ಗುಬ್ಬಿ :
ಜೆಡಿಎಸ್ ಪಕ್ಷದ ಮಿಷನ್ 123 ಕಾರ್ಯಾಗಾರ ತೋರಿಕೆಯ ಕಾರ್ಯಕ್ರಮವಾಗಿದೆ. ಗೆಲ್ಲುವ ಅಭ್ಯರ್ಥಿಗಳನ್ನು ದೂರವಿಟ್ಟು 123 ಸ್ಥಾನಗಳನ್ನು ಗೆಲ್ಲುವ ನಾಟಕವಾಡುತ್ತಿದ್ದಾರೆ. ಅವರಿಗೆ ಅವಶ್ಯವಿರುವುದು ಕೇವಲ 23 ಸ್ಥಾನಮಾತ್ರವಷ್ಟೇ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ರಾಜ್ಯ ದಳಪತಿಗಳ ವಿರುದ್ಧ ಮಾರ್ಮಿಕವಾಗಿ ವ್ಯಂಗ್ಯವಾಡಿದರು.
ಪಟ್ಟಣದ ಗುಬ್ಬಿ ಅಮಾನಿಕೆರೆಯು ಹೇಮೆ ನೀರು ಹರಿದು ಕೋಡಿ ಬಿದ್ದ ಕಾರಣ, ಗಂಗಾಪೂಜೆ-ಬಾಗಿನ ಅರ್ಪಿಸಿ ಮಾತನಾಡಿದ ಅವರು ವರಿಷ್ಠರ ನಡವಳಿಕೆಗೆ ಬೇಸತ್ತ ಹಲವಾರು ರಾಜ್ಯ ಮುಖಂಡರು ಜೆಡಿಎಸ್ ತೊರೆಯುವ ದಿನಗಳು ಸಮೀಪದಲ್ಲಿವೆ ಎಂದು ಭವಿಷ್ಯ ನುಡಿದರು.
ಮಾತುಕತೆ ಮುಗಿದ ಅಧ್ಯಾಯ : ಇದೇ ತಿಂಗಳ 25 ರ ಸಮಾವೇಶಕ್ಕೆ ನಮ್ಮ ಯಾವ ಕಾರ್ಯಕರ್ತರು ಹೋಗುವುದಿಲ್ಲ. ಕೇವಲ ಮೂರು ಮಂದಿ ಮಾತ್ರ ಸಿಡಿದು ಅತ್ತ ಹೋಗಿದ್ದಾರೆ ಅಷ್ಟೆ. ಮಾತುಕತೆ ಎಂಬುದು ಮುಗಿದ ಅಧ್ಯಾಯ. ಈ ಹಿಂದೆ ಪಕ್ಷ ವರಿಷ್ಠರ ಬಳಿ ಸಂಘಟನೆ ಬಗ್ಗೆ ಚರ್ಚಿಸಿದರೆ ಸೂಕ್ತ ಉತ್ತರ ನೀಡಲಿಲ್ಲ. ಎಂಎಲ್ಸಿ ಚುನಾವಣೆಗೆ ಬೆಮೆಲ್ ಕಾಂತರಾಜು ಅವರನ್ನೆ ನಿಲ್ಲಿಸೋಣ. ತುರುವೇಕೆರೆ ಕೂಡಾ ಸುರಕ್ಷಿತವಾಗಿ ಇರುತ್ತದೆ ಎಂದು ಸಲಹೆ ನೀಡಿದರೆ ನಮ್ಮನ್ನೆ ಹೊರ ಹಾಕುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಿಂಗ್ ಮೇಕರ್ ಆಗೋದು ಗುರಿ :
ವರಿಷ್ಠರೆ ಅರ್ಧಚಂದ್ರ ಪ್ರಯೋಗ ಮಾಡಿದ್ದಾರೆ. ಇದರ ಹಿಂದಿನ ಮರ್ಮ ತಿಳಿಯುತ್ತಿಲ್ಲ. ಸ್ಪಷ್ಟ ಬಹುಮತ ಪಡೆಯುವ ಮಾತುಗಳಾಡುತ್ತಾ ಪಕ್ಷ ಕಟ್ಟಿ ಬೆಳೆಸಿದ ಮುಖಂಡರು, ಕಾರ್ಯಕರ್ತರನ್ನು ಹೊರ ದಬ್ಬುವ ಪ್ರಕ್ರಿಯೆಯನ್ನು ಗಮನಿಸಿದರೆ ಕೇವಲ 23 ಸ್ಥಾನ ಪಡೆದು ಕಿಂಗ್ ಮೇಕರ್ ಆಗೋದು ಅಷ್ಟೇ ಇವರ ಗುರಿ ಎಂದು ವ್ಯಂಗ್ಯವಾಡಿದರು.
ಕಾರ್ಯಕರ್ತರು ಪೋನ್ ಮಾಡುತ್ತಿದ್ದಾರೆ :
ಬೇರೆ ಪಕ್ಷಕ್ಕೆ ಹೋಗುವ ಇಂಗಿತ ಇರಲಿಲ್ಲ. ಈಗ ಆಗಿರುವ ಅಪಮಾನಕ್ಕೆ ಆಲೋಚನೆ ಮಾಡಬೇಕಿದೆ. ಈ ಸಮಾವೇಶಕ್ಕೆ ಹೋಗದಂತೆ ನಮ್ಮ ಕಾರ್ಯಕರ್ತರೆ ಖುದ್ದು ಫೋನ್ ಮಾಡಿ ಮನವಿ ಮಾಡುತ್ತಿದ್ದಾರೆ. ಎಲ್ಲವೂ ಕಾಲವೇ ನಿರ್ಣಯ ಮಾಡುತ್ತದೆ. ನಮ್ಮೊಟ್ಟಿಗಿರುವ ಬೆಮೆಲ್ ಕಾಂತರಾಜು ಅವರ ವರ್ಚಸ್ಸು 2023 ಕ್ಕೆ ತುರುವೇಕೆರೆಯಲ್ಲಿ ಕಾಣುತ್ತದೆ. ಕಾದು ನೋಡಿ ಎಂದು ಮಾಧ್ಯಮಗಳ ಮುಂದೆ ವಿಶ್ವಾಸ ವ್ಯಕ್ತಪಡಿಸಿದರು.
ನಾನೇನು ರಾಜಕೀಯ ಸಂನ್ಯಾಸಿಯಲ್ಲ :
ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ ತುರುವೇಕೆರೆ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಾಣಲು ವರಿಷ್ಠರಲ್ಲಿ ಕೇಳಿದ್ದಾಗ ಸಾಧ್ಯವಿಲ್ಲದ ಉತ್ತರ ಬಂದಿತ್ತು. ನಾವೇನೂ ರಾಜಕೀಯ ಸನ್ಯಾಸಿಗಳಲ್ಲ. ನಮ್ಮ ಸಿದ್ಧಾಂತಕ್ಕೆ ಒಗ್ಗುವ ಪಕ್ಷದತ್ತ ತೆರಳುತ್ತೇವೆ. ರಾಜಕೀಯ ವ್ಯವಸ್ಥೆಗೆ ಒಪ್ಪುವ ಜಾಗ ಕಂಡುಕೊಳ್ಳುತ್ತೇವೆ. ಎಂದು ನೇರ ಮಾತುಗಳಾಡಿದರು.
ಜೆಡಿಎಸ್ ವರಿಷ್ಠರು ಇತ್ತಿಚ್ಛಿಗೆ ಆಗ-ಈಗ ಮಾತುಕತೆ ಎಂದು ಆಟವಾಡಿಸುತ್ತಿದ್ದಾರೆ. ನಮ್ಮಗಳ ಗಮನಕ್ಕೆ ಬಾರದೆ ಗುಬ್ಬಿ ಪಟ್ಟಣದಲ್ಲಿ ಸಮಾವೇಶ ಆಯೋಜನೆ ಮಾಡಿದ್ದಾರೆ. ಹೀಗೆ ಅವಮಾನ ಮಾಡಿದರೆ ಯಾರು ತಾನೆ ತಡೆದುಕೊಳ್ಳಲು ಸಾಧ್ಯ? ಮಾನ-ಮರ್ಯಾದೆ ಇರುವ ಯಾರು ಕೂಡ ಜೆಡಿಎಸ್ನಲ್ಲಿ ಇರುವುದಿಲ್ಲ.
-ಎಸ್.ಆರ್.ಶ್ರೀನಿವಾಸ್ ಶಾಸಕರು, ಗುಬ್ಬಿ ಕ್ಷೇತ್ರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
