ಕೊರಟಗೆರೆ :
ನೂತನ ತಹಶೀಲ್ದಾರ್ ಅವರು ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಹೋಗಿ ಸಾರ್ವಜನಿಕರಿಗೆ ನಾಕಬಂದಿ ಹಾಕಿದ ಘಟನೆ ಗುರುವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಜರುಗಿದೆ.
ಗುರುವಾರ ಪಟ್ಟಣದ ತಾಲ್ಲೂಕು ಕಚೇರಿಗೆ ಹೋಗಿದ್ದ ಸಾರ್ವಜನಿಕರಿಗೆ ತಹಶೀಲ್ದಾರ್ ಹಾಗೂ ಸಿಬ್ಬಂದಿಯಿಂದ ಶಾಕ್ ಕಾದಿತ್ತು. ಬೆಳಗ್ಗೆ ಕಚೇರಿಯ ಕರ್ತವ್ಯದ ಸಮಯದಲ್ಲಿ ಮುಖ್ಯದ್ವಾರದ ಗೇಟನ್ನು ಮುಚ್ಚಲಾಗಿತ್ತು. ಸಾರ್ವಜನಿಕರಿಗೆ ತಮ್ಮ ದ್ವಿಚಕ್ರ ವಾಹನಗಳನ್ನು ಆಚೆ ರಸ್ತೆಯ ಪಕ್ಕಕ್ಕೆ ಹಾಕಿ ಬನ್ನಿ, ಒಳಗಡೆ ಹೋಗಲು ಕಾರಣ ತಿಳಿಸಿ, ನೋಂದಯಿಸಿ ಹೋಗಿ ಎಂದು ತಾಲ್ಲೂಕು ಕಚೇರಿ ಗೇಟ್ನಲ್ಲಿಯೇ ಸಿಬ್ಬಂದಿ ಸೂಚನೆ ನೀಡುತ್ತಿದ್ದರು. ನೂತನ ತಹಶೀಲ್ದಾರ್ ಅವರು ತಾಲ್ಲೂಕು ಕಚೇರಿಯಲ್ಲಿ ಅನಗತ್ಯವಾಗಿ ವಾಹನಗಳ ಪಾರ್ಕಿಂಗ್ ತಡೆಯಲು, ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಈ ನಿಯಮವನ್ನು ಜಾರಿ ಮಾಡಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು. ಈ ಬಗ್ಗೆ ಕೆಲವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಇನ್ನೂ ಕೆಲವರು ಈ ಕ್ರಮದಿಂದ ಮಧ್ಯವರ್ತಿಗಳಿಗೆ ಪರಿಣಾಮ ಬೀರದೆ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಯಿತು ಎಂದು ದೂರಿದ್ದಾರೆ.
ಶೇ.70 ರಷ್ಟು ಕೆಲಸ ಮಧ್ಯವರ್ತಿಗಳಿಂದ :
ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದು ಖಚಿತ. ಆದರೆ ತಹಶೀಲ್ದಾರ್ ಅವರು ಕೇವಲ ತಾಲ್ಲೂಕು ಕಚೇರಿ ಗೇಟ್ ಹಾಕಿಸಿದರೆ ಮಧ್ಯವರ್ತಿಗಳ ಹಾವಳಿ ನಿಲ್ಲುವುದಿಲ್ಲ. ಕಚೇರಿಯಲ್ಲಿ ಬಹುತೇಕ ಮಧ್ಯವರ್ತಿಗಳು, ರಾಜಕಾರಣಿಗಳ, ಜಾತಿ ಮುಖಂಡರ ಹಾಗೂ ಕೆಲ ಪತ್ರಿಕೆಯವರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಕೊಡು ಕೊಳ್ಳುವ ಸಂಬಂಧವಿದ್ದು, ಹಣ ನೀಡಿ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಅಧಿಕಾರಿಗಳೂ ಸಹ ಮಧ್ಯವರ್ತಿಗಳಿಗೆ ಬಹುತೇಕ ಹೊಂದಿಕೊಂಡಿದ್ದಾರೆ, ನೇರವಾಗಿ ತಮ್ಮ ಕೆಲಸವನ್ನು ತಾವೇ ಮಾಡಿಸಿಕೊಳ್ಳುವ ಜನರು ಶೇ.30 ರಷ್ಟಿದ್ದರೆ, ಹಣ ನೀಡದೆ ಕೆಲಸ ಮಾಡಿಸಿಕೊಳ್ಳುವವರು ಕೇವಲ ಶೇ.2 ರಷ್ಟು ಸಿಗಬಹುದು. ಉಳಿದ ಶೇ.70 ರಷ್ಟು ಸಾರ್ವಜನಿಕ ಕೆಲಸಗಳು ಮಧ್ಯವರ್ತಿಗಳಿಂದಲೇ ಪೂರ್ಣಗೊಳ್ಳುತ್ತಿವೆ.
ಕಡತ ವಿಲೇವಾರಿಗೆ ಆದ್ಯತೆ ನೀಡಲಿ :
ತಾಲ್ಲೂಕಿನಲ್ಲಿ 250 ಗ್ರಾಮಗಳಿದ್ದು, 32 ಕಂದಾಯ ವೃತ್ತಗಳಿವೆ. ಈ ವೃತ್ತಗಳಿಗೆ ಗ್ರಾಮ ಸಹಾಯಕನಿಂದ ಹಿಡಿದು, ವಿಎ, ಆರ್ಐ, ಅಧಿಕಾರಿಗಳು ಸೇರಿದಂತೆ ಹಲವು ಹಂತಗಳಲ್ಲಿ ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ಆದರೆ ಗ್ರಾಮಗಳಲ್ಲಿರುವ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಮಧ್ಯವರ್ತಿಗಳನ್ನು ತಡೆಯುವುದು ತಹಶೀಲ್ದಾರರಿಂದ ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರ ಬದಲು ತಾಲ್ಲೂಕು ಕಚೇರಿ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಹಲವು ವರ್ಷ, ತಿಂಗಳುಗಳಿಂದ ಅನಗತ್ಯವಾಗಿ ಬಾಕಿ ಇರುವ ರೈತರ ಮತ್ತು ಸಾರ್ವಜನಿಕರ ಕಡತಗಳನ್ನು ಮೊದಲು ವಿಲೇವಾರಿ ಮಾಡಲಿ ನಂತರ ತಮ್ಮ ಅಧಿಕಾರಿಗಳನ್ನು ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಮಾಡದಂತೆ ಆದೇಶಿಸಲಿ ಎಂದಿದ್ದಾರೆ.
ರೈತರಿಗೆ ಸಂಕಷ್ಟ :
ತಾಲ್ಲೂಕು ಕಚೇರಿಯಲ್ಲಿ ಬಹುತೇಕ ಸಂಕಷ್ಟಕ್ಕೆ ಒಳಗಾಗಿರುವುದು ರೈತರು. ಪಹಣಿ ತಿದ್ದುಪಡಿ ಪ್ರಕರಣಗಳೇ ಇದಕ್ಕೆ ಕಾರಣ. ಬಹುತೇಕ ತಾಲ್ಲೂಕು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಭೂಮಾಪನಾ ಇಲಾಖೆಯ ತಿಳುವಳಿಕೆ ಕಡಿಮೆ ಇದ್ದು, ಉದಾಹರಣೆಗೆ ತಾಲ್ಲೂಕಿನ ಕಸಬಾ ಹೋಬಳಿಯ ಗೌರಗಾನಹಳ್ಳಿ ಸ.ನಂ.21 ರಕುಂಭೀ ನಾರಾಯಣಾಚಾರ್ (84) ಅವರು ಪಹಣಿ ತಿದ್ದುಪಡಿಗಾಗಿ ಮೂರು ವರ್ಷಗಳಿಂದ ತಾಲ್ಲೂಕು ಕಚೇರಿಗೆ ಅಲೆದಿದ್ದಾರೆ. ಇವರಿಂದ ಕೆಲ ಗ್ರಾಮಲೆಕ್ಕಿಗರು ಸಾವಿರಾರು ಹಣ ಪಡೆದು ಕೆಲಸ ಮಾಡಿಕೊಟ್ಟಿಲ್ಲ, ತದನಂತರ ಇವರು ಖುದ್ದಾಗಿ ಭೂಮಾಪನಾ ಕಚೇರಿಗೆ ಹೋಗಿ ಎಲ್ಲಾ ದಾಖಲೆಗಳನ್ನು ತುಮಕೂರಿನ ಡಿಡಿಎಲ್ಆರ್ ಕಚೇರಿಯಿಂದ ತಿದ್ದುಪಡಿ ಮಾಡಿಸಿ ಕೊರಟಗೆರೆ ತಾಲ್ಲೂಕು ಕಚೇರಿಗೆ ಪಹಣಿ ತಿದ್ದುಪಡಿಗೆ 2020 ರ ಅಕ್ಟೋಬರ್ ಕೊನೆಯ ದಿನದಲ್ಲಿ ಸಲ್ಲಿಸಿ 10 ತಿಂಗಳಾದರೂ ಇಲ್ಲಿಯವರೆಗೂ ಈ ತಿದ್ದುಪಡಿ ಪ್ರಕರಣ ತಾಲ್ಲೂಕು ಕಚೇರಿಯಲ್ಲಿ ಆಗಿಲ್ಲ. ಕಾರಣ ಇಲ್ಲಿನ ಸಿಬ್ಬಂದಿಯವರು ಹಣಕ್ಕಾಗಿ ಈ ಕಡತವನ್ನು ಹಾಗೆ ಇಟ್ಟುಕೊಂಡಿದ್ದಾರೆ.
ಮದ್ಯವರ್ತಿಗಳ ತಡೆಗೆ ಬೇಕಿದೆ ಸೂಕ್ಷ್ಮತೆ :
ತಹಶೀಲ್ದಾರರು ಇಂತಹ ಪ್ರಕರಣಗಳನ್ನು ತಿಂಗಳಿಗೊಮ್ಮೆ ಪರಿಶೀಲಿಸಿ ಅದರ ಕೆಲಸ ಮಾಡಿಕೊಡಬೇಕು ಇಲ್ಲವೇ ವಿಲೇ ಮಾಡಬೇಕು, ಇಂತಹ ಉದಾಹರಣೆಗಳು ತಾಲ್ಲೂಕು ಕಚೇರಿಯಲ್ಲಿಯೇ ಸಾಕಷ್ಟಿವೆ, ತಹಶೀಲ್ದಾರರು ಗುರುವಾರ ತೆಗೆದುಕೊಂಡ ನಿರ್ಣಯ ಉತ್ತಮವಾಗಿದ್ದರೂ ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎನ್ನುವುದರಲ್ಲಿ ಸಫಲರಾಗಿಲ್ಲ. ಮೊದಲು ಒಳಗಡೆ ಇರುವ ಸಾಕಷ್ಟು ನ್ಯೂನತೆಗಳನ್ನು ಮಾರ್ಪಾಡು ಮಾಡಲಿ, ನಂತರ ಹೊರಗಡೆ ಬರುವುದು ಸೂಕ್ತ. ಪ್ರಸ್ತುತ ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜನರಿಗೆ ತಮ್ಮ ವಾಹನಗಳನ್ನು ರಸ್ತೆಯಲ್ಲಿ ಹಾಕುವುದು ಅತೀ ತೊಂದರೆಯಾಗಿದ್ದು, ಇದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ತಹಶೀಲ್ದಾರ್ ಅವರು ಮದ್ಯವರ್ತಿಗಳ ತಡೆಗೆ ಸೂಕ್ಷ್ಮತೆ ಅರಿಯಬೇಕು. ಅದರ ಬದಲು ಪ್ರಮುಖ ಗೇಟ್ಗೆ ಬೀಗ ಹಾಕುವುದು ಸಮರ್ಪಕ ಕಾರ್ಯವಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
