದ ಎರಡು ತಿಂಗಳಿನಿಂದ ತನ್ನ ವರಸೆ ಬದಲಿಸಿ, ನನ್ನ ಜೊತೆಗಿದ್ದ ಏಕಾಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ತನ್ನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸೌಮ್ಯಾ ಸೈಬರ್ ಅಪರಾಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನರೇಶ್ಗಾಗಿ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








