ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಚಿತ್ರದುರ್ಗ ಜಿಲ್ಲೆಯಿಂದ ಆಯ್ಕೆಯಾಗುವ ಎಲ್ಲಾ ಪಕ್ಷಗಳ ಈ ಕ್ಷೇತ್ರದ ಸಂಸತ್ ಸದಸ್ಯರು ಜಿಲ್ಲೆಯ ಮೂಲಭೂತ ಸೌಕರ್ಯಗಳನ್ನು ನಿರ್ಲಕ್ಷಿಸಿರುವುದಲ್ಲದೆ ಕೇಂದ್ರದಿಂದ ಯಾವುದೇ ರೀತಿಯ ಯೋಜನೆಗಳನ್ನು ಜಿಲ್ಲೆಗೆ ಅಭಿವೃದ್ಧಿಗೆ ಬಳಸಿಲ್ಲ. ರಾಜ್ಯದ ಹಿಂದುಳಿದ ಜಿಲ್ಲೆ ಎಂಬ ಖ್ಯಾತಿ ಪಡೆದ ಚಿತ್ರದುರ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಸ್ತುತ ವರ್ಷದ ಲೋಕಸಭಾ ಚುನಾವಣೆ ಬಿಎಸ್ಪಿ ಪಕ್ಷಕ್ಕೆ ಮತ ನೀಡುವಂತೆ ಪಕ್ಷದ ಅಭ್ಯರ್ಥಿ ಸಿ.ಯು.ಮಹಂತೇಶ್ ಮನವಿ ಮಾಡಿದ್ಧಾರೆ.
ಅವರು, ಬುಧವಾರ ಮಧ್ಯಾಹ್ನ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚುನಾವಣಾ ಪ್ರಚಾರವನ್ನು ಆರಂಭಿಸಿದರು. ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಮುಗಿಸಿದ್ದು, ಬಹುಜನ ಸಮಾಜ ಪಕ್ಷದ ತತ್ವ ಸಿದ್ದಾಂತಗಳನ್ನು ಮತದಾರರು ಗೌರವಿಸುವರು ಎಂಬ ಆತ್ಮವಿಶ್ವಾಸ ಉಂಟಾಗಿದೆ ಎಂದರು.
ಜಿಲ್ಲೆಯ ಅಪ್ಪರ್ ಭದ್ರ ಮೇಲ್ದಂಡೆ ಯೋಜನೆ, ಗುಡಿಸಲು ಮುಕ್ತ ಜಿಲ್ಲೆ, ವಿವಿಧ ಕೈಗಾರಿಕೆಗಳ ಸ್ಥಾಪನೆ, ಮಹಿಳಾ ಸ್ವಸಹಾಯಕ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ನಮ್ಮ ಪಕ್ಷ ಹಮ್ಮಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎನ್.ಪ್ರಶಾಂತ್, ಜಿಲ್ಲಾಧ್ಯಕ್ಷ ಎಸ್.ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಕೆ.ತಿಮ್ಮಪ್ಪ, ಕೆ.ಎನ್.ದೊಡ್ಡಹಟ್ಟಿಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಬಿ. ಸಿದ್ದಪ್ಪ, ಎಚ್.ಆರ್. ಶ್ರೀನಿವಾಸ, ಬಿ. ಗಿರೀಶ್, ರುದ್ರಮುನಿ, ಪಾಲಾಕ್ಷ, ವಿರುಪಾಕ್ಷ, ಗೋವಿಂದಪ್ಪ, ಓಬಣ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
