ತುಮಕೂರು:
ಹಾಲಿನ ಬಟವಾಡೆಯ ಹಣ ನುಂಗುತ್ತಿದೆ ದುಬಾರಿ ಪಶು ಆಹಾರ
ಪ್ರಸ್ತುತ ಜಿಲ್ಲೆಯಲ್ಲಿ ನಿತ್ಯ 8 ಲಕ್ಷ ಕ್ಕೂ ಅಧಿಕ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಒಕ್ಕೂಟದ ಅಧಿಕೃತ ಅಂಕಿ ಅಂಶಗಳ ಪ್ರಕಾರ ನಿತ್ಯ 8,33,000 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ಅಧಿಕ ಎನ್ನಬಹುದು. ಮುಂಗಾರು ಆರಂಭದ ಸಂದರ್ಭದಲ್ಲಿ 9,00,000 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುವ ಮೂಲಕ ದಾಖಲೆ ನಿರ್ಮಾಣವಾಗಿತ್ತು.
ಇದೀಗ ಕೊಂಚ ಇಳಿಕೆ ಕಂಡಿದ್ದರೂ ಸಂಗ್ರಹದಲ್ಲಿ ಗಣನೀಯ ಕುಸಿತವಂತೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಹಾಲು ಉತ್ಪಾದನೆ ಇಲ್ಲಿ ಉತ್ತಮ ಸ್ಥಿತಿಯಲ್ಲಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಏರಿಳಿತದ ನಡುವೆ ಬದುಕು ಸವೆಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ವಾಪಸ್ಸಾದ ಕೆಲವು ಯುವಕರು ಹಳ್ಳಿಗಳಲ್ಲಿಯೇ ಉಳಿದು ಬಿಟ್ಟಿದ್ದಾರೆ. ನಿರೀಕ್ಷಿತ ಉದ್ಯೋಗ ಸಿಗದೆ ಇದ್ದವರು, ವೇತನ ಕಡಿಮೆಯಾದವರು ಹೀಗೆ ನಾನಾ ಕಾರಣಗಳಿಂದ ನಗರದಲ್ಲಿ ಬೇಸತ್ತ ಬಹುಪಾಲು ಜನ ಹಳ್ಳಿಗಳಲ್ಲಿಯೇ ಬದುಕು ಕಂಡುಕೊಂಡಿದ್ದಾರೆ.
ಕೃಷಿ ಚಟುವಟಿಕೆ ಅಷ್ಟೇನೂ ಲಾಭದಾಯಕವಲ್ಲ. ಎಲ್ಲರೂ ತೆಂಗು ಹಾಗೂ ಅಡಿಕೆ ತೋಟವನ್ನು ಹೊಂದಿಲ್ಲ. ಹೀಗೆ ಕೇವಲ ಒಂದೆರಡು ಎಕರೆ ಜಮೀನು ಉಳ್ಳವರು, ಖುಷ್ಕಿ ಭೂಮಿ ಹೊಂದಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗದಿರುವರು ಹೈನುಗಾರಿಕೆಯಂತಹ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡರು.
ಇದರ ಪರಿಣಾಮವಾಗಿ ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಅಧಿಕವಾಗುತ್ತಿದೆ. ಹಿಂದೆಲ್ಲ ಹಾಲು ಉತ್ಪಾದನೆಗೆ ಒಕ್ಕೂಟವೆ ಪ್ರೋತ್ಸಾಹಿಸುತ್ತಾ ಬಂದಿತ್ತು. ಇದೀಗ ನಿರೀಕ್ಷೆಗೂ ಮೀರಿ ಹಾಲು ಸಂಗ್ರಹವಾಗುತ್ತಿದ್ದು, ಉಳಿಕೆ ಹಾಲನ್ನು ವಿಲೇ ಮಾಡುವುದೇ ಒಕ್ಕೂಟಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ.
ತುಮಕೂರು ಜಿಲ್ಲೆಯಲ್ಲಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 1272 ಸಹಕಾರ ಸಂಘಗಳಿವೆ. ಇವುಗಳಲ್ಲಿ 330 ಮಹಿಳಾ ಸಹಕಾರ ಸಂಘಗಳು ಸಕ್ರಿಯವಾಗಿವೆ. ಕೊರೊನಾ ಆರಂಭದ ವರ್ಷದಲ್ಲಿ ಹಾಲು ವಿತರಣೆ ಕಷ್ಟಕರವಾದಾಗ ಕೊಳಚೆ ಪ್ರದೇಶಗಳು ಹಾಗೂ ಇತರೆ ಕೆಲವು ಪ್ರದೇಶಗಳಿಗೆ ಹಾಲನ್ನು ಉಚಿತವಾಗಿ ವಿತರಿಸಲಾಗಿತ್ತು.
ಶಾಲೆಗಳು ಬಂದ್ ಆದ ಹಿನ್ನೆಲೆಯಲ್ಲಿ ಮಕ್ಕಳ ಹಾಲು ವಿತರಿಸಲು ಕಷ್ಟಕರವಾಗಿದ್ದರಿಂದ ಅನಿವಾರ್ಯವಾಗಿ ಹಾಲಿನ ದರ ಇಳಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಈಗ ಪರಿಸ್ಥಿತಿ ಹಾಗಿಲ್ಲ. ಉತ್ಪಾದನೆಯೂ ಹೆಚ್ಚಿದೆ, ದರದಲ್ಲಿಯೂ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ಇದೀಗ ಹೆಚ್ಚಳ ಮಾಡುವ ಚಿಂತನೆಯೂ ಇದೆ. ಹಾಲಿನ ದರ ಹೆಚ್ಚಳ ಮಾಡುವಂತೆ ರೈತ ವಲಯದಿಂದ ಕೂಗು ಕೇಳಿ ಬರುತ್ತಲೇ ಇದೆ. ಇದಕ್ಕೆ ಕಾರಣವೂ ಇದೆ. ಹೆಚ್ಚು ಮಂದಿ ಹೈನುಗಾರಿಕೆಗೆ ತೊಡಗಿಸಿಕೊಂಡಿರಬಹುದು. ಆದರೆ ವೆಚ್ಚ ಮಾತ್ರ ದುಬಾರಿಯಾಗುತ್ತಿದೆ.
ದುಬಾರಿಯಾದ ಪಶು ಆಹಾರದಿಂದ ಎಷ್ಟೇ ಕಷ್ಟಪಟ್ಟರೂ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಪಶು ಆಹಾರ ಒದಗಿಸದಿದ್ದರೆ ಹೆಚ್ಚು ಹಾಲು ಕರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡವರು ಒಂದು ರೀತಿ ಅತಂತ್ರ ಸ್ಥಿತಿಗೂ ಸಿಲುಕಿ ಬಿಟ್ಟಿದ್ದಾರೆ. ಹಾಲಿನ ದರವೂ ಕುಸಿತವಾಗಿದೆ.
ಇದೇ ಸಂದರ್ಭದಲ್ಲಿ ಪಶು ಆಹಾರ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಹಿಂಡಿ, ಬೂಸಾ, ಫೀಡ್ಗಳನ್ನು ಹೊಂದಿಸಲು ಹೈನು ಉತ್ಪಾದನೆಯಲ್ಲಿ ತೊಡಗಿರುವವರು ಸಾಹಸಪಡುವಂತಾಗಿದೆ. ಬಂದ ಹಣವೆಲ್ಲ ಪಶು ಆಹಾರಕ್ಕೆ ಬಳಕೆಯಾಗುತ್ತಿದೆ. ನಮಗೆ ಉಳಿಯುವುದೇ ಕಡಿಮೆ ಎನ್ನುತ್ತಾರೆ ಈ ಕ್ಷೇತ್ರದಲ್ಲಿ ತೊಡಗಿರುವ ರೈತರು.
ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುವ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಳವಾಗಿದೆ. ಸಾಕಷ್ಟು ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ನಿತ್ಯ 9 ಲಕ್ಷದ 7ಸಾವಿರ ಲೀಟರ್ವರೆಗೂ ಹಾಲು ಸಂಗ್ರಹವಾಗಿ ದಾಖಲೆ ನಿರ್ಮಿಸಿತ್ತು. ಇದೀಗ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಈಗ ಸರಾಸರಿ 8 ಲಕ್ಷದ 33 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕೊರೊನಾ ಸಂಕಷ್ಟದಲ್ಲಿಯೂ ನಾವು ದರವನ್ನು ಕಡಿಮೆ ಮಾಡಿಲ್ಲ. ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದ್ದು, ಇದು ಹರ್ಷದಾಯಕ.
-ಸಿ.ವಿ.ಮಹಲಿಂಗಯ್ಯ, ಒಕ್ಕೂಟದ ಅಧ್ಯಕ್ಷರು.
ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿರುವವರಿಗೆ ಈಗ ಉತ್ತಮ ದರ ಸಿಗುತ್ತಿದೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ರೈತರಿಗೆ 25.80 ರೂಗಳನ್ನು ಒಕ್ಕೂಟ ಪಾವತಿಸುತ್ತಿದೆ. ಇದ್ದುದರಲ್ಲಿ ಇದು ಉತ್ತಮ ದರ.
ಪಶು ಆಹಾರದ ಬೆಲೆ ಹೆಚ್ಚಳವಾಗಿದ್ದು, ಇದನ್ನು ನಿಭಾಯಿಸುವುದು ಕಷ್ಟ ಎಂಬುದು ರೈತ ವಲಯದಿಂದ ಕೇಳಿ ಬರುತ್ತಿರುವ ಮಾತು. ರಾಜ್ಯ ಮಟ್ಟದಲ್ಲಿ ಕೆಎಂಎಫ್ ಮನಸ್ಸು ಮಾಡಿದರೆ ಪಶು ಆಹಾರದ ಬೆಲೆ ಇಳಿಸಬಹುದು ಎನ್ನುತ್ತಾರೆ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್.
ಪಶು ಆಹಾರಕ್ಕೆ ಹಣ ಹೋಗುತ್ತಿದೆ
ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲೆಂದೇ 50 ಸಾವಿರ ರೂ.ಗಳನ್ನು ಪಾವತಿಸಿ ಹಸು ಖರೀದಿಸಿದೆ. ಹೆಚ್ಚು ಲೀಟರ್ ಹಾಲು ಬರಬೇಕೆಂದರೆ ಪಶು ಆಹಾರ ನೀಡಲೇಬೇಕು. ಕೇವಲ ಒಣ ಹುಲ್ಲು ಹಾಕಿದರೆ ಹೆಚ್ಚು ಹಾಲು ಕರೆಯುವುದಿಲ್ಲ. ಇದಕ್ಕಾಗಿಯೇ ನಿಗದಿಯಾಗಿರುವ ಫೀಡ್ ನೀಡಬೇಕು. ಆದರೆ ದರ ದುಪ್ಪಟ್ಟಾಗಿದೆ.
ಪಶು ಆಹಾರದ ಬೆಲೆ 1200 ರಿಂದ 1300 ರೂ.ಗಳವರೆಗೆ ಮಾರಾಟವಾಗುತ್ತಿದೆ. ಫೀಡ್ ಒಂದು ಮೂಟೆ 1000 ರೂ.ಗಳವರೆಗೆ ತಲುಪಿದೆ. ಕಳೆದ ವರ್ಷಕ್ಕಿಂತ ಈ ಬಾರಿ 100 ರಿಂದ 200 ರಷ್ಟು ದರ ಹೆಚ್ಚಳವಾಗಿದೆ. ದುಬಾರಿಯಾಗಿರುವ ಪಶು ಆಹಾರದಿಂದಾಗಿ ಹಾಕಿದ ಬಂಡವಾಳ ಪಡೆಯಲು ಸಾಧ್ಯವಾಗುತ್ತಿಲ್ಲ.
15 ದಿನಗಳಿಗೊಮ್ಮೆ ಬಟವಾಡೆಯಾಗುತ್ತದೆ. ಆದರೆ ಅದರಲ್ಲಿ ಶೇ.80 ರಿಂದ 90 ಭಾಗ ಪಶು ಆಹಾರಕ್ಕೆ ಕಟಾವು ಆಗುತ್ತದೆ. ಹೀಗಾದರೆ ಲಾಭ ನಿರೀಕ್ಷಿಸಲು ಹೇಗೆ ಸಾಧ್ಯ ಎನ್ನುತ್ತಾರೆ ಗುಬ್ಬಿ ತಾಲ್ಲೂಕು ಹಾಲು ಉತ್ಪಾದಕ ರೈತ ಸಂಗಮೇಶ್.
ವಿದ್ಯಾರ್ಥಿನಿ ಕಣ್ಣಿಗೆ ಹೊಡೆದು ಗಾಯ
– ಸಾ.ಚಿ. ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
