ಹಾನಗಲ್ಲ 

ಜೀವನ ಶಿಕ್ಷಣವನ್ನು ನೀಡುವ ಸಾಹಿತ್ಯದ ಸಂಪಾದನೆ ಇಡೀ ಮನ ಮನೆ ಬದುಕನ್ನು ಬೆಳಗುವ ಶಕ್ತಿ ಹೊಂದಿರುವಾಗ ಇತ್ತೀಚಿನ ದಿನಗಳಲ್ಲಿ ಇಂತಹ ಸಾಹಿತ್ಯದ ಓದು ಅರಿವು ದೀರವಾಗುತ್ತಿರುವುದೇ ವಿಷಾದದ ಸಂಗತಿ ಎಂದು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಸದಾಶಿವಪ್ಪ ಖೇದ ವ್ಯಕ್ತಪಡಿಸಿದರು.
ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಡಿ.ವಿ ಗುಂಡಪ್ಪನವರ ಜನ್ಮದಿನೋತ್ಸವ ಅಂಗವಾಗಿ ಡಿವಿಜಿ ನೆನಪು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಸ್ವಾಭಿಮಾನ ಹಾಗೂ ನಿರಾಡಂಭರ ಬದುಕು ಸಾಗಿಸಿದ ಸಾಹಿತಿಗಳು ಬದುಕೆ ನಮ್ಮಂತವರಿಗೆ ಮಾರ್ಗದರ್ಶನವಾಗಿದ್ದಾರೆ.
ನಮ್ಮನ್ನು ಮನುಷ್ಯನನ್ನಾಗಿ ಮಾಡುವ ಸಂಪತ್ತಿದ್ದರೆ ಅದು ಸಾಹಿತ್ಯ ಮಾತ್ರ, ನಮ್ಮನ್ನು ಅತೀವ ಸಂತೋಷದಿಂದ ಇಡಲು ಸಾಹಿತ್ಯ ಪ್ರಯೋಜನಕಾರಿಯಾಗಿದೆ. ಸಾಹಿತ್ಯದಲ್ಲಿ ವಿವಿಧ ಮಜಲಿಗಳಿದ್ದು ಅವುಗಳಲ್ಲಿ ನಾವು ಯಾವುದನ್ನು ಓದುತ್ತಾ ಸಾಗುತ್ತೆವೆಯೊ ಅದೆ ಪ್ರಪಂಚಕ್ಕೆ ಕೊಂಡೊಯ್ಯವ ಸಾಧನ ಸಾಹಿತ್ಯವಾಗಿದೆ. ಅದನ್ನು ಓದಿ ತಿಳಿದುಕೊಳ್ಳುವುದರ ಜೊತೆಗೆ ಅಳವಡಿಸಿಕೊಳ್ಳವುದು ಮುಖ್ಯವಾಗಿದೆ ಎಂದರು
ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಜನಪದ ಕಾಲದಿಂದ ಇಂದಿನವರೆಗೂ ನಮ್ಮೊಳಗೆ ಉಳಿದಿರುವ ಸಾಹಿತ್ಯ ಭಂಡಾರ ಸದಾಕಾಲಕ್ಕೂ ಮಾರ್ಗದರ್ಶನ ಮಾಡುವಂತಹದ್ದಾಗಿದೆ. ಕರುಳರಿಯುವಂತೆ ಜಗದ ಸತ್ಯಗಳನ್ನು ಹೇಳಿದ ಸಾಹಿತಿಗಳಲ್ಲಿ ಡಿವಿಜಿ ಮೇಲ್ಪಂಕ್ತಿಯವರು. ಜೀವನದ ಸತ್ಯಗಳನ್ನು ಸ್ಪುಟವಾಗಿ ಬಿಡಿಸಿಟ್ಟು ಹೃದಯ ಮನಸ್ಸುಗಳನ್ನು ತಟ್ಟಿ ಗಟ್ಟಿಯಾಗಿ ಉಳಿದ ಸಾಹಿತ್ಯ ಡಿವಿಜಿ ಯವರದ್ದಾಗಿದೆ.
ಕಷ್ಟಗಳಿಂದ ಹೊರಬರಲು ಒಳ ದಾರಿಗಳನ್ನು ಹುಡುಕದೆ ತತ್ವಬದ್ಧರಾಗಿ ಬದುಕಿದ ಮಹಾನ್ ಚೇತನ. ತಮ್ಮ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಬೆಳೆಸಿದ ವೇದಾಂತಿ. ಸಾಹಿತ್ಯದಲ್ಲಿ ಎಷ್ಟು ಶಕ್ತಿ ಇದೆ ಎಂದರೆ ಅದು ನಮ್ಮನ್ನ ಎಂತಹ ಕಷ್ಟದಲ್ಲಿಯು ಕೈ ಹಿಡಿಯುವ ಸಾಧನವಾಗಿದೆ. ಸಾಹಿತ್ಯವನ್ನು ಓದಿದಾಗ ಅದು ನಮ್ಮನ್ನು ಅದ್ಬುತ ವ್ಯಕ್ತಿಗಳನ್ನಾಗಿ ಮಾಡುತ್ತದೆ. ದೇಶ ಸುತ್ತುವುದು ಎಷ್ಟು ಮುಖ್ಯವೊ ಕೋಶ ಓದುವುದು ಅಷ್ಟೆ ಮುಖ್ಯ ಎಂದರು.
ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಎಮ್.ಬಿ.ನಾಯ್ಕ ಮಾತನಾಡಿ, ನೋಡಿ ತಿಳಿ, ಮಾಡಿ ಕಲಿ ಎಂಬ ಗಾದೆಯಂತೆ, ಕೆಲವಂ ಬಲ್ಲವರಿಂದ ಕಲಿತು, ಕೆಲವಂ ಅಧ್ಯಯನ ಮಾಡುವುದರ ಮೂಲಕ ತಿಳಿದುಕೊಳ್ಳುವುದು ಬದುಕು. ಸಾಹಿತ್ಯವೆ ನಮ್ಮ ಉತ್ತಮ ಗೆಳೆಯ ಮಾರ್ಗದರ್ಶಕ. ಅದರ ಶಕ್ತಿ ನಮ್ಮೊಳಗೆ ಸದಾ ಸಂಚರಿಸಲು ಸತ್ಯ ಹೇಳುವ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಅನುಸರಿಸುವಂತಾಗಬೇಕು ಎಂದರು.
ಪ್ರಶಿಕ್ಷಣಾರ್ಥಿ ವೀರೇಶ ಮತ್ತು ಪ್ರೇಮಾ ಡಿವಿಜಿಯವರ ಕುರಿತು ಅಭಿಪ್ರಾಯ ಹಂಚಿಕೊಂಡರು. ಶ್ವೇತಾ ಶಿವಗಿರಿ ಮಂಕುತಿಮ್ಮನ ಕಗ್ಗ ಹಾಡಿದರು, ಡಾ.ವಿಶ್ವನಾಥ ಬೊಂದಾಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರೊ.ರಾಘವೇಂದ್ರ ಮಾಡಳ್ಳಿ, ಪ್ರೊ. ಜಿ.ವಿ. ಪ್ರಕಾಶ್, ಪ್ರೊ.ಹರೀಶ ಟಿ.ತಿರುಕಪ್ಪ, ಡಾ. ಬಿ.ಎಸ್. ರುದ್ರೇಶ್, ಪ್ರೊ. ಜಿ.ಟಿ.ಜಿತೇಂದ್ರ, ಪ್ರೊ. ಆರ್.ದಿನೇಶ, ಪ್ರೊ. ಮಹೇಶ್. ಅಕ್ಕಿವಳ್ಳಿ, ಎಮ್. ಎಮ್. ನಿಂಗೋಜಿ, ಎಸ್.ಸಿ.ವಿರಕ್ತಮಠ, ಸಾವಿತ್ರಾ ಚೂರಿ ಪ್ರಾರ್ಥಿಸಿದರು, ಡಾ.ಪ್ರಕಾಶ ಹೂಲ್ಲೂರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
