ಹುಳಿಯಾರು:
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಬುಧವಾರ ಬೆಳ್ಳಂಬೆಳಗ್ಗೆಯೇ ಉತ್ತಮ ಮಳೆಯಾಗಿದೆ.
ಕಳೆದ ಐದಾರು ದಿನಗಳಿಂದ ಮಳೆ ಬರುವ ವಾತಾವರಣ ನಿರ್ಮಾಣವಾಗಿತ್ತಾದರೂ ಮಳೆ ಬರುತ್ತಿರಲಿಲ್ಲ. ಮುಂಗಾರು ಬಿತ್ತನೆಗಾಗಿ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದರು. ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮಳೆ ಎಡೆಬಿಡದೇ 8 ಗಂಟೆಯವರೆಗೆ ಸುರಿಯಿತು.
ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ ಎಲ್ಲೆಡೆ ವಾತಾವರಣ ಸಂಪೂರ್ಣ ತಂಪಾಗಿದೆ. ಬಿಸಿಲ ಝಳದಿಂದ ರೋಸಿ ಹೋಗಿದ್ದ ಜನರಿಗೆ ಮಳೆ ಸಮಾಧಾನ ತಂದುಕೊಟ್ಟಿತು. ಅಲ್ಲದೆ ಮುಂಗಾರು ಬಿತ್ತನೆಗಾಗಿ ಕಾಯುತ್ತಿದ್ದ ರೈತರಿಗೆ ವರವಾಯಿತು. ಕೆಲ ಹಳ್ಳಿಗಳಲ್ಲಿ ಹಳ್ಳ ಹರಿಯಿತು. ಗುಂಡಿಗಳಲ್ಲಿ ನೀರು ನಿಂತಿತು. ಚೆಕ್ಡ್ಯಾಮ್ಗಳಿಗೆ ನೀರು ಹರಿದು ಬಂತು.
ಆದರೆ, ಪಟ್ಟಣದಲ್ಲಿ ಮುಂಜಾನೆ ಮಳೆ ವ್ಯಾಪಾರ ವಹಿವಾಟು ಅಸ್ತವ್ಯವಸ್ಥಗೆ ಕಾರಣವಾಯಿತು. ಮಳೆ ಬಂದಿದ್ದರಿಂದ ಹಳ್ಳಿಯ ಜನರು ಪಟ್ಟಣಕ್ಕೆ ಬಾರದಿದ್ದರಿಂದ ತರಕಾರಿ, ಹಣ್ಣು, ಹೂವು ವ್ಯಾಪಾರ ಸಂಪೂರ್ಣ ಇಲ್ಲದಾಯಿತು. 10 ಗಂಟೆಗಾಗಲೇ ಬಾಗಿಲು ಹಾಕಬೇಕಾಗಿದ್ದರಿಂದ ದಿನಸಿ ವ್ಯಾಪಾರವೂ ಸಹ ಎಂದಿನಂತೆ ನಡೆಯಲಿಲ್ಲ. ಮಳೆಯಿಂದಾಗಿ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡ ಪರಿಣಾಮ ಮನೆಗಳಲ್ಲಿ ತಿಂಡಿಯೂ ಸಹ ತಡವಾಯಿತು
ಮಳೆ ಮಾಪನದ ಪ್ರಕಾರ ಹುಳಿಯಾರು 17.4 ಮಿಮೀ, ಬೋರನಕಣಿವೆ 20.8 ಮಿಮೀ, ಮತಿಘಟ್ಟ 2 ಮಿಮೀ, ದೊಡ್ಡಎಣ್ಣೇಗೆರೆ 6.2 ಮಿಮೀ, ಸಿಂಗದಹಳ್ಳಿ 5.1 ಮಿಮೀ, ಚಿಕ್ಕನಾಯಕನಹಳ್ಳಿ 4.8 ಮಿಮೀ ಮಳೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
