ಗುಬ್ಬಿ:
ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಈಗಾಗಲೇ ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕು ಕೇಂದ್ರದಲ್ಲಿ 60 ಹಾಸಿಗೆಗಳ ಸುಸಜ್ಜಿತ ವಿಶೇಷ ಕೇಂದ್ರವನ್ನು ಮಕ್ಕಳಿಗಾಗಿ ಕಾದಿರಿಸಲು ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ಪಟ್ಟಣದ ಹೊರವಲಯದ ಹೇರೂರು ಬಳಿ ಇರುವ ಇಂದಿರಾಗಾಂಧಿ ವಸತಿ ಶಾಲೆಯ ಕೋವಿಡ್ ಸೆಂಟರ್ಗೆ ಭೇಟಿ ನೀಡಿ ರೋಗಿಗಳೊಂದಿಗೆ ಚರ್ಚಿಸಿ ಸಂತ್ವಾನ ಹೇಳಿ ಮನೋಸ್ಥೈರ್ಯ ತುಂಬಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಮೂರನೇ ಅಲೆಯ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. 1500 ಕೋಟಿ ರೂಗಳ ಮೀಸಲು ಹಣದೊಂದಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಎರಡು ತಾಲ್ಲೂಕಿನಲ್ಲೂ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗುವುದು ಎಂದರು.
ಗುಬ್ಬಿ ಆಸ್ಪತ್ರೆಯಲ್ಲೇ ಕೋವಿಡ್ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಮಾಡಿದ್ದ ಮನವಿಗೆ ಪುರಸ್ಕರಿಸಿದ ಜಿಲ್ಲಾ ಸಚಿವರು ಕೋವಿಡ್ ಸ್ವ್ಯಾಬ್ ಪರೀಕ್ಷಾ ಕೇಂದ್ರ ಸ್ಥಾಪಿಸಿ 24 ಗಂಟೆಯಲ್ಲಿ ಫಲಿತಾಂಶ ಸಂಬಂಧಿಸಿದವರಿಗೆ ರವಾನಿಸಲಾಗುವುದು. ಈ ಜತೆಗೆ 500 ಲೀಟರ್ ಆಕ್ಸಿಜನ್ ಫ್ಲಾಂಟ್ ಮತ್ತು ಸಿಟಿ ಸ್ಕ್ಯಾನಿಂಗ್ ಸ್ಥಾಪನೆಗೂ ಕೂಡಾ ಮನವಿ ಮಾಡಲಾಗಿದೆ. ಮೂರನೇ ಅಲೆಯ ಆರಂಭಕ್ಕೂ ಮುನ್ನವೇ ಎಲ್ಲಾ ರೀತಿಯಲ್ಲೂ ಗುಬ್ಬಿ ಆಸ್ಪತ್ರೆ ತಯಾರಿ ಮಾಡಿಕೊಳ್ಳಲಿದೆ ಎಂದ ಅವರು ಸಿ.ಎಸ್.ಪುರ ಹೋಬಳಿಯ ನೂರಾರು ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದಾರೆ. ಈ ಜತೆಗೆ ಸರ್ಕಾರ ತುಮಕೂರು ಭಾಗಕ್ಕೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಸೂಕ್ತ ಸ್ಥಳ ಪರಿಶೀಲನೆ ನಡೆಸಿದೆ ಎಂದರು.
ಅನ್ಲಾಕ್ ಮಾಡಲಾಗುತ್ತಿದೆ ಎಂಬುದು ಸುಳ್ಳು ವದಂತಿಯಾಗಿದೆ. ಈ ತಿಂಗಳ 14 ರ ನಂತರ ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡಲು ಚಿಂತಿಸಲಾಗಿದೆ. ಎಲ್ಲವನ್ನೂ ಅನ್ಲಾಕ್ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಲಿದೆ. ಗುಬ್ಬಿ ತಾಲ್ಲೂಕಿನಲ್ಲಿ ಬ್ಲಾಕ್ ಫಂಗಸ್ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ತುರುವೇಕೆರೆ ತಾಲ್ಲೂಕಿನಲ್ಲಿ ಮೂರು ಪ್ರಕರಣ ಕಾಣಿಸಿಕೊಂಡಿದೆ. ಈ ಪೈಕಿ ಒರ್ವ ಸಾವನ್ನಪ್ಪಿದ್ದು, ಉಳಿದ ಇಬ್ಬರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೆಂಟರ್ನಲ್ಲಿ ಸಮಸ್ಯೆ ಎಂಬ ದೂರು ಬಂದ ಹಿನ್ನಲೆ ಖುದ್ದು ಪರಿಶೀಲಿಸಲಾಗಿದೆ. ವಾಸ್ತವದಲ್ಲಿ ಸಣ್ಣ ಲೋಪ ಹೊರತುಪಡಿಸಿದರೆ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ ಎಂದರು.
ಕೇಂದ್ರ ಸರ್ಕಾರ ಉಚಿತ ರೇಷನ್, ಉಚಿತ ವಾಕ್ಸಿನ್ ಎಂದು ಘೋಷಿಸಿ ತುರ್ತು ಕ್ರಮವಹಿಸಿದೆ. ಈ ತುರ್ತು ಸಮಸ್ಯೆಗಳನ್ನು ಎದುರಿಸುವಲ್ಲಿ ಕೇಂದ್ರ ಸರ್ಕಾರದಷ್ಟೇ ರಾಜ್ಯ ಸರ್ಕಾರ ಕೂಡಾ ಶ್ರಮಿಸಿದೆ. ಈ ಸಮಯದಲ್ಲಿ ನಾಯಕತ್ವ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಅಸಂಬದ್ಧ. ಯಡಿಯೂರಪ್ಪ ಅವರ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಇಬ್ಬರು ನಾಯಕರ ಅಸಮಾಧಾನಕ್ಕೆ ಸುಳ್ಳು ವದಂತಿ ಹಬ್ಬಿಸುವುದು ಬೇಕಿಲ್ಲ ಎಂದ ಅವರು ತುಮಕೂರಿನಲ್ಲಿ ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳ ಕುರಿತು ಚರ್ಚಿಸುತ್ತೇನೆ. ಈ ಜತೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ನಂತರ ಕೋವಿಡ್ ಸೆಂಟರ್ನಲ್ಲಿರುವ ರೋಗಿಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಿ ಕೈ ಮುಗಿದು ಸಾಂತ್ವಾನ ಹೇಳುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್ ಹಿರೇಮಠ, ಸಿ.ಎಸ್.ಪುರ ವಿಎಸ್ಎಸ್ಎನ್ ಅಧ್ಯಕ್ಷ ಬಿ.ಎಸ್.ನಾಗರಾಜು, ಸಿ.ಎಸ್.ಪುರ ಹೋಬಳಿ ಬಿಜೆಪಿ ಅಧ್ಯಕ್ಷ ಇಡಗೂರು ರವಿ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/08Gubbi-Photo-01-scaled-e1623219710317.jpg)