ನವದೆಹಲಿ
15 ನೇ ಹಣಕಾಸು ಆಯೋಗ ಸೋಮವಾರ ಕರ್ನಾಟಕದ ಅಧಿಕಾರಿಗಳನ್ನು ಭೇಟಿಯಾಗಿ ಮೂಲಸೌಕರ್ಯಗಳ ಭಾರಿ ಅಂತರ ಹಾಗೂ ಪ್ರಜಾಸತ್ತಾತ್ಮಕ ಕೊರತೆ ಹೆಚ್ಚುತ್ತಿರುವ ಕುರಿತು ಚರ್ಚಿಸಿತು.
ಅರ್ಥ ಶಾಸ್ತ್ರಜ್ಞರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಅಧ್ಯಕ್ಷ ಎನ್ ಕೆ ಸಿಂಗ್ ನೇತೃತ್ವದ ಆಯೋಗವು ರಾಜ್ಯಗಳ ವಿವಿಧ ಕಾರ್ಯಕ್ಷಮತೆ ಸೂಚಕಗಳು ಹಾಗೂ ಕರ್ನಾಟಕದ ಉತ್ತಮ ವಿತ್ತ ಸಾಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿತು.
ಕರ್ನಾಟಕ ಮುಂಚೂಣಿಯಲ್ಲಿರುವ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಸರ್ಕಾರದ ಮೂರನೇ ಸ್ತರದ ಆಡಳಿತಕ್ಕೆ ಸಂಬಂಧಿಸಿದ ಇತ್ತೀಚಿನ ವಿವಿಧ ಅಧ್ಯಯನಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. ಮೂಲಸೌಕರ್ಯದ ಭಾರೀ ಅಂತರಗಳು ಹಾಗೂ ಪ್ರಜಾಸತ್ತಾತ್ಮಕ ಕೊರತೆಯ ಬಗ್ಗೆ ಅರ್ಥ ಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಕ್ಷಿಪ್ರ ನಗರೀಕರಣದ ಹಿನ್ನೆಲೆಯಲ್ಲಿ ಹಣಕಾಸು ಅಗತ್ಯತೆ, ಉತ್ತಮ ಆದಾಯ ಸಂಗ್ರಹಣೆಗೆ ಸಂಬಂಧಿಸಿದ ಸಲಹೆಗಳು ಹಾಗೂ ಜಮೀನು ನಿರ್ವಹಣೆ ಸುಧಾರಿಸಲು ಕೆಲವು ಕ್ರಮಗಳ ಕುರಿತಂತೆ ಆಯೋಗಕ್ಕೆ ವಿಶೇಷವಾಗಿ ತಿಳಿಸಲಾಯಿತು.
2011 ರ ಜನಗಣತಿಯ ಜನಸಂಖ್ಯೆ ಮಾಹಿತಿಯನ್ನು ಆಯೋಗ ಬಳಸಿಕೊಳ್ಳುವ ಕುರಿತು ತಜ್ಞರು ಪ್ರಸ್ತಾಪಿಸಿದ್ದಾರೆ. ರಾಜ್ಯಗಳ ಸದ್ಯದ ಅಗತ್ಯಗಳನ್ನು ಪ್ರತಿನಿಧಿಸುವ ಇತ್ತೀಚಿನ ಜನಸಂಖ್ಯೆ ಮಾಹಿತಿಯನ್ನು ಬಳಸಿಕೊಳ್ಳಬೇಕು ಎಂದು ಬಹತೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಉತ್ತಮ ಜನಸಂಖ್ಯೆ ನಿಯಂತ್ರಣವನ್ನು ಸಾಧಿಸಿರುವ ರಾಜ್ಯಗಳಿಗೆ ಪ್ರೋತ್ಸಾಹಧನ ನೀಡಲು ನಿಧಿಗಳನ್ನು ಸ್ಥಾಪಿಸಬೇಕು ಎಂದು ತಜ್ಞರು ಹೇಳಿದ್ದಾರೆ.
ಆಯೋಗವು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ, ಗೂಗಲ್, ಆಧಾರ್ ಮತ್ತಿತರ ವಲಯಗಳಲ್ಲಿ ಅಪಾರ ಅನುಭವ ಹೊಂದಿರುವ ಪ್ರಖ್ಯಾತ ಉತ್ಪನ್ನ ನಿರ್ವಹಣಾ ತಜ್ಞ ಸಂಜಯ್ ಜೈನ್, ರಿಸರ್ವ್ ಬ್ಯಾಂಕ್ ನ ಪಾವತಿ ಸಮಿತಿಯ ಮಾಜಿ ಸದಸ್ಯರನ್ನೂ ಆಯೋಗ ಭೇಟಿ ಮಾಡಿ ಚರ್ಚಿಸಿತು.
ನೇರ ಹಣ ವರ್ಗಾವಣೆ ತಂತ್ರಜ್ಞಾನವನ್ನು ವಿದ್ಯುತ್ ಸಬ್ಸಿಡಿಗಳಿಗೆ, ಸಾಧ್ಯವಾದರೆ ನೀರಿನ ಸಬ್ಸಿಡಿಗಳಿಗೆ ವಿಸ್ತರಿಸುವ ಸಾಧ್ಯತೆಗಳ ಬಗ್ಗೆಯೂ ಸಮಿತಿ ಚರ್ಚಿಸಿತು. ಮುದ್ರಾಂಕ ಶುಲ್ಕ, ಇತರ ಡಿಜಿಟಲ್ ಪಾವತಿಗಳಿಗೆ ಡಿಜಿಟಲೀಕರಣ ವಿಸ್ತರಣೆ, ಡಿಜಿಟಲ್ ಮೂಲಸೌಕರ್ಯಗಳ ನಿರ್ಮಾಣ, ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಯಶಸ್ವಿಯಾಗಲು ರಾಜ್ಯಗಳ ನಡುವೆ ತಂತ್ರಜ್ಞಾನದ ಅಂತರವನ್ನು ಕಡಿಮೆ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಆಯೋಗವು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿ ರಾಜ್ ಸಂಸ್ಥೆಗಳ ಪ್ರತಿನಿಧಿಗಳನ್ನೂ ಭೇಟಿ ಮಾಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/styat-kOtD-621x414@LiveMint.gif)