ಅತಂತ್ರ ಸ್ಥಿತಿಯಲ್ಲಿ ೪೧೭ಜನ ಮಕ್ಕಳ ಭವಿಷ್ಯ.. ಪೋಷಕರಲ್ಲಿ ಹೆಚ್ಚಿದ ಮಕ್ಕಳ ಭವಿಷ್ಯದ ಆತಂಕ
ಕೊರಟಗೆರೆ:-
ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಹಾಗೂ ಕಣ್ವ ಸಮೂಹ ಸಂಸ್ಥೆಯ ಆರ್ಥಿಕ ಅವ್ಯವಹಾರದಿಂದ ಸರಕಾರ ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಶಾಲೆಯ ಜಮೀನು, ಕಟ್ಟಡ ಮತ್ತು ನಿವೇಶನ ಮುಟ್ಟುಗೋಲು ಹಾಕಿಕೊಂಡಿದೆ. ಕಣ್ವಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೪೧೭ಜನ ವಿದ್ಯಾರ್ಥಿಗಳ ಶಿಕ್ಷಣ ಅತಂತ್ರ ಸ್ಥಿತಿಯಲ್ಲಿದ್ದು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡೇನಹಳ್ಳಿ ಸರ್ವೆ ನಂ.೫/೪ರಲ್ಲಿ ೨ಎಕರೇ ೩೭ಕುಂಟೆ ಜಮೀನು ಮತ್ತು ೦.೨೬ಕುಂಟೆ ಕಣ್ವ ಇಂಟರ್ ನ್ಯಾಷನಲ್ ಶಾಲೆ ಮತ್ತು ಶಾಲಾ ಕಟ್ಟಡವನ್ನು ಕೆಪಿಐಡಿಎಫ್ಇ ಕಾಯ್ದೆಯಡಿ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ, ಶಾಲೆಯ ಕಾರ್ಯದರ್ಶಿ ಶಿಕ್ಷಣಗೆ ಮನವಿ ಮಾಡಿ ನಿರ್ವಹಣೆಗೆ ಬಿಇಓರನ್ನು ಆಡಳಿತಾಧಿಕಾರಿ ಆಗಿ ನೇಮಿಸಲು ಮಾಡಿದ ಮನವಿಗೂ ಈಗ ಅವಕಾಶ ಇಲ್ಲದಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೇಗೆ ಶಾಲೆ ಮುಂದುವರೆಸಲು ಸರಕಾರ ಚಿಂತನೆ ನಡೆಸುತ್ತಿದೆ. ಆದರೇ ಶಾಲೆಯ ಐಸಿಎಸ್ಸಿ ಮಾನ್ಯತೆ ೨೦೨೫ರ ಮಾರ್ಚ್ ೩೧ಕ್ಕೆ ಮುಕ್ತಾಯವಾಗಿದೆ. ಇದುವರೇಗೆ ಶಾಲೆಯು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಯ ಮಾನ್ಯತೆ ಸಹ ನವೀಕರಣ ಮಾಡದಿರುವುದು ಇನ್ನೂ ಅನುಮಾನಕ್ಕೆ ಕಾರಣವಾಗಿದೆ.
ಜಿ.ನಾಗೇನಹಳ್ಳಿಯ ಕಣ್ವಶಾಲೆಯ ಭವಿಷ್ಯದ ಬಗ್ಗೆ ಪೋಷಕರಲ್ಲಿ ಅನಿಶ್ಚಿತತೆ ಮುಂದುವರೆದಿದೆ. ಸರಕಾರವು ಶೀರ್ಘದಲ್ಲೇ ಪೋಷಕರ ಸಭೆಕರೆದು ವಾಸ್ತವಾಂಶ ತಿಳಿಸಬೇಕಿದೆ, ಒಟ್ಟಾರೇಯಾಗಿ ಕಣ್ವ ಸಮೂಹದ ಆರ್ಥಿಕ ಅವ್ಯವಹಾರದ ಸಮಸ್ಯೆಯು ಕಣ್ವಶಾಲೆಯ ೪೧೭ಜನ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯಕ್ಕೆ ಸಂಕಷ್ಟ ತಂದಿದೆ, ಸರಕಾರವು ತಕ್ಷಣ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡಬೇಕಿದೆ ಎಂದು ಪೋಷಕರು ಒತ್ತಾಯ ಮಾಡಿದ್ದಾರೆ.
ಶಿಕ್ಷಣ ಇಲಾಖೆ ಆಯುಕ್ತರ ಆದೇಶ:-
ಕಣ್ವ ಇಂಟರ್ನ್ಯಾಷನಲ್ ಶಾಲೆಯು ಐಸಿಎಸ್ಸಿ ಪಠ್ಯಕ್ರಮ ಆಧಾರಿತ ಶಾಲೆ. ಕಣ್ವ ಶಾಲೆಯ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಆಡಳಿತಾಧಿಕಾರಿ ನೇಮಿಸಲು ಸಾಧ್ಯವಿಲ್ಲ. ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಕಣ್ವ ಶಾಲೆಯ ಮಕ್ಕಳ ಪೋಷಕರ ಸಭೆಕರೆದು ವಾಸ್ತವಂಶ ಗಮನಕ್ಕೆ ತರಬೇಕು. ಶಿಕ್ಷಣ ಇಲಾಖೆಯ ನಿಯಮಾನುಸಾರ ಸದರಿ ಶಾಲೆ ಮುಂದುವರೆಸಲು ಅವಕಾಶವಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಧುಗಿರಿ ಡಿಡಿಪಿಐಗೆ ೨೦೨೫ರ ಮಾ.೧೭ರಂದೇ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಮಾಡಿದ್ದಾರೆ.
ಮಕ್ಕಳಿಗೆ ಉಚಿತ ಶಿಕ್ಷಣದ ಆಮೀಷ:-ಕಣ್ವ ಇಂಟರ್ ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಯು ಮಕ್ಕಳ ಪೋಷಕರಿಗೆ ಸಮಸ್ಯೆಯ ವಿಷಯ ತಿಳಿಸದೇ ೨೦೨೫-೨೬ರ ಶೈಕ್ಷಣಿಕ ವರ್ಷಕ್ಕೆ ಶುಲ್ಕವನ್ನು ಕಟ್ಟಿಸಿಕೊಳ್ಳದೇ ಉಚಿತ ಭೋದನೆಯ ವದಂತಿ ಹರಿದಾಡಿವೆ. ಶಾಲೆಯಿಂದ ಮಕ್ಕಳಿಗೆ ಬರುವ ವಾಹನಗಳು ಶುಲ್ಕ ಈ ವರ್ಷ ಉಚಿತ ಎಂಬ ಮಾತು ಕೇಳಿ ಬಂದಿವೆ, ಇದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು ಶಿಕ್ಷಣ ಇಲಾಖೆ ತುರ್ತುಕ್ರಮ ಕೈಗೊಳ್ಳಬೇಕಿದೆ.
417 ಜನ ಮಕ್ಕಳ ಭವಿಷ್ಯವೇ ಅತಂತ್ರ:-ಕಣ್ವ ಸಮೂಹದ ಜಿ.ನಾಗೇನಹಳ್ಳಿ ಶ್ರೀಕಣ್ವ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ೨೦೨೪-೨೫ನೇ ಸಾಲಿನ ಅನ್ವಯ ನರ್ಸರಿಯಿಂದ ೧೦ನೇ ತರಗತಿ ವರೇಗೆ ೪೧೭ಜನ ಮಕ್ಕಳು ಐಸಿಎಸ್ಸಿ ಪಠ್ಯಕ್ರಮ ಅನುಸಾರ ವ್ಯಾಸಂಗ ಮಾಡುತ್ತಿದ್ದಾರೆ, ಮುಖ್ಯಶಿಕ್ಷಕನ ಹುದ್ದೆಯು ಈಗ ಖಾಲಿಯಿದ್ದು ೨೧ಜನ ಶಿಕ್ಷಕರಿದ್ದಾರೆ ಶಾಲೆಯ ಜಮೀನು ಮತ್ತು ಕಟ್ಟಡವೇ ಸರಕಾರಕ್ಕೆ ಮುಟ್ಟುಗೋಲು ಆದಮೇಲೆ ೨೦೨೫-೨೬ರ ಶೈಕ್ಷಣಿಕ ವರ್ಷದಲ್ಲಿ ಮತ್ತೇ ಜಮೀನು ಸಮಸ್ಯೆ ಎದುರಾದರೇ ಮಕ್ಕಳ ಶಿಕ್ಷಣದ ಪಾಡೇನು ಎಂಬುದೇ ಯಕ್ಷಪ್ರಶ್ನೆ.
ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಸ್ಕೂಲ್ ಮುಚ್ಚಿಸಲು ಶಿಕ್ಷಣ ಇಲಾಖೆ ಆಯುಕ್ತರಿಂದ ನಿರ್ದೇಶನವಿದೆ. ಕಣ್ವಶಾಲೆಯಲ್ಲಿ ಏ.೩ರಂದು ಪೋಷಕರ ಸಭೆಕರೆಯಲು ಬಿಇಓ ಶಾಲೆಯ ಕಾರ್ಯದರ್ಶಿಗೆ ಮಾ.೨೮ರಂದು ನೊಟೀಸ್ ನೀಡಿದ್ದರು, ಸಭೆಕರೆಯಲು ಮಾನ್ಯ ಉಚ್ಚ ನ್ಯಾಯಾಲಯತಡೆ ನೀಡಿದೆ.-ಗಿರೀಜಾ.ಬಿ.ಹೆಚ್. ಡಿಡಿಪಿಐ. ಮಧುಗಿರಿ
ಸರಕಾರದ ಜೊತೆ ಕಣ್ವಶಾಲೆ ೩೦ವರ್ಷ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ, ಕಣ್ವ ಶಾಲೆ ಇರುವ ಜಮೀನು ಸರಕಾರದ ಆಸ್ತಿ, ಈಗ ಕಣ್ವ ಶಾಲೆ ಮಾತ್ರ ನಮ್ಮದು ಅಷ್ಟೆ., ಶಾಲೆಯ ಜಮೀನು ಮತ್ತು ಕಟ್ಟಡದ ಸಮಸ್ಯೆ ಇರೋದು ಸತ್ಯ, ಸರಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕಾಲಾವಕಾಶ ನೀಡಿದೆ.ರಜತ್.ಪಿ.ಗೌಡ. ಕಾರ್ಯದರ್ಶಿ. ಕಣ್ವ ಎಜುಕೇಷನ್ಟ್ರಸ್ಟ್. ಬೆಂಗಳೂರು.
