ಬೆಂಗಳೂರು
ಬಗರ್ ಹುಕುಂ ಸಾಗುವಳಿ ಸಕ್ರಮ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಕೂಲಿಕಾರರು ರೈತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಿಟಿ ರೈಲ್ವೆ ನಿಲ್ದಾಣದಿಂದ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸೇರಿದ ಕೂಲಿಕಾರರು ಬೃಹತ್ ಮೆರವಣಿಗೆ ನಡೆಸಿದ ಕೂಲಿಕಾರರು,ತಮ್ಮ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಅವರ ಗೃಹ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಮಾರ್ಗ ಮಧ್ಯೆ ತಡೆದರು.
ಕೃಷಿ ಕೂಲಿಕಾರರು ಸುಮಾರು 15 ವರ್ಷಗಳಿಂದ ನಡೆಸಿದ ಹೋರಾಟದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮುತುವರ್ಜಿಯಿಂದ ಗೋಮಾಳ ಭೂಮಿಯನ್ನು ಉಳುಮೆ ಮಾಡುತ್ತಿದ್ದ ಬಗರ್ ಹುಕುಂ ಸಾಗುವಳಿ ರೈತರಿಗೆ ಸಕ್ರಮ ಮಾಡಲು ಅಗತ್ಯವಿದ್ದ ಕಂದಾಯ ಕಾನೂನಿಗೆ ತಿದ್ದುಪಡಿ ಹಾಗೂ ವಿಶೇಷವಾಗಿ ಬಗರ್ ಹುಕುಂ ಸಾಗುವಳಿಯ ಸಕ್ರಮಕ್ಕಾಗಿ ಹೊಸದಾಗಿ ಅರ್ಜಿ ಹಾಕಿಕೊಳ್ಳಲು ಅವಕಾಶ ನೀಡುವ ಮತ್ತೊಂದು ತಿದ್ದುಪಡಿಯನ್ನು ಹಿಂದಿನ ಸರ್ಕಾರ ಮಾಡಿತು. ಆದರೆ, ಅದು ಇಲ್ಲಿಯತನಕ ಅನುಷ್ಠಾನವಾಗದೆ ರೈತರು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಡವರು ಬದುಕು ಸಾಗಿಸುವುದೇ ಕಷ್ಟವಾಗುತ್ತಿದೆ. ತಾವು ಸಂಪಾದನೆ ಮಾಡಿದ ಬಹುತೇಕ ಹಣ ಬಾಡಿಗೆಗೆ ಹೋಗುತ್ತಿದೆ. ಶಿಕ್ಷಣ, ಆರೋಗ್ಯ, ಇತ್ಯಾದಿಗಳೆಲ್ಲಾ ದುಬಾರಿಯಾಗಿವೆ.ಜೀವನ ಸಾಗಿಸುವುದೇ ಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಬಡವರು ಅರ್ಜಿ ಸಲ್ಲಿಸಿದರು, ಇಲ್ಲಿಯ ತನಕ ನಿವೇಶನವಾಗಲಿ ಮನೆಯಾಗಲಿ ಸರ್ಕಾರ ಮಂಜೂರು ಮಾಡಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ ಬಿಡುಗಡೆ ಮಾಡಿರುವ ಫಾರಂ ನಂ.57 ಸ್ವೀಕಾರಕ್ಕೆ ಸಂಬಂಧಪಟ್ಟ ಗೊಂದಲ ನಿವಾರಣೆ, ನಗರ ವ್ಯಾಪ್ತಿ ಮತ್ತು ಕೃಷಿಗೆ ಒಳಪಟ್ಟಿರುವ ಅರಣ್ಯ ಎನ್ನಲಾಗುತ್ತಿರುವ ಬಗರ್ ಹುಕುಂ ಸಮಸ್ಯೆಯನ್ನು ಇತ್ಯಥಪಡಿಸಲು ಸರಕಾರ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
