ತುರುವೇಕೆರೆ
ಹಿಂದೂ ಗೋರಕ್ಷಕ ಶಿವು ಉಪ್ಪಾರ್ನನ್ನು ದೇಶ ದ್ರೋಹಿಗಳು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದು, ಕೂಡಲೇ ರಾಜ್ಯ ಸರ್ಕಾರ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಭಜರಂಗ ದಳದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಹಿಂದೂ ಗೋರಕ್ಷಕ ಶಿವು ಉಪ್ಪಾರ್ ಭಾವಚಿತ್ರಕ್ಕೆ ಭಜರಂಗದಳದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಪುಷ್ಪಾರ್ಚನೆ ಮಾಡಿ ಮಾತನಾಡಿ, ಗೋಕಾಕ್ನ ಗೋರಕ್ಷಕ, ಗೋರಕ್ಷಣೆಗಾಗಿ ಶಿವು ಉಪ್ಪಾರ್ನನ್ನು ದೇಶ ದ್ರೋಹಿಗಳು ಕೊಲೆ ಮಾಡಿ, ಬಾಗೇವಾಡಿ ಬಸ್ ನಿಲ್ದಾಣದಲ್ಲಿ ನೇಣು ಹಾಕಿ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ ಹಬ್ಬಿಸಿವೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ.
ರಾಜ್ಯದಲ್ಲಿ ಹಿಂದೂಗಳ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ. ನಿರಂತರ ಗೋವುಗಳ ಅಕ್ರಮ ಸಾಗಾಟ ನಡೆಯುತ್ತಿದ್ದರೂ ಸಹ ರಾಜ್ಯ ಸರ್ಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದನ್ನು ತಡೆಯಲು ಹೋದ ಹಿಂದೂ ಯುವಕನಿಗೆ ಇಂತಹ ಅನ್ಯಾಯವಾಗಿರುವುದು ಇಡೀ ಹಿಂದೂ ಸಮಾಜಕ್ಕೆ ನಾಚಿಕೆ ಗೇಡಿನ ಸಂಗತಿ. ಕೂಡಲೆ ರಾಜ್ಯ ಸರ್ಕಾರ ಈ ಘಟನೆ ಬಗ್ಗೆ ಗಮನ ನೀಡಿ, ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಸಿದ್ದಗಂಗಯ್ಯರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಭಜರಂಗದಳದ ಮುಖ್ಯಸ್ಥ ರಾಮಕೃಷ್ಣಯ್ಯ, ಮುಖಂಡರಾದ ಹೆಚ್.ಆರ್.ರಾಮೇಗೌಡ, ಎಡಗಿಹಳ್ಳಿ ವಿಶ್ವನಾಥ್, ಸಹ ಸಂಚಾಲಕರುಗಳಾದ ಬಸವರಾಜು, ಗುಬ್ಬಿ ಪುನೀತ್, ಜಯಂತ್, ಶ್ರೀನಿಧಿ, ಕಿರಣ್ ಕುಮಾರ್, ಶ್ರೀನಿಧಿ ಸೇರಿದಂತೆ ಭಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.