ಕಾಮಗಾರಿ ಬೇಗ ಮುಗಿಸಿ ಧೂಳು ಮುಕ್ತ ಮಾಡಲು ಜೆಡಿಎಸ್ ಒತ್ತಾಯ.

ಹೊಸಪೇಟೆ :

      ನಗರದ ವಿವಿಧ ವಾಡ್೯ಗಳಲ್ಲಿ ಕಾಮಗಾರಿಗಳನ್ನು ಏಕಕಾಲಕ್ಕೆ ಕೈಗೊಂಡಿದ್ದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮುಖಂಡ ದೀಪಕ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ನಗರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

       ಜೆಡಿಎಸ್ ಮುಖಂಡ ದೀಪಕ್ ಸಿಂಗ್ ಮಾತನಾಡಿ, ನಗರದ ನಾನಾ ವಾಡ್೯ಗಳಲ್ಲಿ ಏಕಕಾಲಕ್ಕೆ ಚರಂಡಿ, ರಸ್ತೆ, ಫುಟ್ ಪಾತ್ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದರಿಂದ ಜನರು ಓಡಾಡಲು ಸಮಸ್ಯೆಯಾಗಿದೆ. ಅಲ್ಲದೇ ಕಾಮಗಾರಿ ನೆಪದಲ್ಲಿ ಎಲ್ಲೆಂದರಲ್ಲಿ ರಸ್ತೆ ಅಗೆಯಲಾಗಿದೆ. ಇದರಿಂದ ವಾಹನ ಸವಾರರು, ಪಾದಾಚಾರಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಧೂಳುನಿಂದ ಜನರು ಹೈರಾಣರಾಗಿದ್ದಾರೆ. ಇದರಿಂದ ನಾನಾ ಕಾಯಿಲೆ ಹರಡುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಈ ಕೂಡಲೇ ಕೈಗೆತ್ತಿಕೊಂಡ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಒತ್ತಾಯಿಸಿದರು.

        ಮನವಿಯನ್ನು ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ ಸ್ವೀಕರಿಸಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಮಹಮ್ಮದ್ ರಫೀಕ್, ಹುಲುಗಪ್ಪ, ಭರತ್, ಕೇಶವ, ಚಂದ್ರಕಾಂತ್ ಮುಂತಾದವರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link