ಮಂಡ್ಯ:
ರಥಸಪ್ತಮಿ ಹಿನ್ನೆಲೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕುಟುಂಬ ಸಮೇತರಾಗಿ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು .ಪಾಂಡವಪುರ ತಾಲೂಕಿನ ಶ್ರೀಕ್ಷೇತ್ರ ಮೇಲುಕೋಟೆ ಚಲುವನಾರಾಯಣಸ್ವಾಮಿ, ಯದುಗಿರಿ ಅಮ್ಮ ಸೇರಿ ಕ್ಷೇತ್ರಾಧಿ ದೇವತೆಗಳ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಚಲುವನಾರಾಯಣಸ್ವಾಮಿ ರಥಸಪ್ತಮಿ ಆಚರಣೆ ಹಿನ್ನೆಲೆ ದೇವರಿಗೆ ಸೂರ್ಯ ಮಂಡಲೋತ್ಸವ ನಡೆಯಿತು. ಸೂರ್ಯಮಂಡಲ ವಾಹನದಲ್ಲಿ ದೇವರ ವೈಭವದ ಮೆರವಣಿಗೆ ನಡೆಯಿತು. ವಾಹನ ಮಂಟಪದಿಂದ ದೇಗುಲದ ಸುತ್ತ ಹಾಗೂ ರಾಜಬೀದಿಗಳಲ್ಲಿ ಸಾಗಿದ ಮೆರವಣಿಯಲ್ಲಿ ಸಚಿವ ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ, ಪುತ್ರ ಸಚಿನ್, ಸೊಸೆ ಭಾಗಿಯಾಗಿದ್ದರು.
ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ವತಿಯಿಂದ 26ನೇ ವರ್ಷದ ಅಂತರರಾಜ್ಯ ಮಟ್ಟದ ಜನಪದ ಕಲಾಮೇಳ ನಡೆಯಿತು. ಕಲಾಮೇಳಕ್ಕೆ ಸಚಿವ ಎನ್ ಚಲುವರಾಯಸ್ವಾಮಿ ಚಾಲನೆ ನೀಡಿ, ಶುಭ ಹಾರೈಸಿದರು. ಜನಪದ ಕಲಾಮೇಳದಲ್ಲಿ 50ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿ ವಿವಿಧ ಜನಪದ ಕಲೆಗಳ ಪ್ರದರ್ಶನ ಮಾಡಿತು.
