ಹುಳಿಯಾರು :
ಅಭಿಯಾನದಲ್ಲಿ ಸೇರ್ಪಡೆ, ಪರಿಷ್ಕರಣೆಗೆ ಅವಕಾಶ ನೀಡಲಾಗಿತ್ತಾದರೂ ಈ ಬಗ್ಗೆ ಪ್ರಚಾರದ ಕೊರತೆಯಿಂದಾಗಿ ಹುಳಿಯಾರಿನಲ್ಲಿ ತೀರಾ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ.
ಹುಳಿಯಾರಿನ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಯುವ ಮತದಾರರಿದ್ದರೂ ಸಹ ಇಂದಿನ ಅಭಿಯಾನದಲ್ಲಿ ಕೇವಲ 99 ಅರ್ಜಿ ಸಲ್ಲಿಕೆಯಾಗಿರುವದನ್ನು ನೋಡಿದರೆ ನೀರಸ ಪ್ರತಿಕ್ರಿಯೆ ಎನ್ನಬಹುದಾಗಿದೆ. ನೊಂದಣಿ ಅಭಿಯಾನದ ಬಗ್ಗೆ ಪ್ರಚಾರವೇ ಮಾಡದಿರುವುದು ಹಿನ್ನಡೆಯಾಗಲು ಕಾರಣ ಎನ್ನಲಾಗಿದೆ.
ಕಂದಾಯ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ನಡೆದ ನೊಂದಣಿ ಕಾರ್ಯಕ್ರಮದಲ್ಲಿ ಪ್ರಚಾರ ಕೈಗೊಳ್ಳಬೇಕಾಗಿದ್ದ ಪಟ್ಟಣ ಪಂಚಾಯಿತಿಯು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದರಿಂದ ಮತದಾರರಿಗೆ ನೊಂದಣಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲದಂತಾಗಿ ಮತದಾರರು ಇತ್ತ ಸುಳಿಯದಿರಲು ಕಾರಣವಾಗಿದೆ ಎನ್ನಲಾಗಿದೆ.
ಪ್ರಚಾರದ ಬಗ್ಗೆಯೂ ಗಮನ ಮಾಡದ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಇಂದು ಅಭಿಯಾನ ನಡೆಯುತ್ತಿರುವ ಸ್ಥಳದ ಬಳಿಯೂ ಕೂಡ ತಿರುಗಿಯೂ ನೋಡದಿರುವುದು ಇವರ ಧೋರಣೆಗೆ ಹಿಡಿದ ಕನ್ನಡಿಯಾಗಿದೆ.
ಪಂಚಾಯ್ತಿಯ ಕೆಲವು ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು ಹೊರತುಪಡಿಸಿದರೆ ಪಂಚಾಯಿತಿಯವರು ಇದ್ಯಾವುದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದರು. ಪತ್ರಿಕಾ ಪ್ರಚಾರವಾಗಲಿ, ಆಟೋ ಪ್ರಚಾರವಾಗಲಿ, ಟಾಂಟಾಂ ಹಾಕುವ ಮೂಲಕ ಪ್ರಚಾರವಾಗಲಿ ಮಾಡದಿರುವುದರಿಂದ ಸಾಕಷ್ಟು ಜನಕ್ಕೆ ಇಂದು ನೋಂದಣಿ ಅಭಿಯಾನ ನಡೆಯುತ್ತಿದೆ ಎನ್ನುವುದರ ಬಗ್ಗೆ ಮಾಹಿತಿಯಿಲ್ಲವಾಗಲು ಕಾರಣವಾಯಿತು.
ಹುಳಿಯಾರು ಎಂಪಿಎಸ್ ಮೈದಾನದಲ್ಲಿ ಮಾತ್ರವೇ ಕಂಡು ಬಂದ ಒಂದು ಫ್ಲೆಕ್ಸ್ ಹೊರತುಪಡಿಸಿದರೆ ಅಭಿಯಾನದ ಸ್ಥಳಗಳಲ್ಲಾಗಲಿ ಅಥವಾ ಆಯಾ ಬಡಾವಣೆಗಳಲ್ಲಿನ ಮತಗಟ್ಟೆಗಳಲ್ಲಾಗಲಿ ಇಂದು ನೊಂದಣಿ ನಡೆಯುತ್ತಿರುವುದಕ್ಕೆ ಯಾವುದೇ ಪೂರಕ ಪ್ರಚಾರ ಕಂಡು ಬರಲಿಲ್ಲ. ಮುಂಚಿತವಾಗಿಯೇ ಪ್ರಚಾರ ಮಾಡಿದ್ದಲ್ಲಿ ಹೊರ ಊರುಗಳಲ್ಲಿ, ಕಾಲೇಜುಗಳಲ್ಲಿ ಇದ್ದ ಯುವ ಮತದಾರರು ಇಂದು ಊರಿಗೆ ಬಂದು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅವಕಾಶವಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ