ಹುಳಿಯಾರು : ಹಿಂಗಾರು ಬಿತ್ತನೆಗೆ ರೈತರ ಸಿದ್ಧತೆ

ಹುಳಿಯಾರು :

     ಮುಂಗಾರು ಮಳೆಯ ಜಾಟದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು ಎನ್ನುವಂತೆ ಹತ್ತು ಹದಿನೈದು ದಿನಗಳ ಕಾಲ ಸತತವಾಗಿ ಮಳೆ ಬಿದ್ದ ಪರಿಣಾಮ ಹೆಸರು, ಅಲಸಂದೆ ನಷ್ಟವಾಗಿದ್ದರೂ ಸಹ ರೈತರು ಹಿಂಗಾರು ಮಳೆಯ ಮೇಲೆ ಭರವಸೆ ಇಟ್ಟು ಹಿಂಗಾರು ಬಿತ್ತನೆಗೆ ಭರದ ತಯಾರಿ ಮಾಡುತ್ತಿದ್ದಾರೆ.

      ಕಳೆದ ಬಾರಿ ಮುಂಗಾರು ಉತ್ತಮವಾಗಿ ಬಂದು ರೈತರಿಗೆ ಬಂಪರ್ ಬೆಳೆಯ ಸೂಚನೆ ನೀಡಿತ್ತು. ಅದರಂತೆ ಉತ್ತಮ ಇಳುವರಿ ಬಂದು ಇನ್ನೇನು ಕೂಯ್ಲು ಕಾರ್ಯ ಆರಂಭವಾಗುವಷ್ಟರಲ್ಲಿ ಮಳೆ ಮತ್ತೆ ಸುರಿಯಲಾರಂಭಿಸಿತು. ಪರಿಣಾಮ ಗಿಡದಲ್ಲೆ ಕಾಳುಗಳು ಮೊಳಕೆ ಒಡೆದು ಭಾರಿ ನಷ್ಟವಾಯಿತು.

ಹತ್ತನ್ನೆರಡು ದಿನಗಳ ಕಾಲ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಹಿಂಗಾರು ಬೆಳೆಯ ಆಸೆ ಚಿಗುರಲು ಕಾರಣವಾಯಿತು. ಹಾಗಾಗಿ ಮುಂಗಾರು ಬೆಳೆ ಹರಗಿ, ಹಿಂಗಾರು ಬಿತ್ತನೆಗೆ ರೈತರು ಭರದಿಂದ ತಯಾರಿ ಮಾಡುತ್ತಿದ್ದಾರೆ. ಹೊಲವನ್ನು ಹಸನುಗೊಳಿಸಲು ರೈತರು ಮುಂದಾಗಿರುವುದರಿಂದ ಎತ್ತ ನೋಡಿದರು ಟ್ರಾಕ್ಟರ್ ಓಡಾಟದ ದೃಶ್ಯ ಸಾಮಾನ್ಯವಾಗಿದೆ. ಅಲ್ಲದೆ ಟ್ರಾಕ್ಟರ್ ಬಾಡಿಗೆ ದರವೂ ಸಹ ಹೆಚ್ಚಾಗಿದ್ದು, ಎರಡ್ಮೂರು ದಿನಗಳ ಕಾಲ ಬುಕ್ ಮಾಡಿ ಟ್ರಾಕ್ಟರ್ ಕರೆದೊಯ್ಯಬೇಕಿದೆ.

ಸಾಮಾನ್ಯವಾಗಿ ಈ ಭಾಗದಲ್ಲಿ ಹಿಂಗಾರು ಬೆಳೆಯಾಗಿ ರಾಗಿ, ಸಾಮೆ, ನವಣೆ, ಅವರೆ, ಹುರುಳಿ ಬಿತ್ತುತ್ತಾರೆ. ಹಾಗಾಗಿ ಕೃಷಿ ಇಲಾಖೆಗೆ ಬೀಜಕ್ಕಾಗಿ ರೈತರು ಮುಗಿ ಬಿದ್ದಿದ್ದು, ಗೊಬ್ಬರ ಸಹ ಸ್ಟಾಕ್ ಮಾಡಿಟ್ಟುಕೊಳ್ಳುತ್ತಿದ್ದಾರೆ. ಕೆಲವರಂತೂ ಮಣ್ಣಿನಲ್ಲಿ ತೇವಾಂಶ ಇರುವುದರಿಂದ ಬಿತ್ತನೆ ಕಾರ್ಯವನ್ನೂ ಪೂರೈಸಿದ್ದಾರೆ. ಕೆಲವರು ಒಂದು ಹದ ಮಳೆ ಬಿದ್ದರೆ ಒಳಿತೆಂದು ರೈತರು ಮಳೆಗೆ ಕಾಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link