ದಾವಣಗೆರೆ :
ಇತ್ತೀಚಿನ ನವಪೀಳಿಗೆಯಲ್ಲಿ ಕನ್ನಡ ನಾಡಿನ ಕನ್ನಡ ಭಾಷೆ, ನಾಡು, ನುಡಿ ಪರಂಪರೆಗಳ ಬಗ್ಗೆ ಅಭಿಮಾನ ಶೂನ್ಯರಾಗುತ್ತಿರುವುದು ವಿಷಾದದ ಸಂಗತಿ ಎಂದು ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎಸ್.ಎಂ.ಮಲ್ಲಮ್ಮ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಎಸ್.ಎಸ್.ಎಂ. ನಗರದ ಸರ್ಕಾರಿ ಉರ್ದು ಪ್ರೌಢಶಾಲಾ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ “ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ “ಕರ್ನಾಟಕ ವೈಭವ’’ ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಭಾಷೆಯಲ್ಲಿ ಪರಿಣಿತಿ ಪಡೆದರೂ ಮುಂದಿನ ಜೀವನದ ಸಾರ್ಥಕತೆಗೆ ಕನ್ನಡ ಭಾಷೆ ಅಗ್ರಸ್ಥಾನದಲ್ಲಿ ಇದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ನಮ್ಮ ಕನ್ನಡ ಭಾಷೆಗೆ ಅದರದ್ದೇ ಆದ ಸ್ಥಾನಮಾನ, ಘನತೆ ಗೌರವವಿದೆ. ವಿದೇಶಿಗರು ನಮ್ಮ ನಾಡಿಗೆ ಬಂದ ನಮ್ಮ ನಾಡು-ನುಡಿ ಬಗ್ಗೆ ಸಂಶೋಧನೆಯೊಂದಿಗೆ ಸಾಧನೆ ಮಾಡಿದ್ದಾರೆ. ಹರಿದು ಹಂಚಿ ಹೋದ ನಮ್ಮ ಕನ್ನಡ ನಾಡು ಒಂದುಗೂಡಿಸುವ ಆದ್ಯ ಕರ್ತವ್ಯ ನಮ್ಮ ಮುಂದಿನ ಯುವಪೀಳಿಗೆಯ ಮೇಲಿದೆ. ಭಾಷಾಭಿಮಾನ ಹೃದಯಾಂತರಾಳದಿಂದ ಬಂದಾಗ ಮಾತ್ರ ಅದಕ್ಕೆ ಗಟ್ಟಿತನ ಬರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉರ್ದು ಪ್ರಾಂತ್ಯದಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಿರುವುದು ಒಂದು ಹೊಸ ಪರಿಕಲ್ಪನೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, “ಮಾತೃಭಾಷೆ ಯಾವುದಿದ್ದರೂ ಆಡುಭಾಷೆ ಕನ್ನಡವಾಗಬೇಕು. ಭಾರತದ ಪ್ರಥಮ ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರಾದ ಮಂಜೇಶ್ವರ ಗೋವಿಂದ ಪೈಯಿಂದ ಮಾತೃಭಾಷೆ ಕೊಂಕಣಿಯಾದರೂ ಕನ್ನಡದ ಆಳವಾದ ಅಧ್ಯಯನ, ಕಠಿಣ ಪರಿಶ್ರಮದಿಂದ ಕನ್ನಡ ನಾಡು-ನುಡಿ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಾಧಕರಾದರು. ನಾವು ಅನ್ಯ ಭಾಷೆಯನ್ನು ದ್ವೇಷಿಸುವುದು ಬೇಡಾ ನಮ್ಮ ಭಾಷೆ ಪ್ರೀತಿಸೋಣ, ವೈಭವೀಕರಿಸೋಣ ಅದು ಕನ್ನಡಿಗರ ಆದ್ಯ ಕರ್ತವ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಉರ್ದು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಟಿ. ಅಂಬಣ್ಣ ಮಾತನಾಡಿ, ಕನ್ನಡ ಭಾಷೆ, ಕೇವಲ ಮಾತಿಗಾಗಿ ಅಲ್ಲ. ಅದು ನಮ್ಮ ಸಂಸ್ಕೃತಿ. ಭಾರತದ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳಿಗೆ ಭಾಜನರಾದ ಕರ್ನಾಟಕದ ಸಾಹಿತ್ಯ ದಿಗ್ಗಜರು ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಮೇರು ವ್ಯಕ್ತಿತ್ವದ ಮಾದರಿಯಾದವರು. ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಸಾಧನೆಗಳನ್ನು ಅನುಸರಿಸಿ ಮಕ್ಕಳು ಮುಂದಿನ ದಿನಮಾನಗಳಲ್ಲಿ ಸಾಧನೆ ಮಾಡಿ ಆ ಸಾಲಲ್ಲಿ ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪರಿಷತ್ನ ನಿರ್ದೇಕರಾದ ಎಂ. ಷಡಾಕ್ಷರಪ್ಪ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಶಿಕ್ಷಕಿಯರ ನಾಡಗೀತೆಯೊಂದಿಗೆ ಪ್ರಾರಂಭವಾದ ಸಭೆಗೆ ಶಿಕ್ಷಕಿ ಶೈಲಜಾ ಕೆ.ಬಿ. ಸ್ವಾಗತಿಸಿದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮಕ್ಕಳಿಗೆ ಸಾಹಿತ್ಯರಸರಂಜನೆ ನಡೆಸಿಕೊಟ್ಟರು. ಶಿಕ್ಷಕಿ ಅಂಬುಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ಸೈಯದ್ ಅಶ್ವಿಕ್ ಅಲಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
