ದಾವಣಗೆರೆ:
ಪ್ರಪಂಚಕ್ಕೆ ರಾಮಾಯಣದಂಥಹ ಮೇರು ನೀಡಿದ ವಾಲ್ಮೀಕಿ, ಜಾತಿ ನಿರ್ಮೂಲನೆಗೆ ಹೋರಾಡಿದ ಬಸವಣ್ಣ ಸೇರಿದಂತೆ ಸಮಾಜದ ಉನ್ನತಿಗಾಗಿ ಶ್ರಮಿಸಿದ, ಮನುಕುಲದ ಒಳಿತಿಗಾಗಿ ಅರ್ಪಣೆ ಮಾಡಿಕೊಂಡ ಮಹನೀಯರುಗಳಿಗೆ ಜಾತಿಯ ಚೌಕಟ್ಟು ಹಾಕಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ಶ್ರೀವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ದಾರ್ಶನಿಕರ ತತ್ವಾದರ್ಶಗಳನ್ನು ಬಿತ್ತಿ, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಸರ್ಕಾರ ದಾರ್ಶನಿಕರ, ಮಹಾತ್ಮರ ಜಯಂತಿಯನ್ನು ಆಚರಿಸುತ್ತಿದೆ. ಆದರೆ, ಇತ್ತೀಚಿನ ಬಹುತೇಕ ದಾರ್ಶನಿಕರು, ಮಹಾನೀಯರ ಜಯಂತಿ ಕೇವಲ ಆಚರಣೆಗೆ ಹಾಗೂ ಜಾತಿಗಳಿಗೆ ಸೀಮಿತವಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
12 ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ನಿರ್ಮೂಲನೆಗಾಗಿ ಹೋರಾಡಿ ಮಾನವೀಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಆದರೆ, ಇಂದಿನ 21ನೇ ಶತಮಾನದಲ್ಲೂ ಸಹ ನಾವೆಲ್ಲಾ ಜಾತಿಗೆ ಅಂಟಿಕೊಂಡಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆಯ ಸಮಾಜಕ್ಕಾಗಿ ದುಡಿದಿದ್ದರು. ಆದರೆ, ಅವರ ಯಾವ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳದ ನಾವು ಆಡಂಬರ ಮತ್ತು ತೋರಿಕೆಗಾಗಿ ಮಾತ್ರ ಜಯಂತಿಗಳನ್ನು ಆಚರಿಸುತ್ತಿದ್ದೇವೆ ಎಂದರು.
ಮಹರ್ಷಿ ಶ್ರೀವಾಲ್ಮೀಕಿಯವರು ರಚಿಸಿರುವ ‘ರಾಮಾಯಣ’ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಪ್ರತಿಯೊಬ್ಬರ ಜೀವನಕ್ಕೂ ಹೊಂದಿಕೆಯಾಗಿ, ಎಲ್ಲರ ಬದುಕಿಗೆ ಆದರ್ಶಪ್ರಾಯ ರೀತಿಯಲ್ಲಿ ನಿಲ್ಲುವ ಕೃತಿಯಾಗಿದ್ದು, ಈ ಕೃತಿಯು ದೇಶದ ವಿವಿಧ ಭಾಷೆಗಳಲ್ಲಿ ತರ್ಜುಮೆಗೊಂಡು, ಅಖಂಡ ಭಾರತದ ಪವಿತ್ರ ಕೃತಿ ಎನಿಸಿಕೊಂಡಿದೆ ಎಂದು ನುಡಿದರು.
ಸಮಾಜಕ್ಕೆ ನಮ್ಮಿಂದ ಒಳ್ಳೆಯ ಕೊಡುಗೆಗಳನ್ನು ಕೊಡಲು ಸಾಧ್ಯವಾಗದಿದ್ದರೆ ಬೇಡ. ಆದರೆ, ನಮ್ಮಿಂದ ಯಾರಿಗೂ ಕೆಡಕಾಗದಂತೆ ಎಚ್ಚರ ವಹಿಸೋಣ. ನಮ್ಮಂತೆ ಅವರೂ ಎಂಬುದಾಗಿ ಭಾವಿಸಿ ಸಾಮರಸ್ಯದ ಜೀವನ ನಡೆಸೋಣ ಎಂದು ಕರೆ ನೀಡಿದರು.
ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗೋವಿಂದಪ್ಪ.ಬಿ ಉಪನ್ಯಾಸ ನೀಡಿ, ಇತಿಹಾಸದಲ್ಲಿ ವಾಲ್ಮೀಕಿ ಒಬ್ಬ ದರೋಡೆಕೋರ ಎಂಬುದಾಗಿ ಬಿಂಬಿಸಲಾಗಿದೆ. ಈ ಬಗೆಗೆ ಸಂಶೋಧನೆಗಳಾದರೂ ಎಲ್ಲಿಯೂ ನಿಖರ ದಾಖಲೆಗಳು ದೊರೆತಿಲ್ಲ. ಈ ಹಿಂದಿನಿಂದಲೂ ಕಾಡಿನಲ್ಲಿ ವಾಸಿಸುವ ಹಾಗೂ ಕಾಡಿನ ಹೊರಗೆ ವಾಸಿಸುವವರ ನಡುವೆ ಸಂಘರ್ಷಗಳು ನಡೆದಿರುವುದು ಇದ್ದೇ ಇದೆ. ಅಂತಹ ಸಮಯದಲ್ಲಿ ತಮ್ಮವರನ್ನು ಕಾಪಾಡಿಕೊಳ್ಳಲು ವಾಲ್ಮೀಕಿಯವರು ಕ್ರೂರವಾಗಿ ನಡೆದುಕೊಂಡಿರಬಹುದು ಎಂದು ವಿಶ್ಲೇಷಿಸಿದರು.
ರತ್ನಾಕರ ವನ್ಯ ಸಂಸ್ಕøತಿಯಲ್ಲಿ ಬೆಳೆದುದರಿಂದ ಒರಟನಾಗಿ ಕಂಡಿರಬಹುದು. ಆದರೆ, ನಾರದ ಮಹಾಮುನಿಗಳಿಂದ ಜ್ಞಾನೋದಯವಾದ ನಂತರ ಆದರ್ಶ ಯುವಕನಾಗುತ್ತಾನೆ. ರತ್ನಾಕರನ ಹರೆಯದಲ್ಲಿ ಸಂಭವಿಸಿದ ಕ್ರೌಂಚ ಪಕ್ಷಿಯ ಸಾವು ಅವನಲ್ಲಿದ್ದ ಒರಟುತನವನ್ನು ಹೋಗಲಾಡಿಸಿ ಏಳು ಕಾಂಡಗಳು, 24 ಸಾವಿರ ಶ್ಲೋಕಗಳಿರುವ ರಾಮಾಯಣವನ್ನು ಬರೆಯುವಂತೆ ಪ್ರೇರೇಪಿಸಿತು. ಪಿತೃಪಾಲಕ ಅಣ್ಣ-ತಮ್ಮಿಂದರ ನಡುವಿನ ಸಂಬಂಧ, ರಾಜನೀತಿ ತತ್ವಜ್ಞಾನ, ಸಾಮಾಜಿಕ ಕಳಕಳಿ ರಾಮಾಯಣ ಕೃತಿಯಲ್ಲಿ ಎದ್ದು ಕಾಣುತ್ತವೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದ ರಜೆಯೊಂದಿಗೆ ಜಯಂತಿ ಆಚರಣೆಗೆ ಘೋಷಣೆ ಮಾಡಲಾಯಿತು. ರಾಮಾಯಣವನ್ನು ಓದುವುದರಿಂದ ಎಲ್ಲರ ಜೀವನ ಪಾವನವಾಗಲಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ರಾಮಾಯಣ ಓದಲೇಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಾಯಕ ಸಮಾಜದ ಮುಖಂಡರು ಪರಿಶಿಷ್ಟ ಪಂಗಡಕ್ಕೆ ನೀಡುತ್ತಿರುವ ಮೀಸಲಾತಿಯನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು. ಬಡ್ತಿ ಮೀಸಲಾತಿಯನ್ನು ಮುಂದುವರೆಸಬೇಕು. ದಾವಣಗೆರೆ ವಿವಿಗೆ ಮಹರ್ಷಿ ವಾಲ್ಮೀಕಿ ವಿವಿ ಎಂದು ನಾಮಕರಣ ಮಾಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಉದ್ದೇಶಗಳಿಗೆ ನೇರ ಸಾಲ ಮಂಜೂರು ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿನಿ ಸಾಲದ ಯೋಜನೆಯಡಿ ಎಸ್ಸಿ/ಎಸ್ಟಿ ಗೆ ಶೇ.50 ರಷ್ಟು ಸಹಾಯಧನ ನೀಡಲು ಕ್ರಮ ವಹಿಸಬೇಕು. ದಾವಣಗೆರೆ ತಾಲ್ಲೂಕು ನಾಯಕ ಸಂಘಕ್ಕೆ ಮಹಿಳಾ ವಿದ್ಯಾರ್ಥಿ ನಿಲಯ ಆರಂಭಿಸಲು 150*250 ಚದರ ಅಡಿ ವಿಸ್ತೀರ್ಣದ ನಿವೇಶನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಜಯಶೀಲ.ಕೆ.ಆರ್, ಜಿ ಪಂ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಚಮನ್ಸಾಬ್, ಜಿ ಪಂ ಸದಸ್ಯರುಗಳಾದ ಕೆ.ಎಸ್.ಬಸವಂತಪ್ಪ, ಹದಡಿ ನಿಂಗಪ್ಪ, ಓಬಳಪ್ಪ, ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷ ಮುರುಗೇಶಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದೇವೇಂದ್ರಪ್ಪ, ನಾಯಕ ಸಮಾಜದ ಮುಖಂಡರಾದ ಹದಡಿ ಹಾಲೇಶಪ್ಪ, ತಿಪ್ಪೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
