ಬಳ್ಳಾರಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಅವರ ನಿವಾಸದಲ್ಲಿ ಇದೀಗ ಹಬ್ಬದ ಸಡಗರ ಮನೆಮಾಡಿದೆ.
ಕೊಟ್ಟೂರು ತಾಲೂಕಿನ ತಿಮ್ಮಲಾಪುರದಲ್ಲಿರುವ ಅವರ ನಿವಾಸದಲ್ಲಿ ಇದೀಗ ಇಬ್ಬರು ಸದಸ್ಯರ ಉದಯವಾಗಿದೆ. ಗೌಡರ ನಿವಾಸದಲ್ಲಿರುವ ತಾಯಿ ಗೌರಿ ಮುದ್ದು ಮುದ್ದಾದ ಎರಡು ಕರುಗಳಿಗೆ ಜನ್ಮ ನೀಡುವ ಮೂಲಕ ಡಬಲ್ ಧಮಾಕಾ ಕೊಡುಗೆ ನೀಡಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಜನಿಸಿದ ಕರುಗಳಿಗೆ ತುಂಗಾ ಮತ್ತು ಭದ್ರಾ ಎಂದು ನಾಮಾವಳಿ ಉದ್ಗರಿಸಿ ಮುಖದರ್ಶನ ಮಾಡಿದ ಗೌಡರು ಸಖತ್ ಖುಷಿ ಆಗಿದ್ದಾರೆ.
ಅತ್ತ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಮಳೆಗಾಗಿ ಪ್ರಾರ್ಥಿಸಿ ರೈತರ ಜಮೀನಿನಲ್ಲಿ ಉಳುವ-ಉತ್ತುವ ಕೆಲಸದಲ್ಲಿ ತಲ್ಲೀನರಾದರೆ, ಇತ್ತ ಬಳ್ಳಾರಿ ನಿವಾಸಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರು ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಈ ನಡುವೆ ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಅವರೂ ಸಹ ಸುಪ್ರೀಂ ಅನುಮತಿ ಪಡೆದು ತಮ್ಮ ಮಾವನವರ ಆರೋಗ್ಯ ವಿಚಾರಣೆಗಾಗಿ ಹದಿನೈದು ದಿನಗಳ ಕಾಲ ಬಳ್ಳಾರಿ ನಿವಾಸಕ್ಕೆ ಅಡಿಯಿರಿಸಿದ್ದಾರೆ. ಇದರಿಂದ ಬಳ್ಳಾರಿ ಜಿಲ್ಲೆಯಲ್ಲಿನ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ.
ಕಳೆದ ಮೂರು ದಿನದ ಹಿಂದೆ ಬಳ್ಳಾರಿಗೆ ಆಗಮಿಸಿದ್ದ ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ಹಾಲಿ ಶಾಸಕ ಕೆಎಸ್ ಈಶ್ವರಪ್ಪನವರು ತಮ್ಮ ಕುಲದೇವತೆ ಶ್ರೀ ಚೌಡೇಶ್ವರಿಗೆ ಬಳ್ಳಾರಿಯಲ್ಲಿ ಪೂಜೆ ಸಲ್ಲಿಸಿ ಕೊಪ್ಪಳ ಜನತೆಗೆ ಹೋಳಿಗೆ ಊಟ ಹಾಕಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡರ ನಿವಾಸದಲ್ಲಿ ತಾಯಿ ಗೌರಿ ತುಂಗಾ ಮತ್ತು ಭದ್ರಾ ಕರುಗಳಿಗೆ ಜನ್ಮ ನೀಡಿದೆ. ಕಳೆದ ಹದಿನೈದು ದಿನಗಳಿಂದಲೂ ಮೋಡದಲ್ಲಿ ಮರೆಯಾಗಿ ಹೋಗಿದ್ದ ಮಳೆರಾಯ ಇದೀಗ ಅಲ್ಲಲ್ಲಿ ಹನಿಯುತ್ತಿದ್ದಾನೆ.