ಕೊರಟಗೆರೆ : ಸರಣಿ ವಿದ್ಯುತ್ ಅವಘಡ : ಶಾಸಕರಿಂದ ಅಧಿಕಾರಿಗಳ ಸಭೆ

ಕೊರಟಗೆರೆ  : 

      ಇತ್ತೀಚೆಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಎರಡು ವಿದ್ಯುತ್ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ಷೇತ್ರದ ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಎಚ್ಚರಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾllಜಿ. ಪರಮೇಶ್ವರ ತಿಳಿಸಿದರು.

      ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲ್ಲೂಕು ಅಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರದ ವಿದ್ಯುತ್ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಅಪಘಾತಗಳ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಅದೇ ರೀತಿಯಾಗಿ ಕ್ಷೇತ್ರದ ಕೋರಾ ಹೋಬಳಿಯ ಕರಿಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಯು ಸಾವನ್ನಪ್ಪಿ ಇಬ್ಬರು ಗಾಯಗೊಂಡು ಚೇತರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಹೊಳವನಹಳ್ಳಿ ಹೋಬಳಿಯ ಚಿಕ್ಕಸಾಗ್ಗೆರೆ ಗ್ರಾಮ ವ್ಯಾಪ್ತಿಯಲ್ಲಿ ವೃದ್ದೆಯು ಮೃತಪಟ್ಟು ನಾಲ್ಕು ಎಮ್ಮೆಗಳು ಸಾವನ್ನಪ್ಪಿರುತ್ತ್ತವೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲಿಸಲು ಈ ಸಭೆಯನ್ನು ನಡೆಸಲಾಗಿದೆ. ಇದಕ್ಕೆ ತಾಲ್ಲೂಕಿನ ಮೂವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‍ಗಳು ಹಾಗೂ ಮುಖ್ಯ ಎಂಜಿನಿಯರ್‍ಗಳು ಹಾಜರಿದ್ದು ಅವರಿಂದ ವಿವರಗಳನ್ನು ಪಡೆದಿರುತ್ತೇನೆ ಎಂದರು.

ಸಾವು ಸಂಭವಿಸಿದ ಎರಡೂ ಕಡೆ ಸಾರ್ವಜನಿಕರು ಇಲಾಖೆಯವರ ಮೇಲೆ ಹಲವು ದೂರುಗಳನ್ನು ನೀಡಿದ್ದು, ಮೇಲ್ನೋಟಕ್ಕೆ ಅವುಗಳು ಆ ರೀತಿ ಕಂಡು ಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಮೃತಪಟ್ಟಂತಹ ವೃದ್ದೆ ರೈತ ಮಹಿಳೆಯಾಗಿದ್ದು, ಆಕೆಗೆ ಕಂದಾಯ ಇಲಾಖೆ ಮತ್ತು ಬೆಸ್ಕಾಂ ಇಲಾಖೆ ಎರಡೂ ಕಡೆಯಿಂದ ಪರಿಹಾರ ನೀಡುವ ಕೆಲಸವನ್ನು ಮಾಡಲಾಗಿದ್ದು, ಇದರಲ್ಲಿ ಹೆಚ್ಚು ಪರಿಹಾರ ನೀಡುವ ಇಲಾಖೆಯನ್ನು ಅವರು ಆಯ್ದುಕೊಳ್ಳಬಹುದು. ಅದೇ ರೀತಿಯಾಗಿ ಮೃತಪಟ್ಟ ಎಮ್ಮೆಗಳಿಗೆ ಪಶು ಇಲಾಖೆ ಮತ್ತು ಬೆಸ್ಕಾಂ ಇಲಾಖೆಗಳಲ್ಲಿ ಪರಿಹಾರ ಕೊಡಿಸಲಾಗುವುದು. ಇದರ ಆಯ್ಕೆಯು ಸಹ ಕುಟುಂಬಸ್ಥರಿಗೆ ಬಿಟ್ಟಿರುತ್ತದೆ. ಅದೇ ರೀತಿಯಾಗಿ ಮೃತಪಟ್ಟ ಬಾಲಕನಿಗೆ ಬೆಸ್ಕಾಂ ಇಲಾಖೆಯಿಂದ ಪರಿಹಾರ ಕೊಡಿಸಲಾಗುವುದು. ಆದರೆ ಈ ಘಟನೆಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸಲು ಇಲಾಖೆಗೆ ಆದೇಶಿಸಲಾಗಿದೆ ಎಂದರು.

      ತಾಲ್ಲೂಕಿನಲ್ಲಿ 36 ಶಾಲೆಗಳ ಅಕ್ಕ-ಪಕ್ಕದಲ್ಲಿ ವಿದ್ಯುತ್ ತಂತಿ ಹಾದುಹೋಗಿರುವುದು, ಪಕ್ಕದಲ್ಲಿ ಟ್ರಾನ್ಸ್‍ಫಾರ್ಮರ್ ಇರುವುದು ಪರಿಶೀಲನೆಯಲ್ಲಿ ತಿಳಿದುಬಂದಿದ್ದು, ಅತಿ ಶೀಘ್ರವಾಗಿ ಅವುಗಳನ್ನು ಬದಲಿಸುವ ಕಾರ್ಯವನ್ನು ಮಾಡಲಿದ್ದಾರೆ. ಕೆಲವು ಕಡೆ ತಂತಿ ಬದಲಿಸುವ ಆಸ್ಪದವಿಲ್ಲದಿದ್ದರೆ ಗುಣಮಟ್ಟದ ಇನ್ಸುಲಿನ್ ವೈರ್‍ಗಳನ್ನು ಹಾಕಲಿದ್ದಾರೆ. ಕ್ಷೇತ್ರದಲ್ಲಿ ಬೆಸ್ಕಾಂ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕ್ಷೇತ್ರದ ಫೀಲ್ಡ್ ಆಫೀಸರ್‍ಗಳಿಗೆ ಅವರ ಕಾರ್ಯವ್ಯಾಪ್ತಿಯಲ್ಲಿ ಬರುವ ದುರಸ್ತಿ ಕೆಲಸಗಳನ್ನು ಇನ್ನು 15 ದಿನಗಳಲ್ಲಿ ಮುಗಿಸುವಂತೆ ಆದೇಶಿಸಲಾಗಿದೆ. ತಾಲ್ಲೂಕಿನಲ್ಲಿ 2020-2021 ನೆ ಸಾಲಿನಲ್ಲಿ 391 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2021-22 ನೆ ಸಾಲಿಗೆ ಕ್ಷೇತ್ರದಲ್ಲಿ 12 ಸಾವಿರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಪೂರ್ಣಗೊಳಿಸಲಿದ್ದಾರೆ ಎಂದರು.
ನಾನು ಉಪಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ತಾಲ್ಲೂಕಿನ ತುಂಬಾಡಿ, ಐಕೆ ಕಾಲನಿ, ಮಾವತ್ತೂರುಗಳಲ್ಲಿ ಮೂರು ಉಪವಿದ್ಯುತ್ ಸ್ಥಾವರಗಳನ್ನು ಮಂಜೂರು ಮಾಡಿಸಿದ್ದು, ಸ್ಥಳ ವಿವಾದಗಳನ್ನು ಬಗೆಹರಿಸಿ ಅವುಗಳ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲಿದ್ದಾರೆ ಎಂದರು.

ಸಭೆಯಲ್ಲಿ ತಹಸೀಲ್ದಾರ್ ನಾಹಿದಾ ಜಮ್‍ಜಮ್, ಸಿಪಿಐ ಸಿದ್ದರಾಮೇಶ್ವರ, ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎಲ್.ಲೋಕೇಶ್, ಮಧುಗಿರಿ ಕಾರ್ಯಪಾಲಕ ಎಂಜಿನಿಯರ್ ಸೈಯದ್ ಅಹಮದ್, ಜಗದೀಶ್, ಎಇಇಗಳಾದ ಮಲ್ಲಣ್ಣ, ಮೆಹಬೂಬ್ ಶರೀಫ್, ಎಇ ಪ್ರಸನ್ನಕುಮಾರ್, ಮಲ್ಲಯ್ಯ, ಯೋಗೇಶ್ ಸೇರಿದಂತೆ ಬ್ಲಾಕ್ ಅಧಿಕಾರಿಗಳು ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link