ತುಮಕೂರು
ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ 112 ನೇ ಜಯಂತಿ ಪ್ರಯುಕ್ತ ಗುರುವಂದನಾ ಮಹೋತ್ಸವವು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಸಂಜೆ 6ಗಂಟೆಗೆ ಸಾವಿರಾರು ಭಕ್ತಾದಿಗಳೊಂದಿಗೆ ಭಕ್ತಿಪೂರ್ವಕವಾಗಿ ನಡೆಯಲಿದೆ.
ಈ ಪ್ರಯುಕ್ತ ಭಾನುವಾರ ಸಂಜೆ 4.45 ಗಂಟೆಗೆ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಮೂರ್ತಿಯ ಭವ್ಯ ಮೆರವಣಿಗೆಗೆ ನಗರದ ಎಸ್.ಐ.ಟಿ. ಕ್ಯಾಂಪಸ್ನೊಳಗೆ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀ ಹನುಮಂತನಾಥಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ನಗರ ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್, ಕೋರಿ ಮಂಜುನಾಥ್, ಡಾ.ಪರಮೇಶ್, ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಆರ್.ಎನ್.ವೆಂಕಟಾಚಲಯ ಮುಂತಾದವರು ಉಪಸ್ಥಿತರಿದ್ದು, ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮೂರ್ತಿಯ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಮನಮೋಹಕ ಆಕರ್ಷಣೆಯಾಗಿದ್ದು, ನೋಡುಗರ ಕಣ್ಮನ ತಣಿಸಿದವು. ವಿಶೇಷವಾಗಿ ಹೆಣ್ಣು ಮಕ್ಕಳ ಜಾನಪದ ನೃತ್ಯ, ಧ್ವಜ ಕುಣಿತ, ಬೊಂಬೆ ಕುಣಿತ, ವೀರಭದ್ರ ವೇಷಧಾರಿಗಳ ವೀರಗಾಸೆ ನೃತ್ಯ, ವಿವಿಧ ಪ್ರಕಾರದ ತಾಳವಾದ್ಯಗಳು ಮುಂತಾದವುಗಳಿಂದ ಮೆರವಣಿಗೆಯು ಭಕ್ತವೃಂದದ ಹೃನ್ಮನದಲ್ಲಿ ಸ್ವಾಮೀಜಿ ಕುರಿತು ಭಕ್ತಿಭಾವ ಮೂಡಿಸಿತು. ಅಂತಿಮವಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನವನ್ನು ತಲುಪಿ ಮೆರವಣಿಗೆಯು ಮುಕ್ತಾಯವಾಯಿತು. ಇಂದು ಸಂಜೆ 6 ಗಂಟೆಗೆ ಇದೇ ಸರ್ಕಾರಿ ಜೂನಿಯರ್ ಮೈದಾನದಲ್ಲಿ ನಾಗರಿಕ ಸಮಿತಿ ವತಿಯಿಂದ ಸ್ವಾಮೀಜಿಯ 112 ನೇ ಗುರುವಂದನಾ ಮಹೋತ್ಸವವು ಜರುಗಲಿದೆ.