ಪ್ರಗತಿ ಫಲಶೃತಿ : ಬೋರನಕಣಿವೆ ಜಲಾಶಯದ ದುರಸ್ತಿ ಕಾರ್ಯ ಆರಂಭ

 ಹುಳಿಯಾರು :

      ಕೆಆರ್‍ಎಸ್ ಜಲಾಶಯಕ್ಕಿಂತಲೂ ಮೊದಲೆ ನಿರ್ಮಾಣಗೊಂಡ 125 ವರ್ಷಗಳ ಇತಿಹಾಸವುಳ್ಳ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಒಳ ಗೋಡೆಗಳು ಶಿಥಿವಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಎದುರಾಗಿತ್ತು ಆತಂಕ :

     1892ರಲ್ಲಿ ಮೈಸೂರು ಮಹಾರಾಜರು ಕಲ್ಲು, ಮಣ್ಣಿನ ಇಟ್ಟಿಗೆ, ಗಾರೆ ಬಳಸಿ ಈ ಜಲಾಶಯವನ್ನು ಕಟ್ಟಿಸಿದ್ದರು. ಜಲಾಶಯ ಕಟ್ಟಿ ನೂರಾರು ವರ್ಷಗಳಾಗಿರುವುದರಿಂದ ಸಹಜವಾಗಿ ಜಲಾಶಯದ ಒಳ ಗೋಡೆಯ ಗಾರೆ ಸಂಪೂರ್ಣ ಹಾಳಾಗಿತ್ತು. ಅಲ್ಲದೆ ಗೋಡೆಯ ಇಟ್ಟಿಗೆಯೂ ಸಹ ನೂರಾರು ವರ್ಷಗಳಿಂದ ನೀರಿನಲ್ಲಿ ನೆನೆದು ಕರಗುತ್ತಿತ್ತು. ಹೀಗೆ ನಿರ್ಲಕ್ಷ್ಯಿಸಿದರೆ ಇಡೀ ಜಲಾಶಯವೇ ಶಿಥಿಲವಾಗುವ ಆತಂಕ ಎದುರಾಗಿತ್ತು.

ಸೂಕ್ತ ಸಮಯದಲ್ಲಿ ದುರಸ್ಥಿ ಕಾರ್ಯ :

     ಅಲ್ಲದೆ ಜಲಾಶಯದ ಗೋಡೆಯಲ್ಲಿ ಅರಳಿಗಿಡ ಸೇರಿದಂತೆ ವಿವಿಧ ಗಿಡಗಳು ಬೆಳೆದಿದ್ದು ಇವುಗಳ ಬೇರುಗಳು ಜಲಾಶಯ ಕೊರೆದು ಜಲಾಶಯಕ್ಕೆ ಭಾರಿ ಹಾನಿ ಮಾಡುವ ಸಂಭವವಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಬೋರನಕಣಿವೆ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗದ ಪರಿಣಾಮ ಈಗ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಕೆಳಮಟ್ಟದಲ್ಲಿ ನೀರಿದ್ದು ಶಿಥಿಲಗೊಂಡ ಗೋಡೆಗಳನ್ನು ಅನಾಯಾಸವಾಗಿ ದುರಸ್ತಿ ಮಾಡಬಹುದಾಗಿತ್ತು.

ಜನರ ಒತ್ತಡವಿತ್ತು :

     ಈ ಜಲಾಶಯಕ್ಕೆ ಶೀಘ್ರದಲ್ಲೇ ಹೇಮೆ ಮತ್ತು ಭದ್ರೆಯ ನೀರು ಹರಿಯುವುದರಲ್ಲದೆ ಹುಳಿಯಾರು, ಗಾಣಧಾಳು, ಹೊಯ್ಸಲಕಟ್ಟೆ, ಕೆಂಕೆರೆ ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ಜಲಾಶಯದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಹಾಗಾಗಿ ಈ ಅವಕಾಶವನ್ನು ಬಿಟ್ಟರೆ ಇನ್ನೆಂದೂ ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ದುರಸ್ತಿಗೆ ಒತ್ತಡ ಹಾಕಿದ್ದರು.

ಯಂತ್ರ ಬಳಸಿ ಬಿರುಸಿನ ಕಾಮಗಾರಿ :

     ಈಗ ಸಣ್ಣ ನೀರಾವರಿ ಇಲಾಖೆಯಿಂದ ಜಲಾಶಯದ ದುರಸ್ತಿ ಕಾರ್ಯ ಆರಂಭವಾಗಿದ್ದು ಯಂತ್ರೋಪಕರಣಗಳು ಜಲಾಶಯದ ಬಳಿ ತೆರಳಲು 3 ಕಿ.ಮೀ ದೂರದಿಂದ ಹೊಸದಾಗಿ ಮಣ್ಣು ಹೊಡೆದು ರಸ್ತೆ ಮಾಡಲಾಗುತ್ತಿದೆ. ಅಲ್ಲದೆ ಶಿಥಿಲಗೊಂಡ ಗೋಡೆಗಳ ಬಳಿ ಯಂತ್ರಗಳು ನಿಲ್ಲಲು ಅಲ್ಲಿನ ನೀರು ಹಾಗೂ ಹೂಳು ತೆರವು ಮಾಡಿ ಬಂಡ್ ಹಾಕಲಾಗುತ್ತಿದೆ. ಎರಡ್ಮೂರು ಜೆಸಿಬಿ, ಏಳೆಂಟು ಟಿಪ್ಪರ್‍ಗಳು, ಅನೇಕ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದು ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ.

10 ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣ : 

      ಬೋರನಕಣಿವೆ ಜಲಾಶಯದ ಗೋಡೆಗಳ ದುರಸ್ತಿ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ನದಿ ನೀರು ಹರಿಯುವ ಮುನ್ನ ದುರಸ್ತಿ ಮಾಡಲೇ ಬೇಕಿರುವುದರಿಂದ ತುರ್ತು ಕಾಮಗಾರಿಯೆಂದು ಪರಿಗಣಿಸಿ ಟೆಂಡರ್ ಕರೆಯದೆ ಕಾಮಗಾರಿ ಮಾಡಿಸಲಾಗುತ್ತಿದೆ. ಜಲಾಶಯದ ಕೆಳಗೆ ಮೂರ್ನಾಲ್ಕು ಅಡಿಯಿಂದಲೂ ವಾಟರ್ ಪ್ರೂಫಿಂಗ್ ಪ್ಲಾಸ್ಟ್ರಿಂಗ್ ಮಾಡಲಾಗುತ್ತಿದೆ. ಗೋಡೆಗಳ ಮೇಲೆ ಬೆಳೆದಿರುವ ಗಿಡಗಳನ್ನೂ ಸಹ ತೆರವು ಮಾಡಲಾಗುತ್ತಿದ್ದು, 10 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

-ಪ್ರಭಾಕರ್, ಜೆಇ, ಸಣ್ಣ ನೀರಾವರಿ ಇಲಾಖೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap