ಹರಪನಹಳ್ಳಿ
ಪತ್ರಿಕಾ ಕ್ಷೇತ್ರದಲ್ಲಿ ಹಗಲೂ ರಾತ್ರಿ ದುಡಿಯುವ ಪ್ರಾಮಾಣಿಕ ಪತ್ರಕರ್ತರ ಬದುಕು ಇಂದು ದಾರುಣ ಸ್ಥಿತಿಗೆ ತಲುಪಿದ್ದು ಕ್ರಿಯಾಶೀಲ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಹೋರಾಟಕ್ಕೆ ಅಣಿಯಾಗುವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಂಗ್ಲೆ ಮಲ್ಲಿಕಾರ್ಜುನ ಭರವಸೆ ನೀಡಿದರು.
ಹರಪನಹಳ್ಳಿ ತಾಲೂಕು ಘಟಕದ ನೂತನ ಕಚೇರಿ ಉದ್ಘಾಟನೆ, ಸಂಘದ ನೂತನ ಗುರುತಿನ ಕಾರ್ಡುಗಳ ವಿತರಣೆ ಬಳಿಕ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೇನ್ ಸ್ಟ್ರೀಮ್ ಎಂದು ಬೀಗುವ ಪತ್ರಕರ್ತರಿಗೆ ಮಾಸಿಕ ವೇತನ, ಟಿಎ, ಡಿಎ, ಪ್ರಮೋಷನ್ ಸೇರಿದಂತೆ ಎಲ್ಲ ಸೌಕರ್ಯಗಳು ಲಭಿಸುತ್ತಿವೆ.
ಪತ್ರಿಕಾ ಕ್ಷೇತ್ರದಲ್ಲೂ ಜಾತಿ ಲೆಕ್ಕಾಚಾರ, ಗುಂಪುಗಾರಿಕೆ ನಡೆಯುತ್ತಿದೆ. ಇದರ ನಡುವೆ ಪತ್ರಿಕೋದ್ಯಮವನ್ನೇ ನೆಚ್ಚಿ ಜೀವದ ಹಂಗು ತೊರೆದು ಕೆಲಸ ಮಾಡುವ ಅದೆಷ್ಡೋ ಪತ್ರಕರ್ತರಿಗೆ ವೇತನವೂ ಸಿಗದಂತ ಶೋಚನೀಯ ಸ್ಥಿತಿ ಇದೆ. ಅನೇಕ ಪತ್ರಕರ್ತರು ತಮ್ಮ ಕುಟುಂಬ ನಿರ್ವಹಣೆಗೂ ಪರಿತಪಿಸುವಂತಾಗಿದೆ.
ದಶಕಗಳ ಕಾಲ ದುಡಿಯುತ್ತಿರುವ ಪ್ರಾಮಾಣಿಕ ಪತ್ರಕರ್ತರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ಅವಮಾನಿಸುವಂಥ ಅಮಾನವೀಯ ಸಂದರ್ಭ, ಸಂಘರ್ಷಗಳು ಸೃಷ್ಟಿಯಾಗುತ್ತಿರುವುದು ದುರಂತದ ವಿಚಾರವಾಗಿದೆ. ತಾಲೂಕು, ಹೋಬಳಿಯಲ್ಲಿ ದುಡಿಯುವ ಪತ್ರಕರ್ತರ ಸ್ಥಿತಿಯೂ ಇದಕ್ಕೆ ಹೊರತಲ್ಲ. ಇದೆಲ್ಲವನ್ನೂ ಕ್ರೋಢೀಕರಿಸಿ ಪತ್ರಕರ್ತರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಿಸಿ ಸರ್ಕಾರದಿಂದ ಸೌಲಭ್ಯ ಒದಗಿಸಲು ಹೋರಾಟ ಮಾಡುವುದಾಗಿ ಹೇಳಿದರು. ಪತ್ರಕರ್ತರೇ ಇಂದು ಮತ್ತೊಬ್ಬ ಪತ್ರಕರ್ತನನ್ನು ಶೋಷಿಸುವ ಸನ್ನಿವೇಶಗಳು ಎದುರಾಗಿರುವುದು ಶೋಚನೀಯ ಎಂದು ವಿಷಾದಿಸಿದರು.
ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರ ಸದ್ಯೋಜಾತ ಸ್ವಾಮೀಜಿ ಆಶೀರ್ವಚನ ನೀಡಿ, ಪತ್ರಕರ್ತರು ಯಾವುದೇ ಪಕ್ಷ, ಜಾತಿಗೆ ಅಂಟಿಕೊಳ್ಳದೇ ಕೆಲಸ ಮಾಡಬೇಕೆಂದು ಕರೆನೀಡಿದರು.ಉಚ್ಚಂಗಿ ದುರ್ಗ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆಎಂ ಶಿವಕುಮಾರಸ್ವಾಮಿ, ಸಂಘದ ಜಿಲ್ಲಾಧ್ಯಕ್ಷ ವಿ.ಜಗನ್ಮೋಹನ ರೆಡ್ಡಿ, ತಾಲೂಕು ಘಟಕದ ಗೌರವಾಧ್ಯಕ್ಷ ಹೆಚ್ ಮಲ್ಲಿಕಾರ್ಜುನ, ಅಧ್ಯಕ್ಷ ಎಸ್.ಎನ್ ಕುಮಾರ್ ಸೇರಿದಂತೆ ಸ್ಥಳೀಯ ಎಲ್ಲ ದಿನ ಮಾಧ್ಯಮ ಪತ್ರಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
