ಬೆಂಗಳೂರು
ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ ಖಾಸಗಿ ಕಂಪನಿಯ ಕೇರಳ ಮೂಲದ ಸಾಫ್ಟ್ವೇರ್ ಇಂಜಿನಿಯರ್ರೊಬ್ಬರು ನೇಣಿಗೆ ಶರಣಾಗಿರುವ ದಾರುಣ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳ ಮೂಲದ ಗೋಪುದಾಸ್ (29)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ.ಮಾನ್ಯತಾ ಟೆಕ್ ಪಾರ್ಕ್ನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಗೋಪುದಾಸ್ ಐದು ವರ್ಷಗಳ ಹಿಂದೆ ನಗರದ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸುನಂದ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು.ದಂಪತಿಯು ನಾಗೇನಹಳ್ಳಿಯ 5ನೇ ಕ್ರಾಸ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು, ದಂಪತಿಗೆ ಮಕ್ಕಳಿರಲಿಲ್ಲ.
ಎಂದಿನಂತೆ ಗುರುವಾರ ಬೆಳಿಗ್ಗೆ 7.30ರ ವೇಳೆ ಸುನಂದ ಅವರು ಕೆಲಸಕ್ಕೆ ಹೋಗಿದ್ದು, ಗೋಪುದಾಸ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಸುನಂದ ಅವರು ಕೆಲಸ ಮುಗಿಸಿಕೊಂಡು ಸಂಜೆ 5ರ ವೇಳೆ ಮನೆಗೆ ಬಂದಾಗ ಮುಂಬಾಗಿಲಿಗೆ ಚಿಲಕ ಹಾಕಲಾಗಿತ್ತು. ಎಷ್ಟು ಬಾರಿ ಬಾಗಿಲು ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡ ಆಕೆ ಬಾಗಿಲು ಹೊಡೆದು ಒಳಹೋಗಿ ನೋಡಿದಾಗ ಫ್ಯಾನಿಗೆ ಗೋಪುದಾಸ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ, ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ನಾನೇ ಹೊಣೆ ಎಂದು ಬರೆದಿಟ್ಟಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








