ಮೇ.1 ರಂದು 1262 ಜನ ಸಿಬ್ಬಂದಿ ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ: ಚುನಾವಣಾಧಿಕಾರಿ ದಿವ್ಯ ಪ್ರಭು

 ಧಾರವಾಡ 

    ದಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕದೊಳಗೆ ಮತದಾನಕ್ಕಾಗಿ ನಿಗಧಿತ ನಮೂನೆ 12ಎ ದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂತವರಿಗೆ ಇಡಿಸಿ (ಎಲೆಕ್ಷಣ ಡ್ಯೂಟಿ ಸರ್ಟಿಪಿಕೆಟ್) ನಮೂನೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು,ಚುನಾವಣಾ ಕರ್ತವ್ಯನಿರತರಾದ ಧಾರವಾಡ ಜಿಲ್ಲೆಯ ಮತದಾರರು, ತಾವು ಕರ್ತವ್ಯ ನಿರ್ವಹಿಸುವ ಮತಗಟ್ಟೆ ಅಥವಾ ತಮ್ಮ ಸಮೀಪದ ಮತಗಟ್ಟೆಯಲ್ಲಿ ಮತದಾನ ದಿನದಂದು ಎಲ್ಲ ಮತದಾರರಂತೆ ಇವಿಎಂ ಮತಯಂತ್ರದ (ಬ್ಯಾಲೇಟ್ ಯಂತ್ರ) ಮೂಲಕ ಮತಚಲಾಯಿಸಬೇಕು ಎಂದು ಅವರು ತಿಳಿಸಿದ್ದಾರೆ.

    ಆದರೆ ಬೇರೆ ಜಿಲ್ಲೆಯ ಮತದಾರರಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಅಧಿಕಾರಿಗಳು ಚುನಾವಣಾ ಆಯೋಗ ನಿಗಧಿಪಡಿಸಿದ ಅವಧಿಯಲ್ಲಿ ಅಂಚೆಮತಪತ್ರ ಕೋರಿ ನಮೂನೆ 12 ಅನ್ನು ಸಲ್ಲಿಸಿದಲ್ಲಿ, ಅವರ ಕೋರಿಕೆಯನ್ನು ಅವರು ಮತದಾರರಾಗಿರುವ ಲೋಕಸಭೆ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ನಂತರ ಸಂಬಂದಿಸಿದ ಚುನಾವಣಾಧಿಕಾರಿಗಳು ಇವರ ಕೋರಿಕೆಯನ್ನು ಪರಿಶೀಲಿಸಿ, ಮತದಾರರ ವಿವರ ಖಚಿತಪಡಿಸಿಕೊಂಡು, ಅವರ ಅಂಚೆಮತಪತ್ರ ಸಿದ್ದಪಡಿಸಿ, ಮತದಾರರು ಕರ್ತವ್ಯನಿರತ ಜಿಲ್ಲೆಗೆ ವಿನಿಮಯ ಕೇಂದ್ರದ ಮೂಲಕ ಕಳುಹಿಸಿರುತ್ತಾರೆ. ಅಂತಹ ಮತದಾರರು ಕರ್ತವ್ಯ ನಿರತ ಜಿಲ್ಲೆಯಲ್ಲಿ ಸ್ಥಾಪಿಸಿರುವ ಅಂಚೆಮತಪತ್ರ ಸೌಲಭ್ಯ ಕೇಂದ್ರ(ಫೆಸಿಲಿಟೆಶನ್ ಸೆಂಟರ್)ದಲ್ಲಿ ಅಂಚೆಮತಪತ್ರದ ಮೇಲೆ ನಿಯಮಾನುಸಾರ ಮತ ಚಲಾಯಿಸುತ್ತಾರೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

   ಚುನಾವಣಾ ಕರ್ತವ್ಯನಿರತ ಮತದಾರರಲ್ಲಿ ಅಂಚೆಮತಪತ್ರ ಮತ್ತು ಇಡಿಸಿ ಮೂಲಕ ಮತಚಲಾಯಿಸುವ ಎರಡು ಬೇರೆಬೇರೆ ವರ್ಗಗಳು ಆಗಿರುವದರಿಂದ, ಈ ಬಗ್ಗೆ ಸರಿಯಾದ ಮಾಹಿತಿ ಪಡೆಯದೇ, ಇಡಿಸಿಗಳಿಗೆ ಅರ್ಹರಾದ ಮತದಾರರು ಆಯಾ ಇಲಾಖೆ ನೋಡಲ್ ಅಧಿಕಾರಿಗಳಿಂದ ಇಡಿಸಿ ಪಡೆಯದೇ, ಅಂಚೆಮತಪತ್ರ ಸೌಲಭ್ಯ ಕೇಂದ್ರಕ್ಕೆ ಬಂದು ಗೊಂದಲಕ್ಕೆ ಒಳಪಡುತ್ತಿರುವದರಿಂದ ಅವರಿಗೆ ತಿಳುವಳಿಕೆ ನೀಡಿ, ಮತದಾನದಿದಂದು ಮತ ಚಲಾಯಿಸುವಂತೆ ಸೂಚಿಸಿ, ತಿಳಿಹೆಳಲಾಗಿದೆ.

   ಮೇ 1,2 ಮತ್ತು 3 ರಂದು ಮೂರು ದಿನಗಳ ಕಾಲ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆಮತಪತ್ರದ ಮೇಲೆ ಮತದಾನ ಮಾಡಲು ಅವಕಾಶ ನೀಡಿ,ಕಳೆದ ಒಂದು ವಾರದಿಂದ ಆಯಾ ಇಲಾಖೆಗಳಿಗೆ ಮಾಹಿತಿ ನೀಡಿ, ಮಾಧ್ಯಮಗಳ ಮೂಲಕ ಈ ಕುರಿತು ಪ್ರಕಟಣೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಇಂದು ಬೆಳಿಗ್ಗೆ ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಸ್ಥಾಪಿಸಿರುವ ಸೌಲಭ್ಯ ಕೇಂದ್ರಕ್ಕೆ, ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯನಿರತ ಬೇರೆ ಲೋಕಸಭೆ ಮತಕ್ಷೇತ್ರಗಳ ಮತದಾರರಾಗಿರುವ ಪೊಲೀಸ್ ಹಾಗೂ ಇತರ ಸಿಬ್ಬಂದಿಗಳು ತಪ್ಪು ತಿಳುವಳಿಕೆಯಿಂದ ಅಂಚೆಮತದಾನಕ್ಕೆ ಆಗಮಿಸಿದ್ದರು. ಅವರಿಗೆ ತಿಳುವಳಿಕೆ ನೀಡಿ, ನಿಮ್ಮ ಅಂಚೆಮತಪತ್ರಗಳು ಹಾವೇರಿ ಜಿಲ್ಲಾಧಿಕಾರಿಗೆ ಬಂದಿರುತ್ತವೆ. ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರ ಧಾರವಾಡ ಲೋಕಸಭೆ ವ್ಯಾಪ್ತಿಗೆ ಒಳಪಟ್ಟರೂ, ಅದು ಹಾವೇರಿ ಜಿಾಲ್ಲೆಯ ತಾಲೂಕು ಆಗಿರುವದರಿಂದ ಹಾವೇರಿಯಲ್ಲಿ ಸ್ಥಾಪಿಸಿರುವ ಅಂಚೆಮತಪತ್ರ ಸೌಲಭ್ಯ ಕೇಂದ್ರದಲ್ಲಿ ತಾವು ಮತ ಚಲಾಯಿಸಬೇಕಾಗುತ್ತದೆ.

    ಇಡಿಸಿ ಮತದಾನ ಸೌಲಭ್ಯ ಹಾಗೂ ಅಂಚೆಮತಪತ್ರದ ಮತದಾನ ಸೌಲಭ್ಯದ ಕುರಿತು ಆಯಾ ಇಲಾಖೆಯ ನೋಡಲ್ ಅಧಿಕಾರಿಗಳಿಗೆ, ಎಲ್ಲ ಚುನಾವಣಾ ತರಬೇತಿಗಳಲ್ಲಿ, ಚುನಾವಣೆ ಕುರಿತ ಮಾಧ್ಯಮ ಕಾರ್ಯಾಗಾರಗಳಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಆದರೂ ಕೆಲವರು ತಪ್ಪು ತಿಳುವಳಿಕೆಯಿಂದ ಇಡಿಸಿ ಸೌಲಭ್ಯದ ಬದಲಿಗೆ ಅಂಚೆಮತಪತ್ರ ಕೇಳಿ ಬರುತ್ತಾರೆ ಮತ್ತು ಅಂಚೆಮತದಾನಕ್ಕೆ ಮೂರು ದಿನಗಳ ಅವಕಾಶ ನೀಡಿದ್ದರೂ ಹಾಗೂ ಇಡಿಸಿ ಸಲಭ್ಯ ಪಡೆಯಲು ಸಾಕಷ್ಟು ಸಮಯವಕಾಶವಿದ್ದರೂ ಗೊಂದಲ ಮಾಡಿಕೊಳ್ಳುತ್ತಿದ್ದಾರೆ.

    ಆದ್ದರಿಂದ ಅಂಚೆಮತದಾನ ಅಥವಾ ಇಡಿಸಿ ಸೌಲಭ್ಯದ ಮತದಾನ ಕುರಿತು ಗೊಂದಲಗಳಿದ್ದಲ್ಲಿ ಆಯಾ ಇಲಾಖೆಯಲ್ಲಿ ನೇಮಿಸಿರುವ ನೋಡಲ್ ಅಧಿಕಾರಿಗೆ ಸಂಪರ್ಕಿಸಿ ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಂಚೆಮತಪತ್ರದ ಮತದಾನ ಸೌಲಭ್ಯ ಕೇಂದ್ರಗಳಲ್ಲಿ 1262 ಮತದಾನ: ನಿನ್ನೆ ಮೇ.01 ರಂದು ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರದ ಕೇಂದ್ರ ಸ್ಥಾನಗಳಲ್ಲಿ ಹಾಗೂ ಧಾರವಾಡ ತಹಸಿಲ್ದಾರ ಕಚೇರಿ ಆವರಣದಲ್ಲಿ ಸ್ಥಾಪಿಸಿದ್ದ ಅಂಚೆಮತದಾನ ಸೌಲಭ್ಯ ಕೇಂದ್ರದಲ್ಲಿ ಹೊರ ಜಿಲ್ಲೆಯವರಾಗಿರುವ ಮತ್ತು ಧಾರವಾಡ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ 1262 ಜನ ಅಧಿಕಾರಿ ಮತ್ತು ಸಿಬ್ಬಂದಿ ಮತದಾರರು ತಾವು ಮತದಾರರಾಗಿರುವ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಅಂಚೆಮತಪತ್ರದ ಮೇಲೆ ತಮ್ಮ ಮತದಾನದ ಹಕ್ಕನ್ನು ನಿಯಮಾನುಸಾರ ಚಲಾಯಿಸಿದ್ದಾರೆ.

    ಮತ್ತು ಧಾರವಾಡ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯನಿರತರಾಗಿರುವ ಬೇರೆ ಜಿಲ್ಲೆಗಳ ಮತದಾರರಾಗಿರುವ ಅಂಚೆಮತಪತ್ರ ಸೌಲಭ್ಯ ಪಡೆದವರು ಮೇ 3 ರ ವರೆಗೆ ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ತೆರೆದಿರುವ ಅಂಚೆಮತದಾನ ಸೌಲಭ್ಯ ಕೇಂದ್ರದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಬಹುದು ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap