ಬೆಳಗಾವಿ:
ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ
ಪಾವತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಇನ್ನಷ್ಟು ಚುರುಕುಗೊಂಡಿದೆ.

ಪ್ರತಿಭಟನಾ ನಿರತ ರೈತರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ ನಡೆಸಿದ ಸಂಧಾನ ವಿಫಲವಾಗಿ ರೈತರು ಪ್ರತಿಭಠನೆ ಮುಂದುವರೆಸಿದ್ದಾರೆ. ನಂತರ ಮೊನ್ನೆ ದೂರವಾಣಿ ಮೂಲಕ ಸಂಪರ್ಕಸಾಧಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಸೋಮವಾರ ಬೆಳಗಾವಿಗೆ ಆಗಮಿಸಿ, ಸಮಸ್ಯೆಗೆ ಪರಿಹಾರದ ಬಗ್ಗೆ ಚರ್ಚಿಸೋಣ ಎಂದು ಭರವಸೆ ನೀಡಿದ್ದರು.
ನಾಳೆ ಬೆಳಗಾವಿಗೆ ಮುಖ್ಯಮಂತ್ರಿಗಳ ಪ್ರವಾಸ ರದ್ದಾದ ಬಗ್ಗೆ ಮಾಹಿತಿ ಪಡೆದ ರೈತರು ಇಂದು ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇಂದು ಮುಂಂಜಾನೆ ಸುವರ್ಣ
ವಿಧಾನಸೌಧದ ಪ್ರಮುಖ ಗೇಟ್ನ ಕೀಲಿ ಒಡೆದುಹಾಕಿ ಮೂರು ಕಬ್ಬು ತುಂಬಿದ ಲಾರಿಗಳನ್ನು ರೈತರು ಸುವರ್ಣ ಸೌಧದೊಳಗಡೆ ನುಗ್ಗಿಸಲೆತ್ನಿಸಿದರು. ಇದನ್ನು ತಡೆದ ಪೊಲೀಸರು ಸುಮಾರು
50 ಜನ ರೈತರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರಿಗೆ ನೀಡಿದ ಭರವಸೆಯಂತೆ, ಸ್ವತಃ
ಬೆಳಗಾವಿಗೆ ಆಗಮಿಸಿ, ಸಮಸ್ಯೆಯ ಇತ್ಯಾರ್ಥಕ್ಕೆ ಕ್ರಮ ತೆಗೆದುಕೊಳ್ಳಬೇಕು. ಈ ಭಾಗದ
ಯಾವ ರೈತರೂ ಬೆಂಗಳೂರಿನ ವರೆಗೆ ಆಗಮಿಸುವುದಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಬ್ಬು ಬೆಳೆಗರರು ಅಥಣಿ ತಾಲೂಕಿನ ಮುರಗುಂಡಿ
ಗ್ರಾಮದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಜೇವರ್ಗಿ – ಸಂಕೇಶ್ವರ ರಸ್ತೆಯಲ್ಲಿ ಉರುಳುಸೇವೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








