ಕುಮಾರಸ್ವಾಮಿ ವಿರುದ್ದ ದೂರು ದಾಖಲು

ಬೆಂಗಳೂರು

     ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ಕೊಡುವುದಾಗಿ ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ(ಡಿಜಿಪಿ) ನೀಲಮಣಿ ರಾಜು ಅವರನ್ನು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

     ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಸಿ.ಎಂ.ಉದಾಸಿ ಆಯನೂರು ಮಂಜುನಾಥ್, ತೇಜಸ್ವಿನಿ ರಮೇಶ್‍ಗೌಡ ಮತ್ತಿತರನ್ನೊಳಗೊಂಡ ನಿಯೋಗ ಡಿಜಿಪಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ದೂರು ಸಲ್ಲಿಸಿತು.

      ದೂರು ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಶೋಭಾ ಕರಂದ್ಲಾಜೆ ಕುಮಾರಸ್ವಾಮಿ ಅವರು ಗುರುವಾರ ಮಾತನಾಡಿರುವ ಆಡಿಯೋ ಕ್ಲಿಪಿಂಗ್ಸ್ ಹಾಗೂ ನಂತರ ನಡೆದಿರುವ ಬೆಳವಣಿಗೆಗಳನ್ನು ಸಹ ಡಿಜಿಪಿ ಅವರಿಗೆ ವಿವರಿಸಲಾಗಿದೆ ಎಂದರು
ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಯವರೇ ಪ್ರಚೋದನಾಕಾರಿ ಹೇಳಿಕೆ ನೀಡಿ ಜನರನ್ನು ಧಂಗೆ ಏಳುವಂತೆ ಕರೆ ನೀಡಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲಿದ್ದು ಇದಕ್ಕೆ ಹೊಣೆಯಾಗುವವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಅವರು ಹೇಳಿದರು.

      ರಾಜ್ಯದ ಇತಿಹಾಸದಲ್ಲಿ ಈವರೆಗೂ ಯಾವುದೇ ಮುಖ್ಯಮಂತ್ರಿಗಳು ಜನರನ್ನು ಎತ್ತಿಕಟ್ಟುವಂತಹ ಹೀನ ಕೃತ್ಯಕ್ಕೆ ಇಳಿದಿರಲಿಲ್ಲಅಧಿಕಾರ ಕಳೆದುಕೊಂಡಿರುವ ಭೀತಿಯಲ್ಲಿರುವ ಕುಮಾರಸ್ವಾಮಿ ಅವರು ಜನರನ್ನು ಪ್ರಚೋದನೆಗೊಳಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

      ಕುಮಾರಸ್ವಾಮಿ ಅವರ ಹೇಳಿಕೆಯಿಂದಲೇ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್‍ವೈ ಅವರ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಒಂದು ವೇಳೆ ಬಿಜೆಪಿ ಕಾರ್ಯಕರ್ತರು ಅಲ್ಲಿ ಇಲ್ಲದಿದ್ದರೆ ಯಡಿಯೂರಪ್ಪನವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಹೊಣೆ      ಪ್ರಚೋದನಕಾರಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರ ವಿರುದ್ದ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಅದಕ್ಕೆ ಕುಮಾರಸ್ವಾಮಿ ಅವರೇ ಹೊಣೆ ಎಂದರು.
ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್-ಜೆಡಿಎಸ್‍ನಲ್ಲಿ ಉಂಟಾಗಿರುವ ಗೊಂದಲವನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಮುಖ್ಯಮಂತ್ರಿಗಳಿಂದ ನಡೆದಿದೆ. ದೋಸ್ತಿ ಸರ್ಕಾರದಲ್ಲಿರುವ ಭಿನ್ನಮತವನ್ನು ನಮ್ಮ ಪಕ್ಷದ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳಿದೆ.

     ಸರ್ಕಾರ ಬಿದ್ದು ಹೋಗಬಹುದೆಂಬ ಭೀತಿಯಿಂದಾಗಿ ಮುಖ್ಯಮಂತ್ರಿಗಳೇ ಜನರನ್ನು ಧಂಗೆ ಏಳಲು ಕರೆ ಕೊಡುತ್ತಾರೆ ಎಂದರೆ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿಯವರು ಯಾವ ಹಂತಕ್ಕಾದರೂ ಇಳಿಯಬಹುದು. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ದೂರು ನೀಡಲಾಗಿದೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.ಮುಂದಿನ ನಡೆ ನೋಡಿಕೊಂಡು ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು. ಮುಖ್ಯಮಂತ್ರಿಗಳ ಸೊಕ್ಕಿಗೆ ಅತವಾ ಧಿಮಾಕಿಗೆ ಬಗ್ಗುವುದಿಲ್ಲ ಎಂದು ಕಾರಜೋಳ ಹೇಳಿದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link