ಗುಬ್ಬಿ :
ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯವು ಬಹಳ ಪುರಾತನವಾದ ದೇವಾಲಯವಾಗಿದ್ದು, ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆಯುತ್ತಾರೆ. ಈಗ ಈ ದೇವಾಲಯ ಬಿ ದರ್ಜೆಯಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಇದರ ಆದಾಯ ಮೂಲದಿಂದಾಗಿ ಎ ದರ್ಜೆಗೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕುರಿತ ಶೇಕಡ 90 ರಷ್ಟು ಪ್ರಕ್ರಿಯೆ ಈಗಾಗಲೇ ನಡೆದಿದೆ.
ಗುಬ್ಬಿಯ ಚನ್ನಬಸವೇಶ್ವರರು ಎಡೆಯೂರು ಸಿದ್ದಲಿಂಗೇಶ್ವರರ ಗುರುಗಳು ಆದ ಕಾರಣ ಎಡೆಯೂರಿಗೆ ಬರುವ ಭಕ್ತರೆಲ್ಲ ಇಲ್ಲಿಗೆ ಬಂದು ದರ್ಶನ ಮಾಡಿಕೊಂಡು ಹೋಗುವ ವಾಡಿಕೆ ಇದೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ಸುಮಾರು 29 ವರ್ಷಗಳಿಂದ ಪ್ರಧಾನ ಅರ್ಚಕರ ಹುದ್ದೆ ಖಾಲಿ ಇತ್ತು. 1992 ರಲ್ಲಿ ಪ್ರಭುಸ್ವಾಮಿ ಅರ್ಚಕರಾಗಿದ್ದರು. ಇವರು ಅನಧಿಕೃತವಾಗಿ 1 ವರ್ಷಗಳ ಕಾಲ ಗೈರು ಹಾಜರಾಗಿದ್ದರು. ಆದ ಕಾರಣ ಇವರನ್ನು ಸರ್ಕಾರ ವಜಾಗೊಳಿಸಿತ್ತು. ಈ ಸಂದರ್ಭದಲ್ಲಿ ದೇವಾಲಯದ ಪರಿಚಾರಕರಾಗಿದ್ದ ಕೆ.ಸಿ.ಮಲ್ಲಿಕಾರ್ಜುನ್ ಅವರನ್ನ ಪ್ರಭಾರ ಪ್ರಧಾನ ಅರ್ಚಕರನ್ನಾಗಿ ನಿಯೋಜನೆ ಮಾಡಲಾಗಿತ್ತು.
ದೇವಾಲಯದಲ್ಲಿ ಸಹಾಯಕ ಅರ್ಚಕರಾಗಿದ್ದ ಜಿ.ಕೆ.ರಾಜೇಶ್ ವಿದ್ಯಾರ್ಹತೆಯ ಆಧಾರದ ಮೇಲೆ ನನ್ನನ್ನ ಪ್ರಧಾನ ಅರ್ಚಕರನ್ನಾಗಿ ನೇಮಿಸಬೇಕೆಂದು ಮುಜರಾಯಿ ಇಲಾಖೆಯ ಆಯುಕ್ತರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಐದಾರು ವರ್ಷಗಳು ಕಲಾಪಗಳು ನಡೆದು, ವಿದ್ಯಾರ್ಹತೆ ಹಾಗೂ ಸೇವಾ ಅನುಭವದ ಆಧಾರದ ಮೇಲೆ ಏ.22 ರಂದು ನ್ಯಾಯಾಲಯ ಜಿ.ಕೆ.ರಾಜೇಶ್ ಅವರನ್ನು ಪ್ರಧಾನ ಅರ್ಚಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
