ಹಾನಗಲ್ಲ :
ನೇರ ನಿಷ್ಠುರತೆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ಯಾರದೇ ಮುಲಾಜಿಲ್ಲದೆ ಬರಹ ಬದುಕು ನಡೆಸಿದ ಕನ್ನಡ ಸಾಹಿತ್ಯದ ಮರು ವ್ಯಕ್ತಿತ್ವವಾದ ಡಾ.ಗಿರೀಶ ಕಾರ್ನಾಡ ಅವರ ನಿಧನಕ್ಕೆ ಸಾಹಿತ್ಯ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿದವು.
ಪಟ್ಟಣದ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಸಾರಂಗ ಮಂಟಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಅಕ್ಷರ ಸಾಹಿತ್ಯ ವೇದಿಕೆ, ಸೃಜನಶೀಲ ಕನ್ನಡ ಸಾಹಿತ್ಯ ಬಳಗ, ಕವಿವೃಕ್ಷ ಬಳಗ ಸಂಯುಕ್ತವಾಗಿ ಆಯೋಜಿಸಿದ ಶ್ರಧ್ದಾಂಜಲಿ ಕಾರ್ಯಕ್ರಮದಲ್ಲಿ ಡಾ.ಗಿರೀಶ ಕಾರ್ನಾಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿಗಳಾದ ಪ್ರೊ.ಮಾರುತಿ ಶಿಡ್ಲಾಪೂರ, ನಿರಂಜನ ಗುಡಿ, ಸಂತೋಷ ಬಿದರಗಡ್ಡೆ, ಪಾರ್ವತಿಬಾಯಿ ಕಾಶೀಕರ, ದಾವಲ್ಮಲ್ಲಿಕ್ ಇಂಗಳಗಿ, ಮಹೇಶಕುಮಾರ ಹನಕೆರೆ ಹಾಗೂ ಪುಷ್ಪಾ ಬಸ್ತಿ, ಲೀಲಾ ಭಟ್ ಅವರು, ಡಾ.ಗಿರೀಶ ಕಾರ್ನಾಡ ಅವರ ವ್ಯಕ್ತಿತ್ವ ಮಾದರಿಯಾದುದು. ಕನ್ನಡ ಸಾಹಿತ್ಯ ನೀಡಿದ ಸೃಜನಶೀಲ ಬರವಣೆಗೆ, ರಂಗಭೂಮಿ, ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದು.
ಎಲ್ಲದಕ್ಕೂ ಮುಖ್ಯವಾಗಿ ತಮ್ಮ ವಿಚಾರ ಆಚಾರಗಳಲ್ಲಿ ಯಾವುದೇ ರಾಜಿ ಇಲ್ಲದೆ ಒಪ್ಪದ್ದನ್ನು ತಪ್ಪಲ್ಲದೆ ಅನುಸರಿಸಿದ ವ್ಯಕ್ತಿತ್ವ. ತಮ್ಮ ಅಂತ್ಯ ಸಂಸ್ಕಾರವನ್ನು ಕೂಡ ಯಾವುದೇ ಆಡಂಬರವಿಲ್ಲದೆ ಸರಳವಾಗಿ ನಡೆಸಬೇಕೆಂಬ ಅಪೇಕ್ಷೆ ಇಟ್ಟಿದ್ದು ಅವರ ವ್ಯಕ್ತಿತ್ವ ಇನ್ನೊಂದ ದೃಷ್ಠಿಯಾಗಿದೆ. ಅವರ ವೈವಿಧ್ಯಮಯ ಬರವಣೆಗೆ ಸದಾ ಕಾಲಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿಂತನೆಗಳನ್ನು ಒದಗಿಸುವಂತಹದ್ದಾಗಿದೆ ಎಂದರು.