ಹುಳಿಯಾರು
ಹೋಬಳಿಯ ಶ್ರೀ ಕ್ಷೇತ್ರ ದಸೂಡಿಯಲ್ಲಿ ಹನುಮ ಜಯಂತಿಯನ್ನು ಬುಧವಾರ ಮತ್ತು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬುಧವಾರ ಬೆಳಿಗ್ಗೆ ಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ ಮಾಡಿ 101 ಪೂಜೆಗಳಿಂದ ಶ್ರೀ ಸ್ವಾಮಿಯವರನ್ನು ರಂಜಿಸಿ, ಮಹಾಮಂಗಳಾರತಿ ಮಾಡಲಾಯಿತು. ಅಂದು ಸಂಜೆ ಸುಮಂಗಲೆಯರಿಂದ ದೀಪಸ್ತಂಭವನ್ನು ಪ್ರತಿಷ್ಠಾಪಿಸಿ, ಕುಂಕುಮಾರ್ಚನೆ ನಡೆದು ಲಲಿತ ಸಹಸ್ರನಾಮ ಪಠಿಸಲಾಯಿತು.
ಗುರುವಾರ ಶ್ರೀ ಸ್ವಾಮಿಯವರ ರಥೋತ್ಸವ ಜರುಗಿತು. ನಾನಾ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡ ಭವ್ಯ ಮಂಟಪದಲ್ಲಿ ಆಂಜನೇಯಸ್ವಾಮಿಯವರನ್ನು ಕೂರಿಸಿ, ರಾಜಬೀದಿಗಳಲ್ಲಿ ಸಕಲ ಬಿರುದಾವಳಿಗಳ ಸಮೇತ, ಗೋವಿಂದ ನಾಮಸ್ಮರಣೆಯೊಂದಿಗೆ ಸ್ವಾಮಿಗೆ ಜೈಕಾರ ಹಾಕುತ್ತ, ಅದ್ದೂರಿ ಮೆರವಣಿಗೆ ಮಾಡಲಾಯಿತು.
ಉತ್ಸವದ ಮುಂದೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ವಿಶೇಷ ಕೋಲಾಟ ಹಾಗೂ ವೀರಗಾಸೆ ನೃತ್ಯ, ಮಂಗಳ ವಾಧ್ಯಗಳು ನಡೆದು ಉತ್ಸವಕ್ಕೆ ವಿಶೇಷ ಮೆರಗು ತಂದಿತ್ತು.
ವೈಭವದ ರಾಜಬೀದಿ ಉತ್ಸವ ಮುಕ್ತಾಯಗೊಂಡ ನಂತರ ದೇವಾಲಯದಲ್ಲಿ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು `ಮಾರುತಿರಾಯನ’ ಕೃಪೆಗೆ ಪಾತ್ರರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ