ಲಖನೌ:
ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಆಪ್ತ, ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ಶ್ರಮಿಸಿದ್ದ ಸುರೇಂದ್ರ ಸಿಂಗ್ (50) ಅವರನ್ನು ಶನಿವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಅಮೇಠಿಯಲ್ಲಿ ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆ ಬಳಿಕ ಸುರೇಂದ್ರ ಸಿಂಗ್ ಮನೆಯ ಹೊರಗೆ ಮಲಗಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುರೇಂದ್ರ ಸಿಂಗ್ ಕೊನೆಯುಸಿರೆಳೆದಿದ್ದರು.
ಈ ಘಟನೆಗೆ ಸಂಬಂಧಿಸಿ ಸಿಂಗ್ ಅವರ ಪುತ್ರ ಅಭಯ್ ಪ್ರತಿಕ್ರಿಯಿಸಿದ್ದು,’ನಾವು ಹತ್ಯೆ ಮಾಡಿದವರನ್ನು ನೋಡಿಲ್ಲ, ಆದ್ರೆ ಇದರ ಹಿಂದೆ ಕಾಂಗ್ರೆಸ್ನವರ ಕೈವಾಡವಿದೆ ಎಂದು ದೂರಿದ್ದಾರೆ. ನಮ್ಮ ತಂದೆ ಬಿಜೆಪಿ ಹಾಗೂ ಸ್ಮೃತಿ ಇರಾನಿ ಪರವಾಗಿ ಪ್ರಚಾರ ಮಾಡುತ್ತಿದ್ದರು’ ಎಂದಿದ್ದಾರೆ.
ಶವಯಾತ್ರೆಗೆ ಹೆಗಲುಕೊಟ್ಟ ಸಚಿವೆ :
ಸುರೇಂದ್ರ ಸಿಂಗ್ ಅವರು ಹತ್ಯೆಯಾಗಿರುವ ಸುದ್ದಿ ತಿಳಿದು ಸಂಜೆ ಅಮೇಠಿಗೆ ಬಂದ ಸ್ಮೃತಿ ಇರಾನಿ, ಸಿಂಗ್ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ಸಂಯಮ ಕಾಯ್ದುಕೊಳ್ಳುವಂತೆ ಅಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಸಲಹೆ ನೀಡಿದರು. ಬಳಿಕ ನಡೆದ ಶವವಯಾತ್ರೆಯಲ್ಲಿ ಕಾರ್ಯಕರ್ತನ ಶವ ಸಾಗಿಸಲು ತಾವೇ ಹೆಗಲುಕೊಟ್ಟರು.
ಶವಸಂಸ್ಕಾರದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಇರಾನಿ, “ನಾನು ಸುರೇಂದ್ರ ಸಿಂಗ್ ಅವರ ಕುಟುಂಬದವರ ಎದುರೇ ಪ್ರಮಾಣ ಮಾಡುತ್ತೇನೆ. ಅಪರಾಧಿಗಳನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ಗೆ ಹೋಗಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
‘ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಈಗಾಗಲೇ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ತಪ್ಪಿತಸ್ಥರನ್ನು ಪತ್ತೆಮಾಡಲು ಸಹಾಯವಾಗುವಂಥ ಕೆಲವು ಸಾಕ್ಷ್ಯಗಳೂ ನಮಗೆ ಲಭಿಸಿವೆ. ಮುಂದಿನ 12 ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆ ಮಾಡುತ್ತೇವೆ’ ಎಂದು ಡಿಜಿಪಿ ಓಂಪ್ರಕಾಶ್ ಸಿಂಗ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ