ಚಿತ್ರದುರ್ಗ:
ನಗರೋತ್ಥಾನ ಯೋಜನೆಯಡಿ ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಕೈಹಾಕಿರುವ ನಗರಸಭೆ ಬುಧವಾರ ಚೋಳುಗುಡ್ಡದ ಆಟೋಸ್ಟಾಂಡ್ ಸಮೀಪದಿಂದ ಹಿಡಿದು ಮೇಲ್ಬಾಗದವರಿಗೆ ರಸ್ತೆಯ ಎರಡು ಬದಿಗಳಲ್ಲಿ ಒತ್ತುವರಿಯಾಗಿರುವ ಮನೆಗಳನ್ನು ಜೆ.ಸಿ.ಬಿ. ಇಟಾಚಿಯಿಂದ ತೆರವುಗೊಳಿಸಿತು. ಸರ್ಕಾರದಿಂದ ಕಟ್ಟಿಸಿಕೊಡಲಾಗಿದ್ದ ಕೆಲವು ಸ್ಲಂ ಮನೆಗಳನ್ನು ನೆಲಕ್ಕುರುಳಿಸಿದ್ದರಿಂದ ಅಲ್ಲಿ ಸ್ಮಶಾನ ಮೌನ ಆವರಿಸಿತ್ತು.
ತೀರ ಕಿಷ್ಕಿಂದೆಯಾಗಿದ್ದ ರಸ್ತೆಯ ಚರಂಡಿ ಮೇಲೆ ಒತ್ತುವರಿಯಾಗಿ ಕಟ್ಟಿಕೊಂಡಿದ್ದ ಕಾಂಪೌಂಡ್, ಶೌಚಾಲಯಗಳನ್ನು ಧ್ವಂಸಗೊಳಿಸಲಾಯಿತು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ತೀವ್ರ ಸಿಟ್ಟಿಗೆದ್ದು ಅಡ್ಡಿಪಡಿಸಿದರು ಯಾವುದನ್ನು ಲೆಕ್ಕಿಸದೆ ನಗರಸಭೆ ಸಿಬ್ಬಂದಿ ಒತ್ತುವರಿಯಾಗಿ ಕಟ್ಟಿಕೊಂಡಿದ್ದ ಮನೆ, ಶೌಚಾಲಯ, ಕಾಂಪೌಂಡ್ಗೋಡೆಗಳನ್ನು ಕೆಡವಿದರು. ಇದರಿಂದ ಮನೆಯ ಅವಶೇಷಗಳು ರಸ್ತೆಯ ತುಂಬ ಹರಡಿಕೊಂಡಿದ್ದವು.
ಭೂಕಂಪವಾದಾಗ ಕಟ್ಟಡಗಳು ನೆಲಸಮವಾಗುವ ದೃಶ್ಯದಂತಿತ್ತು. ಹತ್ತಾರು ವರ್ಷಗಳಿಂದಲೂ ಇಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದವರು ನಗರಸಭೆ ದಿಟ್ಟ ಕ್ರಮಕ್ಕೆ ಹೆದರಿ ಮನೆಯ ಮುಂಭಾಗ ಚಿಂತಾಕ್ರಾಂತರಾಗಿ ಕುಳಿತಿದ್ದರು. ಇನ್ನು ಕೆಲವರು ಅರ್ಧಂಬರ್ಧ ಕೆಡವಿದ್ದ ಕಟ್ಟಡಗಳನ್ನು ಪೂರ್ಣವಾಗಿ ನೆಲಕ್ಕುರುಳಿಸುತ್ತಿದ್ದರು. ಕೆಲವರು ಜೆ.ಸಿ.ಬಿ.ಇಟಾಚಿಗಳು ಬರುವ ಮೊದಲೇ ಚರಂಡಿ ಮೇಲೆ ಒತ್ತುವರಿಯಾಗಿ ಕಟ್ಟಿಕೊಂಡಿದ್ದ ಮನೆಗಳಲ್ಲಿದ್ದ ವಸ್ತುಗಳನ್ನೆಲ್ಲಾ ಬೇರೆ ಕಡೆಗೆ ಸ್ಥಳಾಂತರಿಸುತ್ತಿದ್ದರು. ಮುಖ್ಯ ರಸ್ತೆ ಅಗಲೀಕರಣಗೊಳಿಸಲಿ ನಮ್ಮದೇನು ಅಭ್ಯಂತರವಿಲ್ಲ. ಗಲ್ಲಿಗಳಲ್ಲಿರುವ ಬಡವರು ಕೂಲಿಕಾರ್ಮಿಕರ ಮನೆಗಳನ್ನು ಕೆಡವಿದರೆ ಅವರ ಪಾಡೇನು ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಹನೀಫ್ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹೆಚ್.ಶಬ್ಬೀರ್ಭಾಷ ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ