ಬ್ಯಾಡಗಿ:
ತಾಲೂಕಿನ ಆಣೂರು ಕೆರೆ ಯೋಜನೆಯಡಿ 36 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಪಟ್ಟಣದ ಪ್ರವಾಸಿಮಂದಿರದ ಬಳಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲು ಕಾಯ್ದು ಕುಳಿತಿದ್ದ ಸ್ಥಳಕ್ಕೆ ಬಾರದೇ ತೆರಳಿದ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಹಾವೇರಿಗೆ ತೆರಳುವ ಮೂಲಕ ರೈತರನ್ನು ಅವಮಾನಿಸಿದ ಘಟನೆ ಬುಧವಾರ ನಡೆಯಿತಲ್ಲದೇ, ಆಕ್ರೋಶಗೊಂಡ ನೂರಾರು ರೈತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಸಚಿವರ ಪೂರ್ವನಿಗದಿ ಕಾರ್ಯಕ್ರಮ ಪಟ್ಟಿಯಲ್ಲಿ ರೈತರೊಂದಿಗೆ ಚರ್ಚಿಸುವ ವಿಷಯವಿರಲಿಲ್ಲ ಆದರೆ ಮಾ.9 ರಂದು ಹಾವೇರಿಯಲ್ಲಿ ನಡೆಯುವ ರಾಹುಲ್ ಗಾಂಧಿ ಕಾರ್ಯಕ್ರಮದ ಸಂದರ್ಭದಲ್ಲಿ ಕಪ್ಪುಪಟ್ಟಿ ಪ್ರದರ್ಶನ ಮಾಡುವುದಾಗಿ ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾ ಘಟಕ ಪತ್ರಿಕಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪೊಲೀಸ್ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯೊಂದಿಗೆ ಪ್ರತಿಭಟನೆ ಕೈಬಿಡುವಂತೆ ರೈತರ ಮನವೊಲಿಸುವ ಉದ್ದೇಶವನ್ನು ಹೊಂದಿತ್ತು.
ಜಿಲ್ಲೆಯ ಅಭಿವೃಧ್ಧಿ ಅಸಾಧ್ಯ: ಈ ಸಂದರ್ಭದಲ್ಲಿ ಮಾತನಾಡಿದ ಗಂಗಣ್ಣ ಎಲಿ, ಸುಳ್ಳು ಭರವಸೆಗಳನ್ನು ನೀಡುತ್ತಾ ಹೋಗುತ್ತಿರುವ ಸುಳ್ಳಿನ ಸರದಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ರೈತರ ಪ್ರಶ್ನೆಗೆ ಉತ್ತರಿಸುವ ಎದೆಗಾರಿಕೆ ಇಲ್ಲದೇ ನಮ್ಮನ್ನು ಕಾಯಿಸಿ ಹೇಳದೆ ಕೇಳದೆ ಕಾಲ್ಕಿತ್ತಿದ್ದಾರೆ ಇಂತಹ ಸಚಿವರಿಂದ ಜಿಲ್ಲೆಯ ಅಭಿವೃದ್ಧಿ ಅಸಾದ್ಯ ಈ ಹಿನ್ನಲೆಯಲ್ಲಿ ಮಾ.9 ರಂದು ಹಾವೇರಿಗೆ ಆಗಮಿಸಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ದ ಕಪ್ಪು ಬಟ್ಟೆ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಲಾಗುವುದೆಂದು ಎಂದು ಎಚ್ಚರಿಸಿದರು.
ಮೂಗಿಗೆ ತುಪ್ಪ ಒರೆಸುವ ಕೆಲಸ:ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ, ತಾಲೂಕಿನ ಆಣೂರ ಗ್ರಾಮದ ಕೆರೆಗೆ ತುಂಗಭದ್ರಾ ಜಲಾಶ ಯದಿಂದ ನೀರು ತುಂಬಿಸಿ ಸುತ್ತ ಹತ್ತಾರು ಗ್ರಾಮಗಳ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಮಂಜೂರಿ ತರುವುದಾಗಿ ರೈತರಿಗೆ ಸುಳ್ಳು ಭರವಸೆಯನ್ನು ನೀಡಿ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ ಇಂತಹ ರಾಜಕೀಯ ಮುಖಂಡರಿಂದ ಜನ ಎನನ್ನು ನೀರಿಕ್ಷೇ ಮಾಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪ್ರತಿರೋಧ ಎದುರಿಸಲು ಸಜ್ಜಾಗಿ: ಮುಖಂಡ ಮೌನೇಶ ಕಮ್ಮಾರ ಮಾತನಾಡಿ, ಬಹಿರಂಗ ಸಭೆಯಲ್ಲಿ ಮುಂದಿನ 15 ದಿನಗಳಲ್ಲಿ ಒಟ್ಟು 212 ಕೋಟಿ ರೂ.ಗಳ ಕಾಮಗಾರಿಯ ಆದೇಶ ಪ್ರತಿ ರೈತರಿಗೆ ನೀಡುವ ಭರವಸ ನೀಡಲಾಗಿತ್ತು, ಆದೇಶ ಪ್ರತಿ ಎಂದು ಕಿಡಿಕಾರಿದ ಅವರು ರೈತರನ್ನು ತಪ್ಪು ದಾರಿಗೆಳೆಯುವ ಕಾರ್ಯಕ್ರಮ ಯಾರಿಂದಲೂ ಆಗುವುದು ಬೇಡ ಎಂದ ಅವರು, ಮಾ.9 ರಂದು ರೈತರ ಪ್ರತಿರೋಧ ಎದುರಿಸಲು ಸಜ್ಜಾಗುವಂತೆ ಎಚ್ಚರಿಸಿದರು. ಈ ಸಂದರ್ಬದಲ್ಲಿ ಶಿವಯೋಗಿ ಶಿರೂರ, ಈರಣ್ಣ ಬಣಕಾರ, ಕಿರಣಕುಮಾರ ಗಡಿಗೋಳ, ಚಿಕ್ಕಣ್ಣ ಛತ್ರದ, ಅಶೋಕ ಮಾಳೇನಹಳ್ಳಿ, ಮಹದೇವಪ್ಪ ಶಿಡೇನೂರ, ಡಾ.ಕೆ.ವಿ.ದೊಡ್ಡಗೌಡ್ರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








