ರಾಮನಗರ್
ತಮ್ಮ ಸಹೋದ್ಯೋಗಿಯನ್ನು ಜೈಲಿನಿಂದ ಬಿಡುಗಡೆ ಮಾಡದೇ ಇದ್ದರೆ ರಕ್ತ ಹರಿಸುತ್ತೇವೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ .ಮಧ್ಯಪ್ರದೇಶದ ಅಮರ್ಪಠಾಣ್ ವಿಧಾನಸಭಾ ಕ್ಷೇತ್ರದ ಶಾಸಕ ರಾಮ್ಖೆಲಾವನ್ ಪಟೇಲ್ ಅವರು ರಾಮ್ ಸುಶೀಲ್ ಪಟೇಲ್ ಅವರನ್ನು ಬಂಧಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇಲ್ಲಿನ ಸತ್ನಾ ಜಿಲ್ಲೆಯ ರಾಮನಗರದಲ್ಲಿ ಸಾರ್ವಜನಿಕ ಸಭೆ ನಡೆಯುತ್ತಿದ್ದ ವೇಳೆ ರಾಮ್ ಸುಶೀಲ್ ಪಟೇಲ್ ಅವರು ಚೀಫ್ ಮುನಿಸಿಪಲ್ ಆಫೀಸರ್ ದೇವ್ರತನ್ ಸೋನಿ ಆವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ.
ರಾಮ್ ಸುಶೀಲ್ ಪಟೇಲ್ ಅವರನ್ನು ಜೈಲಿನಿಂದ ಹೊರಗೆ ತರುತ್ತೇವೆ ಎಂದು ನಾನು ನಿಮಗೆ ಮಾತು ನೀಡುತ್ತೇನೆ. ಅವರನ್ನು ಜೈಲಿನಿಂದ ಬಂಧಮುಕ್ತಗೊಳಿಸಲು ನಾವು ರಕ್ತ ಹರಿಸಬೇಕು ಎಂದಾದರೆ ಅದನ್ನೂ ಮಾಡುತ್ತೇವೆ ಎಂದಿದ್ದಾರೆ ರಾಮ್ಖೆಲಾವನ್ ಪಟೇಲ್.
ರಾಮ್ಖೆಲಾವನ್ ಪಟೇಲ್ ಈ ಮಾತನ್ನಾಡುವ ಹೊತ್ತಲ್ಲಿ ಅವರ ಜತೆ ಸತ್ನಾ ಜಿಲ್ಲಾಧ್ಯಕ್ಷ ನರೇಂದ್ರ ತ್ರಿಪಾಠಿ ಕೂಡಾ ಇದ್ದರು. ಈ ಬಗ್ಗೆ ಬಿಜೆಪಿ ವಕ್ತಾರ ರಾಹುಲ್ ಕೊತಾರಿ ಅವರಲ್ಲಿ ಕೇಳಿದಾಗ, ಇಂತಾ ವಿಷಯದ ಬಗ್ಗೆ ಪಕ್ಷಕ್ಕೆ ಹೆಚ್ಚಿನ ಮಾಹಿತಿಯೇನೂ ಸಿಗಲಿಲ್ಲ ಎಂದಿದ್ದಾರೆ.
ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕರ ಸಭೆ ಕರೆದು, ಜನರಿಗಾಗಿ ದುಡಿಯುವಂತೆ ಹೇಳಿದ್ದಾರೆ. ಶಾಸಕರಿಗೆ ಶಿಸ್ತಿನಿಂದ ಇರಿ ಎಂದು ಮೋದಿ ಉಪದೇಶ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಶಾಸಕ ಆಕಾಶ್ ವಿಜಯ್ ವರ್ಗೀಯ ಸರ್ಕಾರಿ ಅಧಿಕಾರಿಯೊಬ್ಬರಿಗೆ ಬ್ಯಾಟ್ನಿಂದ ಹೊಡೆಯುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








