ಶಿರಾ:
ರಾಜ್ಯದ ಬಂಜಾರ ಜನಾಂಗದ ಗುಳೆ ಹೋಗುವುದನ್ನು ತಡೆಗಟ್ಟುವುದೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ನೀಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ಶಿರಾ ಘಟಕ ಹಾಗೂ ವಿಶ್ವ ಗೋರ್ ಕಟಮಾಳೋ ವತಿಯಿಂದ ಶಿರಾ ನಗರದ ಬೈಪಾಸ್ ಬಳಿ ಇರುವ ಶ್ರೀ ಸೇವಾಲಾಲ್ ಉದ್ಯಾನವನದಲ್ಲಿ ಸರ್ಕಾರಕ್ಕೆ ವಿಶಿಷ್ಟ ಪತ್ರಗಳನ್ನು ಕಳುಹಿಸುವ ಮೂಲಕ ಪತ್ರ ಚಳವಳಿ ಕೈಗೊಳ್ಳಲಾಯಿತು.
ಬಂಜಾರ ಜನಾಂಗವು ತಾಂಡಗಳ ಅಭಿವೃದ್ಧಿ ಕಾಣದ ಪರಿಣಾಮ ಗುಳೆ ಹೋಗುವುದು ಸಾಮಾನ್ಯವಾಗಿದ್ದು, ಈ ಕೂಡಲೆ ತಾಂಡಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವರ್ಷಪೂರ್ತಿ ಸ್ಥಳೀಯ ಬೇಡಿಕೆಯ ಕೆಲಸಗಳು ಸಿಗಬೇಕು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕೆಲಸ ಕೂಡಲೆ ಜಾರಿಗೆ ಬರಬೇಕು.
ವಸತಿ ರಹಿತ ಬಂಜಾರ ಜನರಿಗೆ ಬಂಜಾರ ನಿಗಮದಿಂದಲೇ ನೇರವಾಗಿ ವಸತಿ ಯೋಜನೆಗಳು ಜಾರಿಯಾಗಬೇಕು. ಲಂಬಾಣಿ ತಾಂಡಾಗಳನ್ನು ಸರ್ವೇ ಮಾಡಿಸಿ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆ ಸಮೇತ ತಾಂಡಾ ನಕ್ಷೆ ತಯಾರಿಸಿ ಕಂದಾಯ ಇಲಾಖೆಯಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂಬ ಬೇಡಿಕೆಗಳೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಚಳವಳಿ ನಡೆಸಲಾಯಿತು.
ಬಂಜಾರ ರಕ್ಷಣಾ ವೇದಿಕೆಯ ತಾ.ಘಟಕದ ಅಧ್ಯಕ್ಷ ಎಲ್.ಟಿ.ಶ್ರೀನಿವಾಸನಾಯ್ಕ, ಪದಾಧಿಕಾರಿಗಳಾದ ವೆಂಕಟರಾಮು, ಧನಂಜಯ ಆರ್.ನಾಯ್ಕ, ಪ್ರದೀಪ್ ಬಿ.ನಾಯ್ಕ, ತಿಪ್ಪೇಸ್ವಾಮಿನಾಯ್ಕ, ತುಳಸಿರಾಮನಾಯ್ಕ, ದಿನೇಶ್ನಾಯ್, ಗಂಗಾಧರನಾಯ್ಕ, ರಂಗನಾಥ ಬಿ, ಧನಂಜಯ ಜಿ, ಶಿವಕುಮಾರ್, ಹನುಮಂತನಾಯ್ಕ, ತಿಮ್ಮಾನಾಯ್ಕ, ತಿಲಕ್ ಪಿ.ನಾಯ್ಕ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
