ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿ:ಎಸ್.ಕೆ.ಕರಿಯಣ್ಣನವರ

ಹಾವೇರಿ

    ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾವಹಿಸಿ. ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಬೇಕು. ಕಳಪೆ ಬಿತ್ತನೆ ಬೀಜ ಉತ್ಪಾದನಾ ಹಾಗೂ ಮಾರಾಟ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಸೂಚಿಸಿದರು.

     ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೆಲವೆಡೆ ಕಳಪೆ ಬಿತ್ತನೆ ಬೀಜ ಮಾರಾಟಮಾಡಿ ರೈತರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಾಗೀಗಳಾದ ಮಾರಾಟಗಾರರು, ಬೀಜ ಉತ್ಪಾದನಾ ಕಂಪನಿಗಳು ಹಾಗೂ ಬೀಜವನ್ನು ಪ್ರಮಾಣಿಕರಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದರು.

     ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಅವರು ಸಭೆಗೆ ವಿವರಣೆ ನೀಡಿ, ರೈತರಿಗೆ ವಿತರಣೆಮಾಡಲಾದ ಕಳಪೆ ಬೀಜಗಳನ್ನು ಹಿಂಪಡೆದು ಬೇರೆ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಕಳಪೆ ಬೀಜಗಳನ್ನು ಧಾರವಾಡದ ಪ್ರಯೋಗಾಲಯಕ್ಕೆ ಪರೀಕ್ಷೆ ಕಳುಹಿಸಲಾಗಿದೆ. ಪ್ರಮಾಣಕರಿಸಿದ ಕೆ.ಓ.ಎಫ್. ಹಾಗೂ ಎನ್.ಎಸ್.ಸಿ. ಸಂಸ್ಥೆಗಳ ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡಲಾಗಿದೆ. ಪ್ರಯೋಗಾಲಯದ ವರದಿ ನಂತರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

      ರೈತ ಸಂಪರ್ಕ ಕೇಂದ್ರಗಳ ಮೂಲಕ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜದ ಬಗ್ಗೆ ನಿಗಾವಹಿಸಲು ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

      ಜಿಲ್ಲೆಯ ಕೆಲವು ಭಾಗಗಳಲ್ಲಿ ಅಡಿಕೆ ಸಸಿಯ ಮೇಲೆ ಕೆಂಪು ರಸ ಉತ್ಪತ್ತಿಯಾಗುವ ರೋಗ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ರೋಗ ನಿವಾರಣೆಗೆ ರೈತರಿಗೆ ಸೂಕ್ತ ಸಲಹೆ ನೀಡಬೇಕು. ತೋಟಗಾರಿಕೆ ತಜ್ಞರು ರೈತರ ತೋಟಗಳಿಗೆ ಭೇಟಿ ನೀಡಿ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲು ಕ್ರಮವಹಿಸುವಂತೆ ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ರೈತರಿಗೆ ವಿತರಿಸಿರುವ ನೆರಳು ಪರೆದೆ ಕಳಪೆ ಗುಣಮಟ್ಟದ್ದಾಗಿದೆ ಎಂದು ರೈತರು ದೂರು ನೀಡಿದ್ದಾರೆ. ಈ ಕುರಿತಂತೆ ಪರಿಶೀಲನೆ ನಡೆಸಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಕೃಷಿ ಇಲಾಖೆಯಿಂದ ವಿತರಿಸುವ ಕೃಷಿ ಹೊಂಡ ತಾಡಪಾಲುಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೂಲಕ ವಿತರಣೆಯಾಗಬಾರದು ಎಂದು ಸೂಚಿಸಿದರು.

     ಕಳೆದ ಆರ್ಥಿಕ ವರ್ಷದ ಅನುದಾನದಲ್ಲಿ ಜಿಲ್ಲೆಯ ವಿವಿಧ ಇಲಾಖೆಯಡಿ ನಿರ್ಮಾಣವಾಗಿರುವ ಕಟ್ಟಡಗಳ ನಿರ್ಮಾಣದ ಪ್ರಗತಿ ಹಾಗೂ ವೆಚ್ಚವಾದ ಅನುದಾನದ ವಿವರಪಡೆದ ಕರಿಯಣ್ಣನವರ ಇಲಾಖೆವಾರು ಕಟ್ಟಡಗಳ ಪ್ರಗತಿ ಹಾಗೂ ಗುಣಮಟ್ಟ ಕುರಿತಂತೆ ಸ್ಥಳಪರಿಶೀಲನೆ ಮಾಡಲಾಗುವುದು. ಈ ಕುರಿತಂತೆ ದಿನಾಂಕ ನಿಗಧಿಪಡಿಸಿ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆಗೊಂಡರೂ ನಿರ್ಮಾಣ ಆರಂಭಿಸದ ಕಟ್ಟಡಗಳನ್ನು ತ್ವರಿತವಾಗಿ ಆರಂಭಿಸಬೇಕು. ನಿವೇಶನ ಇತ್ಯಾದಿ ಸಮಸ್ಯೆಗಳನ್ನು ಇಲಾಖೆ ಮುಖ್ಯಸ್ಥರು ಸಂಬಂಧಿಸಿದವರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಲು ಸಲಹೆ ನೀಡಿದರು.

     ತುಂಗಾ ಮೇಲ್ದಂಡೆ ಯೋಜನೆಯಡಿ ರಾಣೇಬೆನ್ನೂರು, ರಟ್ಟೀಹಳ್ಳಿ ಹಾಗೂ ಹಿರೇಕೆರೂರು ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಾಲುವೆಗಳ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿ ಮುಖ್ಯ ಕಾಲುವೆ ಜೊತೆಗೆ ಹೊಲಗಾಲುವೆಗಳನ್ನು ನಿರ್ಮಿಸಬೇಕು. ಕಾಡಾಕ್ಕೆ ಈ ಕುರಿತಂತೆ ಮನವಿ ಮಾಡಿಕೊಳ್ಳಬೇಕು. ಹೊಲಗಾಲುವೆ ಇಲ್ಲದೆ ಜಮೀನಿನಲ್ಲಿ ನೀರು ಹಾದು ಹೋದರು ನೂರಾರು ಎಕರೆ ಜಮೀನಿಗೆ ನೀರುಣಿಸಲು ಸಾಧ್ಯವಾಗಿಲ್ಲ.

     ಈ ಕುರಿತಂತೆ ಆದ್ಯತೆಯ ಮೇಲೆ ಕ್ರಮವಹಿಸಿ ಎಂದು ಯುಟಿಪಿ ಅಭಿಯಂತರರಿಗೆ ಸೂಚನೆ ನೀಡಿದರು.ಕಾಲುವೆಯಲ್ಲಿ ನೀರು ಹರಿಸಿದಾಗ ಜನ ಜಾನುವಾರುಗಳು ಆಕಸ್ಮಿಕ ಕಾಲುಜಾರುವಿಕೆಯಿಂದ ಕೊಚ್ಚಿಹೋಗಿ ಸಾವನ್ನಪ್ಪುತ್ತಿರುವ ಘಟನೆಗಳು ಈ ಭಾಗದಲ್ಲಿ ಪುನರಾವರ್ತನೆಯಾಗುತ್ತಿವೆ. ಕನಿಷ್ಟ ಕಾಲುಜಾರಿ ಬಿದ್ದಾಗ ಸಮೀಪದಲ್ಲೇ ವ್ಯಕ್ತಿ ಅಥವಾ ಜಾನುವಾರುಗಳ ಶೋಧನೆಗೆ ಅನುಕೂಲವಾಗಲು ಕಬ್ಬಿಣದ ತಡೆಗೋಡೆಗಳನ್ನು ಕಾಲುವೆ ಅಡ್ಡಲಾಗಿ ನಿರ್ಮಿಸಬೇಕು ಹಾಗೂ ಕ್ಯಾಟಲ್ ರ್ಯಾಂಪ್ ಹಾಗೂ ಸೋಪಾನಮ್‍ಗಳನ್ನು ನಿರ್ಮಿಸಿಸುವುದರ ಮೂಲಕ ಜಾನುವಾರುಗಳಿಗೆ ನೀರು ಕುಡಿಯಲು ಹಾಗೂ ಜನರು ಬಟ್ಟೆ ತೊಳೆಯಲು ಅನುಕೂಲಮಾಡಿಕೊಡಲು ಸೂಚಿಸಿದರು. ಇದರೊಂದಿಗೆ ಕಾಲುವೆಯ ಬದುಗಳಲ್ಲಿ ಬೆಳೆದಿರುವ ಜಾಲಿ ಇತರ ಗಿಡಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

     ಗ್ರಾಮ ವಿಕಾಸ ಯೋಜನೆಯಡಿ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ ಹಾಗೂ ಕೆ.ಆರ್.ಐ.ಡಿ.ಎಲ್. ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ವಿವರ ಪಡೆದ ಅವರು ಆಯ್ಕೆಯಾದ ಕೆಲ ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ಆರಂಭಿಸದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಭರಡಿ ಹಾಗೂ ಹುರಳಿಹಾಳ ಗ್ರಾಮಗಳಲ್ಲಿ ಗ್ರಾಮ ವಿಕಾಸ ಯೋಜನೆ ಆರಂಭಿಸಲು ಸಹಕರಿಸದ ಪಿ.ಡಿ.ಓ.ಗೆ ನೋಟೀಸ್ ಜಾರಿಮಾಡಲು ಸೂಚಿಸಿದರು.

      ವಿದ್ಯಾರ್ಥಿ ನಿಲಯಗಳಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶ ಪೂರ್ಣಗೊಂಡನಂತರ ಯಾವ ಯಾವ ತಾಲೂಕಿನ ಕಾಲೇಜು ವಿದ್ಯಾರ್ಥಿ ನಿಲಯಗಳ ಪ್ರವೇಶ ಸಂಖ್ಯೆ ನಿಗಧಿತ ಪ್ರಮಾಣದಲ್ಲಿ ಆಗದಿದ್ದರೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ ಜಿಲ್ಲಾ ಕೇಂದ್ರಕ್ಕೆ ಈ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

      ಮಹಿಳೆಯರಿಗೆ, ವಿಕಲಚೇತನರಿಗೆ , ಹಿರಿಯ ನಾಗರಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಒಳಗೊಂಡಂತೆ ವಿವಿಧ ವರ್ಗಗಳಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಸಕಾಲಕ್ಕೆ ಆಯಾ ವರ್ಗದ ಜನರಿಗೆ ತಲುಪಬೇಕು. ಆಯಾ ವರ್ಷವೇ ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಬೇಕು. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ಕುರಿತಂತೆ ತ್ವರಿತವಾಗಿ ಕ್ರಮವಹಿಸಬೇಕು.

       ಜನಪ್ರತಿನಿಧಿಗಳ ನೇತೃತ್ವದಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರಂತರ ಸಂಪರ್ಕದೊಂದಿಗೆ ತ್ವರಿತವಾಗಿ ಫಲಾನುಭವಿಗಳನ್ನು ಆಯ್ಕೆಮಾಡಿ ಕೇಂದ್ರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಅನುದಾನ ಬಿಡುಗಡೆ ಕ್ರಮವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆ 2018-19 ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿ, ಅನುದಾನ ಬಳಕೆ ಕುರಿತಂತೆ ವಿವರವಾಗಿ ಪರಿಶೀಲನೆ ನಡೆಸಿದರು.

       ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಾರುತಿ ರಾಠೋಡ, ಜಿ.ಪಂ.ಕೃಷಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಚವ್ಹಾಣ, ಜಿ.ಪಂ.ಉಪಕಾರ್ಯದರ್ಶಿ ಗೋವಿಂದಸ್ವಾಮಿ, ಸಿ.ಪಿ.ಓ. ಕುಮಾರ ಮಣ್ಣವಡ್ಡರ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link